ಬೆಳಗಾವಿ ಚಳಿಗಾಲದ ಅಧಿವೇಶ ಪ್ರಾರಂಭವಾದ ಹಿನ್ನಲೆಯಲ್ಲಿ ಎಂಇಎಸ್ ಪುಂಡರು ಮತ್ತು ಶಿವಸೇನೆ ಪುಂಡರು ಸೇರಿದಂತೆ ಕರ್ನಾಟಕದ ಬಸ್ಸುಗಳನ್ನು ತಡೆದು ಜೈ ಮಹಾರಾಷ್ಟ್ರ ಎಂದು ಕರ್ನಾಟಕದ ಬಸ್ಸುಗಳ ಮೇಲೆ ಸ್ಟಿಕ್ಕರ್ ಅಂಟಿಸಿ ಪುಂಡರು ಉದ್ಧಟತನ ಮೆರೆಯುತ್ತಿದ್ದಾರೆ. ಎಂಇಎಸ್ ಹಾಗೂ ಶಿವಸೇನೆ ಪುಂಡರನ್ನು ರಾಜ್ಯದಿಂದ ಗಡಿಪಾರು ಮಾಡುವಂತೆ ಹಾವೇರಿ ಪಟ್ಟಣದಲ್ಲಿ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಪ್ರತಿಭಟನೆ ನಡೆಸಿತು.
ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಳಗ ಜಿಲ್ಲಾಧ್ಯಕ್ಷರು ಯಲ್ಲಪ್ಪ ಮರಾಠೆ ಮಾತನಾಡಿ, “ಕನ್ನಡಿಗರ ತಾಳ್ಮೆಯನ್ನು ಪರೀಕ್ಷಿಸುತ್ತಿದ್ದಾರೆ. ಎಂಇಎಸ್ ಪುಂಡರು ಕನ್ನಡ ನಾಡಿನ ಅನ್ನ ತಿಂದು, ಕರ್ನಾಟಕದ ಬಸ್ಸುಗಳ ಮೇಲೆ ಜೈ ಮಹಾರಾಷ್ಟ್ರ ಎಂದು ಸ್ಟಿಕ್ಕರ್ ಅಂಟಿಸಿ ತಮ್ಮ ಉದ್ಧಟತನ ಮುಂದುವರೆಸಿದ್ದಾರೆ. ಕೂಡಲೇ ರಾಜ್ಯ ಸರ್ಕಾರ ಇಂತಹ ನಾಡ ದ್ರೋಹಿ ಪುಂಡರಿಗೆ ರಾಜ್ಯದಿಂದ ಗಡಿಪಾರು ಮಾಡುವುದರ ಜೊತೆಗೆ ಎಂಇಎಸ್ ಮೇಲೆ ನಿಷೇಧ ಹೇರಬೇಕು” ಎಂದು ಒತ್ತಾಯಿಸಿದರು.
“ಕ್ರಮ ಕೈಗೊಲ್ಲದಿದ್ದರೆ ಕರ್ನಾಟಕ ರಕ್ಷಣಾ ವೇದಿಕೆ ಸ್ವಾಭಿಮಾನಿ ಬಳಗ ಸೇರಿದಂತೆ ಎಲ್ಲಾ ಕನ್ನಡ ಪರ ಸಂಘಟನೆಗಳು ಸೇರಿ ಎಂಇಎಸ್ ಪುಂಡರನ್ನು ಬಗ್ಗು ಬಡಿಯಲು ಮುಂದಾಗಬೇಕಾಗುತ್ತದೆ. ಹಾಗಾಗಿ ಸರ್ಕಾರ ಕೂಡಲೇ ಇದನ್ನು ಗಂಭೀರವಾಗಿ ಪರಿಗಣಿಸಿ ನಾಡ ದ್ರೋಹಿ ಎಂಇಎಸ್ ಮತ್ತು ಶಿವಸೇನೆ ಸಂಘಟನೆಯನ್ನು ನಿಷೇಧ ಮಾಡುವುದರ ಜೊತೆಗೆ ಭಾಗಿಯಾದ ಪುಂಡರನ್ನು ರಾಜ್ಯದಿಂದ ಗಡಿ ಪಾರು ಮಾಡಬೇಕು” ಎಂದು ಒತ್ತಾಯಿಸಿದರು.
ಪ್ರತಿಭಟನೆಯಲ್ಲಿ ಕರವೇ ಸ್ವಾಭಿಮಾನಿ ಬಳಗ ರಾಜ್ಯ ಉತ್ತರ ಕರ್ನಾಟಕ ಕಾರ್ಯಧ್ಯಕ್ಷರು ಯೂಸುಫ್ ಸೈಕಲಗಾರ, ತಾಲ್ಲೂಕು ಅಧ್ಯಕ್ಷರು ರಾಜಾಭಕ್ಷ ಮಾನೇಗಾರ, ಜಿಲ್ಲಾ ಮಹಿಳಾ ಅಧ್ಯಕ್ಷರು ಗೀತಾ ಲಮಾಣಿ, ಜಿಲ್ಲಾ ಗೌರವ ಅಧ್ಯಕ್ಷರು ಪ್ರಕಾಶ ಡೊಂಬರೆ, ಜಿಲ್ಲಾ ಉಪಾಧ್ಯಕ್ಷರು ಪ್ರದೀಪ್ ಗೌಡರ, ಮುಖಂಡರು ಬಸವರಾಜ ಪಟ್ಟಣಶೆಟ್ಟಿ, ಯೂಸುಫ್ ಕಿಲ್ಲೆದಾರ ಸೇರಿದಂತೆ ಇನ್ನೂ ಅನೇಕರು ಭಾಗವಹಿಸಿದ್ದರು.





