ರಸ್ತೆ ದಾಟುತ್ತಿದ್ದ ವೇಳೆ ಚಿರತೆಗೆ ವಾಹನ ಡಿಕ್ಕಿ ಹೊಡೆದ ಪರಿಣಾಮ ಚಿರತೆ ಸ್ಥಳದಲ್ಲೇ ಸಾವನ್ನಪ್ಪಿರುವ ಘಟನೆ ಹಾವೇರಿ ಜಿಲ್ಲೆಯ ಶಿಗ್ಗಾಂವಿ ತಾಲೂಕಿನ ಕೋಣಕೆರೆ ಗ್ರಾಮದ ಬಳಿ ನಡೆದಿದೆ.
ಮೂರು ವರ್ಷದ ಚಿರತೆಮರಿ ರಸ್ತೆ ದಾಟುತ್ತಿದ್ದ ವೇಳೆ ವಾಹನ ಸವಾರರು ಹಿಟ್ ಆಂಡ್ ರನ್ ಮಾಡಿ ಹೋಗಿದ್ದಾರೆ. ಅರಣ್ಯ ಪ್ರದೇಶದಲ್ಲಿ ನಿಧಾನವಾಗಿ ಚಲಿಸಬೇಕಾಗಿದ್ದ ವಾಹನ ಜೋರಾಗಿ ಹೋಗಿ ಡಿಕ್ಕಿ ಹೊಡೆದಿದ್ದರಿಂದ ಚಿರತೆ ಮುಖಕ್ಕೆ ಬಲವಾದ ಪೆಟ್ಟು ಬಿದ್ದಿದ್ದು, ಗಂಭೀರವಾಗಿ ಗಾಯಗೊಂಡು ಸಾವನ್ನಪ್ಪಿದೆ.
ಘಟನೆಯ ಬಳಿಕ ಅಪರಿಚಿತ ವಾಹನದ ಪತ್ತೆಗಾಗಿ ಇಲಾಖೆ ಸಿಬ್ಬಂದಿ, ಪೊಲೀಸರು ಶೋಧ ಮಾಡುತ್ತಿದ್ದಾರೆ. ಸ್ಥಳಕ್ಕೆ ಶಿಗ್ಗಾಂವಿ ಅರಣ್ಯ ಇಲಾಖೆ ಸಿಬ್ಬಂದಿ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ತಡಸ ಪೊಲೀಸ್ ಠಾಣೆಯ ವ್ಯಾಪ್ತಿಯಲ್ಲಿ ಪ್ರಕರಣ ನಡೆದಿದೆ.
ಈ ಸುದ್ದಿ ಓದಿದ್ದೀರಾ? ಧಾರವಾಡ | ಡಾ. ಎಂ. ಎಂ. ಕಲಬುರ್ಗಿಯವರು ಕನ್ನಡ ಪಾಂಡಿತ್ಯ ಪರಂಪರೆಯ ಗಣ್ಯ ವಿದ್ವಾಂಸರು: ಡಾ. ಆರ್. ಎಂ. ಕಲ್ಲನಗೌಡರ
ಘಟನೆಗೆ ಸಂಬಂಧಿಸಿದಂತೆ ಈ ದಿನ.ಕಾಮ್ ತಡಸ ಪೊಲೀಸ್ ಠಾಣೆಯನ್ನು ಸಂಪರ್ಕಿಸಿದೆಯಾದರೂ ಕರೆಗೆ ಲಭ್ಯವಾಗಿಲ್ಲ.
ಹಾವೇರಿಯ ಈ ಚಿರತೆ ಸಾವು ಕೇವಲ ಒಂದು ಘಟನೆಯಲ್ಲ. ಮಾನವ-ಪ್ರಾಣಿ ಸಂಘರ್ಷದ ಸಂಕೇತ. ಹಾವೇರಿ ಮತ್ತು ಚಿಕ್ಕಮಗಳೂರು ಭಾಗಗಳಲ್ಲಿ ಒಟ್ಟರೆಯಾಗಿ ಈಗಾಗಲೇ 15ಕ್ಕೂ ಅಧಿಕ ಚಿರತೆಗಳು ಸಾವನ್ನಪ್ಪಿರುವ ವರದಿ ಇದೆ. ವಾಹನ ಸವಾರರು ಅರಣ್ಯಪ್ರದೇಶಗಳಲ್ಲಿ ಸಂಚರಿಸುವಾಗ ಎಚ್ಚರಿಕೆ ವಹಿಸಬೇಕು. ಸರ್ಕಾರವು ಹೆದ್ದಾರಿಗಳಲ್ಲಿ ಪ್ರಾಣಿ ಸಂರಕ್ಷಣಾ ಕ್ರಮಗಳನ್ನು(ಉದಾ: ಅಂಡರ್ಪಾಸ್) ತ್ವರಿತಗೊಳಿಸಬೇಕು. ಇಲ್ಲದಿದ್ದರೆ, ಕರ್ನಾಟಕದ ಚಿರತೆ ಸಂಖ್ಯೆ(ಸುಮಾರು 1,200) ಇನ್ನಷ್ಟು ಕಡಿಮೆಯಾಗುತ್ತದೆ.





