“ವಿದ್ಯಾರ್ಥಿಗಳೇ ನಮ್ಮ ಭವಿಷ್ಯದ ಬೆಳಕು. ಅವರ ಎದೆಯಲ್ಲಿ ಪ್ರೀತಿ, ವಿಶ್ವಾಸ, ಕರುಣೆ, ಸಹನೆ, ಸಹಿಷ್ಣುತೆ ಇತ್ಯಾದಿ ಮೌಲ್ಯಗಳನ್ನು ಬಿತ್ತಿ ಅಧ್ಯಯನದಲ್ಲಿ ತೊಡಗುವಂತೆ ಮಾಡಬೇಕಿದೆ. ಇದೆಲ್ಲವೂ ಸಾಹಿತ್ಯದ ಓದಿನಿಂದ ಮಾತ್ರ ಸಾಧ್ಯ. ಆದ್ದರಿಂದ ವಿದ್ಯಾರ್ಥಿ ಸಮುದಾಯದಲ್ಲಿ ಸಾಹಿತ್ಯದ ಅಭಿರುಚಿಯನ್ನು ಬೆಳೆಸಬೇಕಾದರೆ, ನಮ್ಮ ಸಾಹಿತ್ಯ ಚಟುವಟಿಕೆಗಳು ವಿದ್ಯಾರ್ಥಿ ಕೇಂದ್ರಿತವಾಗಿರಬೇಕು” ಎಂದು ಹಾವೇರಿ ಜಿಲ್ಲಾ ಕನ್ನಡ ಸಾಹಿತ್ಯ ಪರಿಷತ್ತಿನ ಅಧ್ಯಕ್ಷ ಲಿಂಗಯ್ಯ ಹಿರೇಮಠ ಕರೆ ನೀಡಿದರು.
ಹಾವೇರಿ ಪಟ್ಟಣದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ‘ಚಕೋರ ಸಾಹಿತ್ಯ ವಿಚಾರ ವೇದಿಕೆ’, ಹಾವೇರಿ ಹಾಗೂ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜು ಸಂಯುಕ್ತ ಆಶ್ರಯದಲ್ಲಿ ವಿದ್ಯಾರ್ಥಿಗಳ ಕವಿಗೋಷ್ಠಿ ಹಾಗೂ ವಿಶೇಷ ಉಪನ್ಯಾಸ’ ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ರುಚಿ ಬೆಳೆಸಿದರೆ ಭವಿಷ್ಯದ ಉತ್ತಮ ಓದುಗರು ಮತ್ತು ಸಾಹಿತಿಗಳನ್ನ ಸೃಷ್ಟಿಸಿದಂತಾಗುತ್ತದೆ. ಈ ಮೂಲಕ ಉತ್ತಮ ವ್ಯಕ್ತಿತ್ವದ ಪ್ರಜೆಗಳನ್ನು ನಿರ್ಮಿಸಲು ಸಾಧ್ಯ. ಇಂತಹ ಮಹತ್ವದ ಕೆಲಸ ಮಾಡುತ್ತಿರುವ ಚಕೋರ ಸಾಹಿತ್ಯ ವೇದಿಕೆಯ ಪ್ರಯತ್ನ ಅಭಿನಂದನೀಯ. ಈ ಚಟುವಟಿಕೆಗಳು ಮುಂದೆ ಜಿಲ್ಲೆಯಾದ್ಯಂತ ಪಸರಿಸಲಿ” ಎಂದು ಆಶಿಸಿದರು.
