“ಸರಕಾರ ಮದ್ಯ ಮಾರಾಟ ನಿಯಂತ್ರಣ ಮಾಡಬೇಕು. ಹಾಗೂ ನಮ್ಮ ದೇಶದ ಸಂವಿಧಾನದ ಆರ್ಟಿಕಲ್ 47 ರಂತೆ ದೇಶ ಮಧ್ಯ ನಿಷೇಧದತ್ತ ಸಾಗಬೇಕು” ಎಂದು ಮದ್ಯ ನಿಷೇಧ ಆಂದೋಲನ-ಕರ್ನಾಟಕ ವತಿಯಿಂದ ಹಾವೇರಿ ಜಿಲ್ಲೆಯ ಶಿಗ್ಗಾವಿ ಪಟ್ಟಣದಲ್ಲಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ಮದ್ಯ ನಿಷೇಧ ಆಂದೋಲನ ಮುಖಂಡರು ನಿಂಗಮ್ಮ ಮಾತನಾಡಿ, “ಮದ್ಯ ನಿಷೇಧ ಆಂದೋಲನವನ್ನು ಕಳೆದ ಹತ್ತು ವರ್ಷಗಳಿಂದ ಹಲವಾರು ಪ್ರಗತಿಪರ ಸಂಘಟನೆಗಳು ರೈತ, ದಲಿತ, ಕಾರ್ಮಿಕ ಸಂಘಟನೆಗಳು ಬೆಂಬಲಿಸುತ್ತ ಬಂದಿವೆ” ಎಂದರು.
“ಹರಿಯಾಣ, ಮಹಾರಾಷ್ಟ್ರ ಹಾಗೂ ಇತರ ಹಲವಾರು ರಾಜ್ಯಗಳಲ್ಲಿ ಮಹಿಳಾ ಗ್ರಾಮ ಸಭೆಗಳಿಗೆ ಪರಮಾಧಿಕಾರ ಕೊಡಲಾಗಿದೆ. ಇಲ್ಲಿಯ ಪಂಚಾಯತ್ ಕಾನೂನಿನಂತೆ ರಾಜ್ಯ ಸರ್ಕಾರಗಳು ಯಾವುದೇ ಒಂದು ಮದ್ಯದ ಅಂಗಡಿಗೆ ಪರವಾನಿಗೆ ಕೊಡಲು ಅಥವಾ ರದ್ದು ಮಾಡಲು ಮಹಿಳಾ ಗ್ರಾಮ ಸಭೆಯಲ್ಲಿ ಒಪ್ಪಿಗೆ ದೊರೆಯಬೇಕು. ಮಹಿಳಾ ಗ್ರಾಮಸಭೆಯ ಠರಾವಿಗೆ ಮಾನ್ಯತೆ ನೀಡಲೇಬೇಕು. ಕರ್ನಾಟಕದ ಪಂಚಾಯತ್ ರಾಜ್ ಕಾನೂನಿನಲ್ಲಿ ಈ ತರದ ಒಂದು ಅಂಶ 2016ರ ತನಕ ಇತ್ತು. ಆದರೆ ಆ ಸಮಯದಲ್ಲಿ ಇದ್ದ ಸರಕಾರ ಇದನ್ನು ತೆಗೆದು ಹಾಕಿತು” ಎಂದು ಹೇಳಿದರು.
