“ಈ ಸಮಾವೇಶದ ಮೂಲಕ ಇವತ್ತು ಹೋರಾಟದ ಹೆಜ್ಜೆಗಳು ಆರಂಭವಾಗಿವೆ. ಮುಂದಿನ ದಿನಮಾನಗಳಲ್ಲಿ ಹೋರಾಟ ಮೂಲಕ ಬದಲಾವಣೆ ಆಗಲಿ. ಇಲ್ಲಿ ಕೇವಲ ಹಾಸ್ಟೆಲ್ ಸಮಸ್ಯೆ ಅಷ್ಟೇ ಅಲ್ಲ, ಶಿಕ್ಷಣ ವ್ಯವಸ್ಥೆಯ ವಿಷಯಗಳ ಕುರಿತು ಚರ್ಚೆ ಆಗಿದೆ” ಎಂದು ಸ್ವಾಗತ ಸಮಿತಿಯ ಅಧ್ಯಕ್ಷರು ಹಾಗೂ ರಾಜ್ಯ ಅಲ್ಪಸಂಖ್ಯಾತರ ಆಯೋಗದ ಸದಸ್ಯರು ಪರಿಮಳ ಜೈನ್ ಹೇಳಿದರು.
ಹಾವೇರಿ ಪಟ್ಟಣದ ಗುರು ಭವನದಲ್ಲಿ ಭಾರತ ವಿದ್ಯಾರ್ಥಿ ಫೆಡರೇಷನ್ ವತಿಯಿಂದ ಹಾಸ್ಟೆಲ್ ಗಳ ಬಲವರ್ಧನೆಗಾಗಿ ಹಾಸ್ಟೆಲ್ ವಿದ್ಯಾರ್ಥಿಗಳ ರಾಜ್ಯ ಮಟ್ಟದ ಸಮಾವೇಶದ ಸಮಾರೋಪದಲ್ಲಿ ಮಾತನಾಡಿದರು.
“ಇವತ್ತು ಕನ್ನಡ ಶಾಲೆಗಳು ಮುಚ್ಚುತ್ತಿವೆ. ಹಾಗಾಗಿ ಸಾರ್ವಜನಿಕ ಶಿಕ್ಷಣವಾಗಿ ಉಳಿಯಬೇಕು. ನಾವೆಲ್ಲರೂ ಈ ಕುರಿತು ಬದ್ದರಾಗಬೇಕು. ಸಮಾಜದ ಸುಧಾರಣೆಯಲ್ಲಿ ನಮ್ಮನ್ನು ತೊಡಗಿಸಿಗೋಳ್ಳೋಣ” ಎಂದರು.
ಸ್ವಾಗತ ಸಮಿತಿ ಸದಸ್ಯರು ಹಾಗೂ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ “ನಮ್ಮ ವಿದ್ಯಾರ್ಥಿ ಚಳವಳಿಗೆ ತವರು ಮನೆ ಹಾಸ್ಟೆಲ್ ಗಳು. ನಾವೆಲ್ಲರೂ ಹಾಸ್ಟೆಲ್ ನಲ್ಲಿ ಓದಿರುವವರೇ. ಎಸ್ಎಫ್ಐ ಸಂಘಟನೆ ರಾಜ್ಯದ ಎಲ್ಲ ಜಿಲ್ಲೆಯ ಹಾಸ್ಟೆಲ್ ಸಮಸ್ಯೆಗಳ ಕುರಿತು ಹೋರಾಟ ಮಾಡುತ್ತಲೇ ಬಂದಿದೆ” ಎಂದು ಸಮಾವೇಶದ ಸ್ವಾಗತ ಸಮಿತಿ ಸದಸ್ಯರು ಹಾಗೂ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಹೇಳಿದರು.
