“ನಮ್ಮ ನಾಡಿನಲ್ಲಿ ಕಂಪನಿ ನಾಟಕಗಳಿಂದ ಅನೇಕ ಕಲಾವಿದರು ಸಿನೆಮಾ ರಂಗಕ್ಕೆ ಹೋಗಿದ್ದಾರೆ. ಆದರೆ ರಾಜು ತಾಳಿಕೋಟೆ ಅವರು ತಮ್ಮ ಜವಾರಿ ಭಾಷೆಯ ಸಹಜ ಅಭಿನಯದಿಂದಾಗಿ ಜನ ಸಾಮನ್ಯರಿಗೆ ಆಕರ್ಷಣೀಯ ಕೇಂದ್ರವಾಗಿದ್ದರು. ಅಪ್ರತಿಮ ಪ್ರತಿಭೆಯಿಂದಾಗಿ ಸಿನೆಮಾ ರಂಗವು ಅವರನ್ನು ತೊಡಗಿಸಿಕೊಳ್ಳುವಂತ ಹಾಸ್ಯ ಕಲೆ ರಾಜು ತಾಳಿಕೋಟೆ ಅವರಲ್ಲಿತ್ತು. ಅವರ ಅಗಲಿಕೆ ರಂಗಭೂಮಿಗೆ ತುಂಬಲಾರದ ನಷ್ಟವಾಗಿದೆ. ಎಂದು ಹಿರಿಯ ಸಾಹಿತಿ ಸತೀಶ ಕುಲಕರ್ಣಿ ಅಭಿಪ್ರಾಯಪಟ್ಟರು.
ಹಾವೇರಿ ಪಟ್ಟಣದ ಪ್ರವಾಸಿ ಮಂದಿರದಲ್ಲಿ ಡಿವೈಎಫ್ಐ, ಎಸ್ಎಫ್ಐ, ಅಲೆಮಾರಿ ಸಮುದಾಯ ಸಂಘಟನೆ, ಡಿಎಸ್ಎಸ್, ಸಾಹಿತಿ ಕಲಾವಿದರ ಬಳಗ ಹಾಗೂ ಸಮಾನ ಮನಸ್ಕ ಪ್ರಗತಿಪರ ಸಂಘಟನೆಗಳು ಆಯೋಜಿಸಿದ್ದ ರಾಜು ತಾಳಿಕೋಟೆಯವರ ಶ್ರದ್ಧಾಂಜಲಿ ಸಭೆಯಲ್ಲಿ ಪಾಲ್ಗೊಂಡು ಮಾತನಾಡಿದರು.
“ನಾಟಕ ಕಂಪೆನಿಗಳು ಸಂಕಷ್ಟಕ್ಕೆ ಸಿಲುಕಿದಾಗೆಲ್ಲ ಆ ಕಂಪನಿಗಳು ಪುನಶ್ಚೇತನಗೊಳ್ಳಲು ರಾಜು ತಾಳಿಕೋಟೆ ಸದಾ ಶ್ರಮಿಸುತ್ತಿದ್ದರು. ಧಾರವಾಡ ರಂಗಾಯಣಕ್ಕೆ ನಿರ್ದೇಶಕರಾಗಿ ಆಯ್ಕೆಯಾಗಿ ಬಂದ ಮೇಲೆ ಒಳ್ಳೆಯ ರಂಗ ಚಟುವಟಿಕೆಗಳನ್ನು ಆಯೋಜಿಸಿದ್ದರಲ್ಲದೇ, ಉತ್ತಮ ಕಾರ್ಯಯೋಜನೆಗಳನ್ನು ಹಾಕಿಕೊಂಡಿದ್ದರು” ಎಂದರು.
ಡಿಎಸ್ಎಸ್ ರಾಜ್ಯ ಪ್ರಧಾನ ಕಾರ್ಯದರ್ಶಿ ಉಡಚಪ್ಪ ಮಾಳಗಿ ಮಾತನಾಡಿ, “ರಂಗಭೂಮಿಯಲ್ಲಿ ಸದಾ ಸಕ್ರಿಯವಾಗಿರುತ್ತಿದ್ದ ರಾಜು ತಾಳಿಕೋಟೆಯವರು ತಮ್ಮ ನಾಟಕಗಳ ಮೂಲಕ ಸಮಾಜಕ್ಕೆ ಒಳ್ಳೆಯ ಸಂದೇಶ ನೀಡುತ್ತಿದ್ದರು” ಎಂದರು.
ಡಿವೈಎಫ್ಐ ಜಿಲ್ಲಾ ಮುಖಂಡರಾದ ವಕೀಲ ನಾರಾಯಣ ಕಾಳೆ ಮಾತನಾಡಿ, “ಸಮಾಜದಲ್ಲಿರುವ ಬಡ ಜನ ವಿರೋಧಿ ರಾಜಕಾರಣವನ್ನು ತಮ್ಮ ನಾಟಕಗಳ ಮೂಲಕ ಜನತೆಗೆ ತಲುಪಿಸುತ್ತಿದ್ದರು. ಹಿರಿಯ ಕಲಾವಿದರು ಇನ್ನಷ್ಟು ಕಾಲ ಇರಬೇಕಿತ್ತು” ಎಂದರು.