“ಒಂದು ಕಡೆ ಪರವಾನಗಿ ಪಡೆದ ಅಂಗಡಿಗಳ ಸಮಸ್ಯೆಯಾದರೆ, ಅದಕ್ಕಿಂತ ಹೆಚ್ಚು, ಮನೆ ಮನೆಗಳಲ್ಲಿ, ಪಾನ್ ಶಾಪ್, ಕಿರಾಣ ಅಂಗಡಿ, ಗೂಡಂಗಡಿಗಳಲ್ಲಿ ಅಕ್ರಮ ಮದ್ಯ ಮಾರಾಟವಾಗುತ್ತಿದ್ದು, ಸಮಾಜವನ್ನು ಕೆಟ್ಟ ದಾರಿಗೆ ಒಯ್ಯುತ್ತಿದೆ. ಹಳ್ಳಿಗಳಲ್ಲಿ ಸಣ್ಣ ಸಣ್ಣ ಮಕ್ಕಳು ಮದ್ಯ ಸೇವನೆ ಆರಂಭಿಸಿದ್ದಾರೆ. ಇದೇ ಪದ್ಧತಿ ಮುಂದುವರೆದರೆ ಕರ್ನಾಟಕ ರಾಜ್ಯವೂ ಪಂಜಾಬ್ ರೀತಿಯಲ್ಲಿ ಒಂದು ಹಂತದ ಯುವ ಪೀಳಿಗೆಯನ್ನು ಕಳೆದುಕೊಳ್ಳುವುದು ನಿಶ್ಚಿತ” ಎಂದರು.
“ಹಾಗಾಗಿ ನಮ್ಮ ಬೇಡಿಕೆ ಇಷ್ಟೇ. ಪ್ರತಿ ಹಳ್ಳಿಯಲ್ಲಿ ಮಹಿಳೆಯರ ಜಾಗೃತ ಸಮಿತಿಗಳನ್ನು ರಚಿಸಿ ಈ ಸಮಿತಿಗೆ ಅರೆ ನ್ಯಾಯಿಕ ಅಧಿಕಾರ (quasi judiciary power) ಕೊಡಬೇಕು. ಯಾಕಂದರೆ ಕಳೆದ ಹತ್ತು ವರ್ಷಗಳಲ್ಲಿ ವೇದಿಕೆ ಹಲವಾರು ಹಳ್ಳಿಗಳಿಂದ ಹೆಸರು ಸಮೇತ ಆಕ್ರಮ ಮದ್ಯ ಮಾರಾಟಗಾರರ ಪಟ್ಟಿಯನ್ನು ಪೊಲೀಸ್ ಹಾಗೂ ಅಬಕಾರಿ ಇಲಾಖೆಗೆ ಕೊಟ್ಟು ಬಂದಿದ್ದಾರೆ. ಆದರೆ ಯಾವುದೇ ಕ್ರಮ ತೆಗೆದುಕೊಂಡಿಲ್ಲ. ಬದಲಿಗೆ ವರ್ಷದಿಂದ ವರ್ಷಕ್ಕೆ ಆಕ್ರಮ ಮಾರಾಟ ಹೆಚ್ಚುತ್ತಿದೆ” ಎಂದು ಕಿಡಿಕಾರಿದರು.
“ಈ ಎರಡು ಬೇಡಿಕೆಗಳನ್ನು ಸರ್ಕಾರ ತಕ್ಷಣ ಚರ್ಚಿಸಿ ಕ್ರಮ ಕೈಗೊಲ್ಲಬೇಕು. ಇಲ್ಲವಾದಲ್ಲಿ ಕರ್ನಾಟಕದ ಎಲ್ಲಾ ಜಿಲ್ಲೆಗಳಿಂದ ಸಾವಿರಾರು ಸಂಖ್ಯೆಯಲ್ಲಿ ಮಹಿಳೆಯರು 25 ನವಂಬರ್ 2025 ರಂದು ಬೆಂಗಳೂರಲ್ಲಿ ಅನಿರ್ಧಿಷ್ಟಾವಧಿ ಸತ್ಯಾಗ್ರಹ ಮಾಡುವ ಪರಿಸ್ಥಿತಿ ಬರುತ್ತದೆ. ತಾವು ತಕ್ಷಣ ಈ ಬೇಡಿಕೆಗಳನ್ನು ಸಚಿವರು ಹಾಗೂ ಮುಖ್ಯಮಂತ್ರಿಗಳ ಗಮನಕ್ಕೆ ತರಬೇಕು ಎಂದು ಒತ್ತಾಯಿಸಿದರು.
ಮನವಿ ಸಂದರ್ಭದಲ್ಲಿ ಮಹಿಳಾ ಕಾರ್ಯಕರ್ತರು ಉಪಸ್ಥಿತರಿದ್ದರು.





