ಹಿಂದುಳಿದ ವರ್ಗದ ವಿದ್ಯಾರ್ಥಿಗಳ ವಿದ್ಯಾರ್ಥಿ ವೇತನ ವೇತನದಲ್ಲಿ ತಾರತಮ್ಯ ಹಾಗೂ ಅಲ್ಪ ಸಮುದಾಯ ವಿದ್ಯಾರ್ಥಿಗಳ ಫೇಲೋಶಿಪ್ ನೀಡುವಲ್ಲಿ ಸರಕಾರ ಮಾಡುತ್ತಿರುವ ದೋರಣೆಯನ್ನು ಖಂಡಿಸಿ ಎಸ್ಎಫ್ಐ ಕಾರ್ಯಕರ್ತರು ಹೊಸಮನಿ ಸಿದ್ದಪ್ಪ ವೃತ್ತದಲ್ಲಿ ಪ್ರತಿಭಟನೆ ನಡೆಸಿ ತಹಶೀಲ್ದಾರರಿಗೆ ಮನವಿ ಸಲ್ಲಿಸಿದರು.
ರಾಜ್ಯಾದ್ಯಂತ ಹೋರಾಟಕ್ಕೆ ಕರೆ ನೀಡಿದ ಭಾಗವಾಗಿ ನಗರದ ಸರ್ಕಾರಿ ಪದವಿ ಪೂರ್ವ ಮಹಾವಿದ್ಯಾಲಯ ದಿಂದ ಮೆರವಣಿಗೆ ಬಸ್ ನಿಲ್ದಾಣದ ಹೊಸಮನಿ ಸಿದ್ದಪ್ಪ ವೃತ್ತದವರೆಗೆ ವಿದ್ಯಾರ್ಥಿಗಳು ಬೃಹತ್ ಪ್ರತಿಭಟನಾ ಮೆರವಣಿಗೆ ನಡೆಸಿದರು.
ಈ ಪ್ರತಿಭಟನೆಯಲ್ಲಿ ಎಸ್ಎಫ್ಐ ಜಿಲ್ಲಾ ಸಹ ಕಾರ್ಯದರ್ಶಿ ಬಸವರಾಜ ಎಸ್ ಮಾತನಾಡಿ, “ಅಲ್ಪಸಂಖ್ಯಾತ, ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಹಾಗೂ ಹಿಂದುಳಿದ ವರ್ಗಗಳ ಸಮುದಾಯದ ಅಭಿವೃದ್ಧಿಗಾಗಿ ನಮ್ಮ ಸರ್ಕಾರ ಅನೇಕ ಯೋಜನೆಗಳನ್ನು ಜಾರಿಗೆ ಮಾಡಿದೆ ಎಂದು ಹೇಳುವ ನೀವುಗಳು ನಿಮ್ಮ ಸರ್ಕಾರದಲ್ಲಿ ಸದ್ದಿಲ್ಲದೆ ಅಹಿಂದ ವರ್ಗದ ವಿದ್ಯಾರ್ಥಿಗಳಿಗೆ ಪ್ರೋತ್ಸಾಹ ಧನ ಹಾಗೂ ಶುಲ್ಕ ಮರುಪಾವತಿ ಯೋಜನೆಗಳಿಗೆ ಕತ್ತರಿ ಬಿದ್ದಿದೆ” ಎಂದರು.