ಚಕೋರ ವೇದಿಕೆಯ ಜಿಲ್ಲಾ ಸಂಚಾಲಕ ಶೇಖರ ಭಜಂತ್ರಿ ಪ್ರಸ್ತಾವಿಕ ಮಾತನಾಡಿ, “ಸಾಹಿತ್ಯ ಅಕಾಡೆಮಿಯ ಕಾರ್ಯ ಅರ್ಥಪೂರ್ಣವಾಗಿದ್ದು, ಮೊದಲ ಸಮಾರಂಭ ನಮ್ಮ ಕಾಲೇಜಲ್ಲಿ ನಡೆದಿದ್ದು ಸಂತಸ ತಂದಿದೆ. ಚಕೋರ ಮೂಲಕ ಶಾಲಾ ಕಾಲೇಜುಗಳಲ್ಲಿನ ವಿದ್ಯಾರ್ಥಿಗಳ ಕನಸುಗಳಿಗೆ ಬಣ್ಣಗಳನ್ನು ತುಂಬಲಾಗುವುದು. ಅವರ ಆಲೋಚನೆಗಳು, ಬಯಸುವ ಸಮಾಜ, ಕುಟುಂಬ ಮತ್ತು ಕಲ್ಪನಾ ಲೋಕವನ್ನು ಅಕ್ಷರ ರೂಪಕ್ಕಿಳಿಸಲು ಬಯಸುವ ಸಾಹಿತ್ಯಸಕ್ತ ಹೊಸ ಪ್ರತಿಭೆಗಳನ್ನು ಹುಡುಕಿ ಸೂಕ್ತ ಮಾರ್ಗದರ್ಶನ ನೀಡಿಬೇಕು. ಹೊಸ ಪೀಳಿಗೆಯ ಸಾಹಿತಿಗಳನ್ನು ಸೃಷ್ಟಿಸುವ ಅನಿವಾರ್ಯತೆ ಇದೆ. ಯುವಶಕ್ತಿಯ ಭಾವನೆಗಳನ್ನು ಸಾಹಿತ್ಯ ಲೋಕ ಅರ್ಥ ಮಾಡಿಕೊಳ್ಳಬೇಕಿದೆ. ಆ ದಿಸೆಯಲ್ಲಿ ಚಕೋರ ವೇದಿಕೆ ಮೂಲಕ ವಿದ್ಯಾರ್ಥಿಗಳನ್ನು ಗುರಿಯಾಗಿಸಿ ಸೂಕ್ತ ಕಾರ್ಯಕ್ರಮಗಳನ್ನು ರೂಪಿಸಲಾಗುವುದು” ಎಂದರು.
ನಂತರ ವಿದ್ಯಾರ್ಥಿನಿ ಸಾನಿಯಾ ಗುಳೇದ ‘ಹೆಣ್ಣು’ ಕವಿತೆಯ ಮೂಲಕ ಹೆಣ್ಣಿನ ವಿವಿಧ ಪಾತ್ರಗಳನ್ನ ಪರಿಚಯಿಸಿದರು. ಗಿರಿಜಾ ಕಡೆಕೊಪ್ಪ ‘ಎಂದೂ ಮುಗಿಯದ ಮೌನ’ ಪ್ರೀತಿ ಪ್ರೇಮದ ಭಾವನೆಗಳನ್ನು ರಸವತ್ತಾಗಿ ಅರಳಿಸಿ ಮೌನವನ್ನು ಅಪ್ಪಿಕೊಳ್ಳುತ್ತಾಳೆ. ದಿವ್ಯ ಬಡಿಗೇರ ‘ನಾವೂ ಇಲ್ಲಿ ಬದುಕಬೇಕು’ ಕವಿತೆಯಲ್ಲಿ ಪ್ರಕೃತಿಯ ಮೇಲಿನ ದಬ್ಬಾಳಿಕೆಯನ್ನು ಖಂಡಿಸಿ ನಮಗೂ ಸುಂದರ ನಿಸರ್ಗ ಬೇಕು ಎನ್ನುತ್ತಾಳೆ. ಅಕ್ಷಿತಾ ಬೊಮ್ಮಣ್ಣನವರ ‘ಬದುಕು’ ಮೂಲಕ ವಲಸೆಯ ವೇದನೆ ಸಂಕಟಗಳನ್ನು ವಿವರಿಸುತ್ತಾ ಭರವಸೆಯ ಕಿರಣಗಳನ್ನ ಚಿಮ್ಮುತ್ತಾಳೆ. ತನುಷ ಪೂಜಾರ ‘ ಶಿಕ್ಷಣ’, ಸಂಜನಾ ಪೂಜಾರ ‘ಅಮ್ಮ’ ಮತ್ತು ‘ಗುರುಗಳು’, ಮೇಘ ಮುದುಕಣ್ಣವರ ‘ಗುರು’ ಅನಿತಾ ಕೋಣಿಯವರ ‘ ನಾಡು ನುಡಿ’, ಪ್ರತಿಕ್ಷ ತಮ್ಮಣ್ಣನವರ ‘ಪ್ರಕೃತಿ’, ಶಶಿಕಲಾ ರೆವೂರ “ಅಮ್ಮನಿಗೆ ಸಂಬಳ ಕೊಟ್ಟವರು ಯಾರು? “, ಗುರುನಂಜಪ್ಪ ಕುಂಬಾರಿ ‘ಇದೀಗ ಬಂದ ಸುದ್ದಿ’ ಕವಿತೆಗಳ ಮೂಲಕ ವಿಭಿನ್ನ ನೆಲೆಗಳಲ್ಲಿ ತಮ್ಮ ಅನುಭವವನ್ನು ತುಂಬಾ ಸುಂದರವಾಗಿ ಕವಿತೆಗಳಲ್ಲಿ ಕಟ್ಟಿಕೊಟ್ಟರು.
ಸಾಹಿತಿ ಸತೀಶ ಕುಲಕರ್ಣಿ ಕವಿತೆ ವಾಚಿಸಿದ ವಿದ್ಯಾರ್ಥಿನಿಯರನ್ನು ಅಭಿನಂದಿಸಿ ಇಂಥ ಹೊಸ ಪ್ರತಿಭೆಗಳು ಸಾಹಿತ್ಯ ಲೋಕಕ್ಕೆ ಬರಬೇಕು. ಸ್ವಾಗತಿಸುತ್ತ ವೇದಿಕೆಯ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತಪಡಿಸಿದರು.
ನಂತರ ಸಾಹಿತ್ಯ ಅಕಾಡೆಮಿಯ ಸದಸ್ಯರು ಡಾ. ಮಲ್ಲಿಕಾರ್ಜುನ ಮಾನ್ಪಡೆ ಮಾತನಾಡಿ, “ಇಂದಿನ ವಿದ್ಯಾರ್ಥಿಗಳಲ್ಲಿ ಪ್ರಭುದ್ಧತೆ ಬೆಳೆಯುತ್ತಿದೆ. ಸಮಾಜದಲ್ಲಿ ಘಟಿಸುವ ಘಟನೆಗಳನ್ನು ಸೂಕ್ಷ್ಮವಾಗಿ ಅವಲೋಕಿಸಬೇಕು. ಮನುಷ್ಯರೆಲ್ಲಾ ಒಂದೇ ಎನ್ನುವ ಭಾವ ಹೊಂದಬೇಕು. ಅನುಭವಗಳನ್ನು ಅಕ್ಷರದ ಮೂಲಕ ವ್ಯಕ್ತಪಡಿಸಬೇಕು. ಚಕೋರ ವೇದಿಕೆ ನಿಮಗೆ ಸೂಕ್ತವಾಗಿ ಸ್ಪಂದಿಸಲಿದೆ” ಎಂದು ಕರೆ ನೀಡಿದರು.
