ದೇಶಕ್ಕಾಗಿ ಪ್ರಾಣ ತ್ಯಾಗ ಮಾಡಿದ ಗಾಂಧೀಜಿಯವರ ಹುತಾತ್ಮ ದಿನದಂದು ಅವರ ಪ್ರತಿಮೆಗಳು ಅನಾಥವಾಗಿ ನಿಂತಿವೆ. ಕನಿಷ್ಠ ಹೂಮಾಲೆ ಹಾಕಿ ಗೌರವಿಸದ ಅಧಿಕಾರಿಗಳು ಹಾಗೂ ಜನಪ್ರತಿನಿಧಿಗಳ ಅಸಡ್ಡೆ ಮತ್ತು ಬೇಜವಾಬ್ದಾರಿ ನಡೆಯು ಅಕ್ಷಮ್ಯವಾದುದು” ಎಂದು ಡಿವೈಎಫ್ಐ, ಎಸ್ಎಫ್ಐ, ಡಿಎಸ್ಎಸ್, ಡಿಎಚ್ಎಸ್, ಬಿಎಸ್.ಪಿ, ಕರ್ನಾಟಕ ರಾಜ್ಯ ರೈತ ಸಂಘಟನೆ ಹಾಗೂ ಅಲೆಮಾರಿ ಸಮುದಾಯ ಸಂಘಟನೆಗಳು ತೀವ್ರವಾಗಿ ಖಂಡಿಸಿವೆ.
ಹಾವೇರಿ ನಗರದ ಗಾಂಧೀಜಿ ಪ್ರತಿಮೆಗಳಿಗೆ ಸ್ಥಳೀಯ ನಗರಸಭೆ ಆಡಳಿತ ಹಾಗೂ ಜನಪ್ರತಿನಿಧಿಗಳು ಸೇರಿದಂತೆ ಗಾಂಧೀ ಅನುಯಾಯಿಗಳು ಎಂದು ಹೇಳಿಕೊಳ್ಳುವವರು ಕೂಡ ಕನಿಷ್ಠ ಗೌರವ ನೀಡದಿರುವುದು ಬಹಳ ನೋವಿನ ಸಂಗತಿ.
“ಗಾಂಧೀಜಿಯವರ ಹುತಾತ್ಮ ದಿನದಂದು ಪ್ರತಿಮೆಗಳನ್ನು ಸ್ವಚ್ಛಗೊಳಿಸಿ, ಅಲಂಕಾರ ಮಾಡಬೇಕೆಂದು ನಾಲ್ಕು ದಿನ ಮುಂಚಿತವಾಗಿಯೇ ನಗರಸಭೆಯ ಆಯುಕ್ತರನ್ನು ಭೇಟಿಯಾಗಿ ತಿಳಿಸಲಾಗಿತ್ತು. ಅದಾಗ್ಯೂ ನಗರಸಭೆಯ ಆಯುಕ್ತರು, ನಗರದಲಿರುವ ಗಾಂಧೀ ವೃತ್ತ ಹಾಗೂ ಹೊಸಮನಿ ಸಿದ್ದಪ್ಪ ಪ್ರೌಢ ಶಾಲಾ ಆವರಣದಲ್ಲಿರುವ ಗಾಂಧೀಜಿ ಪ್ರತಿಮೆಗಳು ಹಾಗೂ ಆವರಣವನ್ನು ಸ್ವಚ್ಛಗೊಳಿಸದೇ ಗಾಂಧೀಜಿಯನ್ನು ಅವಮಾನಿಸಿರುವಯದನ್ನು ಖಂಡಿಸಿದ್ದಾರೆ.
“ಗಾಂಧೀಜಿ ಪ್ರತಿಮೆಗಳನ್ನು ಸ್ವಚ್ಛಗೊಳಿಸಿ ಗೌರವಿಸಲು ಮನವಿ ಮಾಡಿದಾಗ್ಯೂ ಅಸಡ್ಡೆ ತೋರಿದ ನಗರಸಭೆಯ ಅಧಿಕಾರಿಗಳ ಮೇಲೆ ಜಿಲ್ಲಾಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು” ಎಂದು ಆಗ್ರಹಿಸುತ್ತವೆ.
ಗಾಂಧೀಜಿ ಹುತಾತ್ಮವಾದ ದಿನದಂದು ಪ್ರತಿವರ್ಷವೂ ಗೌರವ ಸಲ್ಲುವಂತಾಗಬೇಕು. ಮುಂದಿನ ಈ ರೀತಿಯಾಗದಂತೆ ಗಾಂಧೀಜಿ ಸೇರಿದಂತೆ ಸ್ವಾತಂತ್ರ್ಯ ಹೋರಾಟಗಾರರಿಗೆ ಗೌರವ ಸಲ್ಲುವಂತೆ ಜಿಲ್ಲಾಡಳಿತ, ಶಾಸಕರು, ನಗರಸಭೆಯ ಅಧಿಕಾರಿಗಳು ಸೂಕ್ತ ಕ್ರಮ ಕೈಗೊಳ್ಳಬೇಕು ಇಲ್ಲವಾದರೆ ಪ್ರಗತಿಪರ ಸಂಘಟನೆಗಳಿಂದ ಛೀಮಾರಿ ಹಾಕಿ ಪ್ರತಿಭಟನೆ ನಡೆಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ, ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ, ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಡಿಚ್ಎಸ್ ಜಿಲ್ಲಾ ಸಂಚಾಲಕ ವೀರಣ್ಣ ಗಡ್ಡಿಯವರ, ರೈತ ಸಂಘಟನೆ ಮುಖಂಡರು ಸುರೇಶ ಛಲವಾದಿ, ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷರು ಶೆಟ್ಟಿ ವಿಭೂತಿ ನಾಯಕ ಹಾಗೂ ಬಿಎಸ್ಪಿ ಜಿಲ್ಲಾಧ್ಯಕ್ಷ ಎಂ.ಕೆ ಮಕಬುಲ್ ಎಚ್ಚರಿಸಿದ್ದಾರೆ.