ಪರಿಶಿಷ್ಟ ಜಾತಿ, ಪರಿಶಿಷ್ಟ ಪಂಗಡ ಸಮುದಾಯದ 10ನೇ ತರಗತಿ ವಿದ್ಯಾರ್ಥಿಗಳಿಗೆ ಈ ಹಿಂದಿನ ಆದೇಶದಲ್ಲಿ ಶೇಕಡಾ 60 ರಿಂದ 74.99 ಫಲಿತಾಂಶದೊಂದಿಗೆ ಪ್ರಥಮ ಶ್ರೇಣಿಯಲ್ಲಿ ಪ್ರಥಮ ಭಾರಿಗೆ ಉತ್ತೀರ್ಣರಾದರೆ 7000 ರೂಪಾಯಿ ಪ್ರೋತ್ಸಾಹ ಧನ ಹಣವನ್ನು ಸಮಾಜ ಕಲ್ಯಾಣ ಇಲಾಖೆ ಮೂಲಕ ಕೊಡಲಾಗುತ್ತಿತ್ತು. ಈ ಶೈಕ್ಷಣಿಕ ವರ್ಷದಲ್ಲಿ ಪರಿಷ್ಕೃತ ಆದೇಶದಲ್ಲಿ ಶೇಕಡಾ 60 ರಿಂದ 74.99 ಫಲಿತಾಂಶಕ್ಕೆ ಇದ್ದ ಪ್ರೋತ್ಸಾಹ ಧನ ಯೋಜನೆ ರದ್ದು ಮಾಡಲಾಗಿದೆ. ಇದು ವಿದ್ಯಾರ್ಥಿಗಳ ವಿರೋಧಿ ನೀತಿ ಅಲ್ಲವೇ ಎಂದು ಸರಕಾರದ ನೀತಿಯನ್ನು ಪ್ರಶ್ನಿಸಿದರು.
ಎಸ್ಎಫ್ಐ ಜಿಲ್ಲಾ ಮುಖಂಡ ನೇಹಾಲ್ ಖಾನ್ ಗಂಗಾವತಿ ಮಾತನಾಡಿ, “ಅಲ್ಪಸಂಖ್ಯಾತರ ಕಲ್ಯಾಣ ಇಲಾಖೆಯಿಂದ ಈ ಹಿಂದೆ ಅಲ್ಪಸಂಖ್ಯಾತ ಸಮುದಾಯದ ವಿದ್ಯಾರ್ಥಿಗಳು ಪಿಎಚ್ಡಿ ಮಾಡಿದರೆ ಅವರಿಗೆ ಪ್ರತಿ ತಿಂಗಳು 25,000 ಸಾವಿರ ರೂಪಾಯಿ ಹಣವನ್ನು ಫೆಲೋಶಿಪ್ ಕೊಡುತ್ತಿದ್ದರು. ಅದನ್ನು ಕೋವಿಡ್ ಸಮಯದಲ್ಲಿ ಬಿಜೆಪಿ ಸರಕಾರ 10000 ಸಾವಿರ ರೂಪಾಯಿಕ್ಕೆ ಇಳಿಸಿತ್ತು. ಮುಖ್ಯಮಂತ್ರಿಗಳು ಸರಿಪಡಿಸಿ ಮತ್ತೆ ಪುನಃ 25000 ಸಾವಿರ ರೂಪಾಯಿ ಫೆಲೋಶಿಪ್ ಕೊಡಬೇಕು ಎಂದು ಆಗ್ರಹಿಸಿದರು.
ಇದನ್ನು ಓದಿದ್ದೀರಾ? ದೇವನಹಳ್ಳಿ ಕೆಐಎಡಿಬಿ ಭೂಸ್ವಾಧೀನ: ರೈತರಿಗೆ ಕೊಟ್ಟ ಮಾತು ಉಳಿಸಿಕೊಳ್ಳುವರೇ ಸಿದ್ದರಾಮಯ್ಯ?
ಈ ಸಂದರ್ಭದಲ್ಲಿ ಎಸ್ಎಫ್ಐ ಮುಖಂಡರಾದ ಅರ್ಜುನ್ ರಜಪುತ, ದೇವರಾಜ್ ಅರಕಸಾಲಿ, ಮಹೇಶ್ ಮರೋಳ, ಸುಲೇಮಾನ್ ಮತ್ತಿಹಳ್ಳಿ, ದುರ್ಗಪ್ಪ ಯಮ್ಮಿಯವರ , ಲಕ್ಷ್ಮಿ ಕೋರವರ, ಶೃತಿ ಆರ್ ಎಮ್, ಮುತ್ತು ಎಚ್, ವಿಜಯ ಶಿರಹಟ್ಟಿ, ಲಕ್ಷ್ಮೀ ಆರ್ ಕೆ, ಭಾವನ ಕೆ ಎಚ್, ಲಾವಣ್ಯ ಆರ್ ಡಿ, ಭವ್ಯ ಸೇರಿದಂತೆ ನೂರಾರು ವಿದ್ಯಾರ್ಥಿಗಳು ಪಾಲ್ಗೊಂಡಿದ್ದರು.