ರಾಜ್ಯ ಅಲ್ಪ ಸಂಖ್ಯಾತರ ಆಯೋಗದ ಸದಸ್ಯರಾದ ಪರಿಮಳ ಜೈನ ಮಾತನಾಡಿ, “ರಾಜು ತಾಳಿಕೋಟೆಯವರು ರಂಗಭೂಮಿಯ ಗಟ್ಟಿ ಧ್ವನಿಯಾಗಿದ್ದರು. ಜನರ ಬದುಕಿನ ಪ್ರಶ್ನೆಗಳನ್ನು ವಿಡಂಬನೆಯ ಮೂಲಕ ಸ್ಪಷ್ಟವಾದ ಭಾಷೆಯಲ್ಲಿ ಹೇಳುತ್ತಿದ್ದರು. ಸಾಮಾನ್ಯ ಕುಡುಕನ ಪಾತ್ರದ ಮೂಲಕ ಸತ್ಯವನ್ನು ಸಾರಿದ ಮಹಾನ್ ಕಲಾವಿದರಾಗಿದ್ದರು” ಎಂದು ಕಂಬನಿ ಮಿಡಿದರು.
ಅಲೆಮಾರಿ ಸಮುದಾಯ ಸಂಘಟನೆಯ ಜಿಲ್ಲಾಧ್ಯಕ್ಷ ಶೆಟ್ಟಿ ವಿಭೂತಿ ನಾಯಕ, ಅಹಿಂದ ಮುಖಂಡರಾದ ವಕೀಲ ಬಸವರಾಜ ಹಾದಿಮನಿ, ರೈತ ಸಂಘಟನೆಯ ಜಿಲ್ಲಾ ಮುಖಂಡರಾದ ಸುರೇಶ ಛಲವಾದಿ, ಕವಿ ರಾಜೇಂದ್ರ ಹೆಗಡೆ ಅವರು ರಾಜು ತಾಳಿಕೋಟೆಯವರ ವ್ಯಕ್ತಿತ್ವವನ್ನು ಕೊಂಡಾಡಿದರು.
ಸಭೆಯ ಅಧ್ಯಕ್ಷತೆ ವಹಿಸಿದ್ದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ರಾಜು ತಾಳಿಕೋಟೆ ಮುಸ್ಲಿಂ ಸಮುದಾಯದಲ್ಲಿ ಜನಿಸಿದ್ದರೂ ಖಾಸ್ಗತೇಶ್ವರ ಮಠದ ಪರಮ ಭಕ್ತರಾಗಿದ್ದರು. ಕಲೆಯು ಜಾತಿ, ಮತಗಳನ್ನು ಮೀರಿದ್ದು ಎಂಬುದನ್ನು ಸಾಧಿಸಿ ತೋರಿದವರು. ಈ ನೆಲದ ಭಾವೈಕ್ಯತೆಯನ್ನು ತಮ್ಮ ಬದುಕಿನುದ್ದಕ್ಕೂ ಸಹಜವಾಗಿ ಉಸಿರಿಕೊಂಡು ಬಾಳಿದವರು ಅದ್ಭುತ ಕಲಾವಿದರು. ಇವರು ತಮ್ಮ ನಾಟಕಗಳ ಮೂಲಕ ಜನರ ಮನದಲ್ಲಿ ಸದಾ ಅಜರಾಮರಾಗಿರುತ್ತಾರೆ” ಎಂದರು.
ಈ ಸುದ್ದಿ ಓದಿದ್ದೀರಾ? RSS ನಿಷೇಧ; ಪ್ರಿಯಾಂಕ್ ಖರ್ಗೆ ಹೇಳುವುದರಲ್ಲಿ ತಪ್ಪೇನಿದೆ: ಸಿಎಂ ಸಿದ್ದರಾಮಯ್ಯ
ಪುಷ್ಪ ನಮನ ಹಾಗೂ ಶ್ರದ್ಧಾಂಜಲಿ: ಸಭೆಯಲ್ಲಿ ಅಗಲಿದ ರಾಜು ತಾಳಿಕೋಟೆಯವರ ಭಾವಚಿತ್ರಕ್ಕೆ ಪುಷ್ಪ ವೃಷ್ಠಿಗೈದು, ಎರಡು ನಿಮಿಷಗಳ ಕಾಲ ಮೌನಾಚರಣೆ ನಡೆಸಿ ಗೌರವ ಶ್ರದ್ಧಾಂಜಲಿ ಸಲ್ಲಿಸಲಾಯ್ತು.
ಪ್ರಾಸ್ತಾವಿಕವಾಗಿ ರಮೇಶ ತಳವಾರ ಮಾತನಾಡಿದರು. ಬಸವರಾಜ ಎಸ್ ಸ್ವಾಗತಿಸಿದರು. ಈ ಸಂದರ್ಭದಲ್ಲಿ ವಿವಿಧ ಸಂಘಟನೆಗಳ ಮುಖಂಡರಾದ ಖಲಂದರ್ ಅಲ್ಲಿಗೌಡ್ರ, ರೇಣುಕಾ ಕಹಾರ, ರಾಜಶೇಖರ ಮಾಳವಾಡ, ನಿಂಗರಾಜ ಪೂಜಾರ, ಉಮೇಶ ಮಹಾಂತ, ಧನುಷ್ ದೊಡ್ಮನಿ, ತೇಜಸ್ ದೊಡ್ಮನಿ, ಅನ್ವಿಕಾ ಆರ್.ಬಿ, ನಕ್ಷತ್ರ ಕಾಳೆ ಸೇರಿದಂತೆ ಇನ್ನಿತರರು ಇದ್ದರು.





