“ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣದ ಬಗ್ಗೆ ಈ ಹಿಂದೆ ಹತ್ತು-ಹಲವಾರು ಸಂಘಟನೆಗಳು ಸೇರಿ ಸುಮಾರು ವರ್ಷಗಳಿಂದ ಈ ಬಗ್ಗೆ ಹೋರಾಟ ಮಾಡುತ್ತ ಬಂದಿವೆ. ಸರಕಾರ ಸ್ಪಂದನೆ ಮಾಡದಿರುವುದು ದುರಂತ” ಎಂದು ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠೆ ಬೇಸರ ವ್ಯಕ್ತಪಡಿಸಿದರು.
ಹಾವೇರಿ ಜಿಲ್ಲೆಯ ಬ್ಯಾಡಗಿ ಪಟ್ಟಣದ ತಹಸೀಲ್ದಾರ್ ಕಚೇರಿ ಎದುರು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗವತಿಯಿಂದ ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆ ಅಗಲೀಕರಣ ಮಾಡಬೇಕೆಂದು ತಹಸೀಲ್ದಾರರಿಗೆ ಮನವಿ ಸಲ್ಲಿಸಿ ಮಾತನಾಡಿದರು.
“ಮುಖ್ಯ ರಸ್ತೆ ಅಗಲೀಕರಣಕ್ಕೆ ಸರಕಾರ ಸ್ಪಂದಿಸದೆ ಹೋದಾಗ ಬ್ಯಾಡಗಿ ಪಟ್ಟಣದಲ್ಲಿ ಸ್ಥಳೀಯರು ಸೇರಿದಂತೆ ರೈತ ಸಂಘಟನೆಗಳು, ಕನ್ನಡ ಪರ ಸಂಘಟನೆಗಳು ಹಾಗೂ ಇನ್ನಿತರೆ ಹತ್ತು ಹಲವಾರು ಸಂಘಟನೆಗಳು ಸೇರಿಕೊಂಡು ಬ್ಯಾಡಗಿ ಪಟ್ಟಣವನ್ನು ಸಂಪೂರ್ಣ ಬಂದ್ ಮಾಡುವ ಮುಖಾಂತರ ಸರಿ ಸುಮಾರು ಹದಿನೈದು ದಿನಗಳ ಕಾಲ ಪ್ರತಿಭಟನೆಗೆ ಇಳಿದಿದ್ದವು” ಎಂದು ಹೇಳಿದರು.
“ಈ ಹೋರಾಟಕ್ಕೆ ಮಣಿದ ಸರ್ಕಾರ ಹೋರಾಟಗಾರರನ್ನು ಮನವೊಲಿಸಿ ಕೂಡಲೇ ಬ್ಯಾಡಗಿ ಪಟ್ಟಣದ ಮುಖ್ಯ ರಸ್ತೆಯನ್ನು ಅಗಲೀಕರಣ ಮಾಡುವುದರ ಜೊತೆ ಅಕ್ಕ-ಪಕ್ಕದಲ್ಲಿರುವ ಮನೆ ಮಳಿಗೆಗಳಿಗೆ ಸೂಕ್ತ ಪರಿಹಾರವನ್ನು ನೀಡಿ ಮುಖ್ಯ ರಸ್ತೆ ಅಗಲೀಕರಣ ಮಾಡುವುದಾಗಿ ಭರವಸೆಯನ್ನು ನೀಡಿ ಹೋರಾಟವನ್ನು ಹಿಂಪಡೆಯುವಂತೆ ಮಾಡಿದ್ದರು. ಆದರೆ ಇದುವರೆಗೆ ರಸ್ತೆ ಅಗಲೀಕರಣ ಆಗದೇ ಇರುವುದು ಖಂಡನೀಯ” ಎಂದು ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷ ಯಲ್ಲಪ್ಪ ಮರಾಠ ನುಡಿದರು.
ಕರವೇ ಸ್ವಾಭಿಮಾನಿ ಬಳಗ ತಾಲ್ಲೂಕ ಅಧ್ಯಕ್ಷ ಬಸವರಾಜ ಪಟ್ಟಣಶೆಟ್ಟಿ ಮಾತನಾಡಿ, “ಈ ಕುರಿತು ಈಗಾಗಲೇ ಅನೇಕ ಹೋರಾಟಗಳು ಆಗಿವೆ. ಕೂಡಲೇ ರಸ್ತೆ ಅಗಲೀಕರಣವನ್ನು ಹದಿನೈದು ದಿನಗಳ ಒಳಗಾಗಿ ಪ್ರಾರಂಭಗೊಳ್ಳಬೇಕು. ಆರಂಭಗೊಳ್ಳದೆ ಹೋದರೆ ಮುಂದಿನ ದಿನಗಳಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಸೇರಿದಂತೆ ಅನೇಕ ಸಂಘ, ಸಂಸ್ಥೆಗಳ ಜೊತೆಗೂಡಿ ಬ್ಯಾಡಗಿ ಪಟ್ಟಣವನ್ನು ಬಂದ್ ಮಾಡುವ ಮುಖಾಂತರ ಮತ್ತೆ ಪ್ರತಿಭಟನೆಗೆ ಮುಂದಾಗಬೇಕಾಗುತ್ತದೆ” ಎಂದು ಎಚ್ಚರಿಕೆ ನೀಡಿದರು.
ಈ ಸುದ್ದಿ ಓದಿದ್ದೀರಾ? ಹಾವೇರಿ | ದೌರ್ಜನ್ಯ ತಡೆಗೆ ಕ್ರಮ ವಹಿಸಿ ಬದಲಾವಣೆ ತನ್ನಿ: ಜಿಲ್ಲಾಧಿಕಾರಿ ಸೂಚನೆ
ಮನವಿ ಸಂದರ್ಭದಲ್ಲಿ ರಾಜ್ಯ ಕಾರ್ಯಾಧ್ಯಕ್ಷ ಯೂಸೂಫ ಸೈಕಲಗಾರ, ಜಿಲ್ಲಾ ಮಹಿಳಾ ಅಧ್ಯಕ್ಷೆ ಗೀತಾಬಾಯಿ ಲಮಾಣಿ, ಬ್ಯಾಡಗಿ ತಾಲ್ಲೂಕ ಮಹಿಳಾ ಘಟಕದ ಅಧ್ಯಕ್ಷೆ ಮಹಬೂಬಿ ಕೊಪ್ಪಳ, ತಾಲ್ಲೂಕ ಯುವ ಘಟಕದ ಅಧ್ಯಕ್ಷ ಶಿವನಗೌಡ ಗಂಟೆಗೌಡ್ರ, ಹಾವೇರಿ ತಾಲ್ಲೂಕ ಅಧ್ಯಕ್ಷ ರಾಜಾಭಕ್ಷ ಮಾನೇಗಾರ, ರವಿ ಮಾಮನಿ, ಹೊನ್ನೂರಸಾಬ ಕೊಪ್ಪಳ ಇನ್ನೂ ಅನೇಕರು ಉಪಸ್ಥಿತರಿದ್ದರು.