ನಂತರ ಕವಿಯತ್ರಿ ದೀಪಾ ಗೋನಾಳ ‘ ಹಾವೇರಿ ಜಿಲ್ಲೆಯ ಹೊಸ ಬರಹಗಾರರ ಸಾಹಿತ್ಯದ ನೆಲೆಗಳು’ ಕುರಿತು ಉಪನ್ಯಾಸ ನೀಡಿ, “ಬರಹಗಾರರಾಗಲು ಮೊದಲು ಸಂವೇದನಾ ಶೀಲರಾಗಿರಬೇಕು. ನಿರಂತರ ಅಧ್ಯಯನದ ಜೊತೆಗೆ ಕ್ರಿಯಾಶೀಲತೆ ಮತ್ತು ಸೃಜನಶೀಲತೆಯನ್ನ ಬೆಳೆಸಿಕೊಂಡರೆ ಯಾರು ಬೇಕಾದರೂ ಸಾಹಿತಿಗಳು ಆಗಬಹುದು. ಹಾವೇರಿ ಜಿಲ್ಲೆಯಲ್ಲಿ ಇತ್ತೀಚಿನ ಬರಹಗಾರರಲ್ಲಿ ಪ್ರಮುಖವಾಗಿ ಚಂ.ಸು.ಪಾಟೀಲ, ದೇವರಾಜ ಹುಣಸಿಕಟ್ಟೆ, ಶೇಖರ ಭಜಂತ್ರಿ, ಯೋಗೇಂದ್ರಾಚಾರ, ಅನಿತಾ ಮಂಜುನಾಥ, ನೇತ್ರಾವತಿ, ಸಂತೋಷ ಪೀಸೆ, ದ್ರಾಕ್ಷಾಯಿಣಿ ಉದಗಟ್ಟಿ, ನಾಗರಾಜ ಹುಡೇದ, ದೀಪಾ ಗೋನಾಳ, ಮಾರುತಿ ತಳವಾರ ಸೇರಿದಂತೆ ಅನೇಕರು ಜೀವಪರ, ಮೌಲ್ಯಗಳ ಪರವಾಗಿ ಮತ್ತು ಅನ್ಯಾಯಗಳ ವಿರುದ್ಧವಾಗಿ ಬರೆಯುತ್ತಾರೆ” ಎಂದು ಅಭಿಪ್ರಾಯಪಟ್ಟರು.
ಜಾನಪದ ವಿವಿಯ ಸಹಪ್ರಾಧ್ಯಾಪಕ ಡಾ.ಚಂದ್ರಪ್ಪ ಸೊಬಟಿ ‘ಜನಪದ ಸಾಹಿತ್ಯದಲ್ಲಿ ಸೌಹಾರ್ದತೆಯ ನೆಲೆಗಳು’ ವಿಷಯದ ಕುರಿತು ಉಪನ್ಯಾಸ ನೀಡಿದರು. ನಂತರ ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ ಅಧ್ಯಕ್ಷೀಯ ನುಡಿಗಳನ್ನಾಡಿ ವಿದ್ಯಾರ್ಥಿಗಳು ಇಂತಹ ಸಾಹಿತ್ಯ ಕಾರ್ಯಕ್ರಮಗಳ ಉಪಯೋಗ ಪಡೆದುಕೊಳ್ಳಬೇಕು” ಎಂದರು.
ವೇದಿಕೆ ಮೇಲೆ ಸಾಹಿತಿ ಶ್ರೀಹರ್ಷ ಸಾಲಿಮಠ, ಸಂಚಾಲಕ ಮಾರುತಿ ತಳವಾರ, ನಿರ್ಮಲ ಎಸ್. ಇದ್ದರು. ಮೊದಲಿಗೆ ಭೂಮಿಕಾ ಪ್ರಾರ್ಥಿಸಿದರು. ಮಾರುತಿ ತಳವಾರ ಸ್ವಾಗತಿಸಿದರು. ಉಪನ್ಯಾಸಕರಾದ ಈಶ್ವರಗೌಡ ಪಾಟೀಲ ನಿರೂಪಿಸಿದರೆ, ಬೀರಪ್ಪ ಕುರುಬರ ವಂದಿಸಿದರು.