“ಈ ಹಿಂದೆ ಹೋರಾಟ ಮಾಡಿದ ಘಟನೆ ನೆನಪಿಸಿಕೊಂಡು ಮಾತನಾಡಿದ ಅವರು “ಸಮಾಜ ಕಲ್ಯಾಣ ಇಲಾಖೆಯ ಹಾಸ್ಟೆಲ್ ನಲ್ಲಿ ವಿದ್ಯಾರ್ಥಿಗಳಿಗೆ ಸರಿಯಾಗಿ ಊಟ ಸಿಗುತ್ತಿರಲಿಲ್ಲ. ಗುಣಮಟ್ಟದ ಆಹಾರ ಇರಲಿಲ್ಲ. ಅಂದಿನ ಶಾಸಕರು ನೆಹರು ಓಲೇಕಾರ ಅವರನ್ನು ಹಾಸ್ಟೆಲ್ ಸಮಸ್ಯೆ, ಸೌಲಭ್ಯಗಳನ್ನು ಕೇಳಿದ್ದಕ್ಕೆ ವಿದ್ಯಾರ್ಥಿಗಳನ್ನು ಹಾಸ್ಟೆಲ್ ನಿಂದ ಹೊರ ಹಾಕಿದರು. ಶಾಸಕರ ಮನೆಗೆ ಹೋದಾಗ ಮಾತು ಸೌಜನ್ಯದಿಂದ ಆರಂಭವಾಗಿತ್ತು. ಹೊರ ಹಾಕಿದ ವಿದ್ಯಾರ್ಥಿಗಳನ್ನು ಮತ್ತೆ ತೆಗೆದುಕೊಳ್ಳಬೇಕೆಂದು ಒತ್ತಾಯಿಸಿದಾಗ ನಮ್ಮನ್ನು ಜೈಲಿಗೆ ಹಾಕಿದರು” ಎಂದು ಹೇಳಿದರು.
“ಮರುದಿನ ಜೈಲಿಗೆ ಹಾಕಿದ್ದನ್ನು ಖಂಡಿಸಿ ಹಾವೇರಿಯಲ್ಲಿ ಎಸ್ ಎಫ್ ಐ ನೇತೃತ್ವದಲ್ಲಿ ದೊಡ್ಡ ಮಟ್ಟದ ಹೋರಾಟ ಸಿದ್ದಪ್ಪ ಕಂಬಳಿ ವೃತ್ತದಲ್ಲಿ ನಡೆಯಿತು. ಇದರ ಫಲವಾಗಿ ಬಿಜೆಪಿ ಸರಕಾರ ಮತ್ತು ಶಾಸಕರು ಮಣಿದು ಬಿಡುಗಡೆ ಜೊತೆಗೆ ಹೊರ ಹಾಕಿದ ವಿದ್ಯಾರ್ಥಿಗಳನ್ನು ಮತ್ತೆ ಹಾಸ್ಟೆಲ್ಗೆ ಸೇರಿಸಲಾಯಿತು” ಎಂದು ಹೇಳಿದರು.
“ರಾಣಿಬೆನ್ನೂರಿನಲ್ಲಿ ಹಾಸ್ಟೆಲ್ ವಿದ್ಯಾರ್ಥಿ ಕಟ್ಟಡದಿಂದ ಬಿದ್ದು ಸಾವನ್ನಪ್ಪಿದಾಗ, ಎಸ್ ಎಫ್ ಐ ಹೋರಾಟ ಮಾಡಿ, ಆ ವಿದ್ಯಾರ್ಥಿ ಕುಟುಂಬಕ್ಕೆ ಸರಕಾರದಿಂದ 25ಲಕ್ಷ ರೂ ಪರಿಹಾರ ಕೊಡಿಸಲಾಯಿತು” ಎಂದರು.
“ಈ ನಿಟ್ಟಿನಲ್ಲಿ ಎಸ್ ಎಫ್ ಐ ವಿದ್ಯಾರ್ಥಿಗಳಿಗಾಗಿ ಹೋರಾಟ ಮಾಡುತ್ತಾ ಬಂದಿದೆ. ಹಾಸ್ಟೆಲ್ ಸಮಸ್ಯೆಗಳ ಕುರಿತು ಇವತ್ತು ಸಮಾವೇಶ ಮಾಡಲಾಯಿತು. ಇಲ್ಲಿಂದ ಹೋದ ಮೇಲೆ ಹಾಸ್ಟೆಲ್ ಸಮಸ್ಯೆಗಳ ಕುರಿತು ಚಳವಳಿಗಳನ್ನು ರೂಪಿಸಬೇಕು, ಹೋರಾಟ ಮಾಡಬೇಕು” ಎಂದು ಕರೆ ನೀಡಿದರು.

ಹಿರಿಯ ಸಾಹಿತಿ ಸತೀಶ್ ಕುಲಕರ್ಣಿ ಮಾತನಾಡಿ, “ಎಸ್ ಎಫ್ ಐ ಹೋರಾಟಗಳನ್ನು ಗಮನಿಸುತ್ತ ಬಂದಿರುವ ನಾನು ಬಂಡಾಯ ಸಾಹಿತ್ಯ ಆಶಯಗಳನ್ನು ಒಳಗೊಂಡಿರುವ ಸಂಘಟನೆ ಆಗಿದೆ. ನಿಮ್ಮ ಯಾವುದೇ ಹೋರಾಟಗಳಿಗೆ ನಾವು ನಿಮ್ಮ ಜೊತೆಗೆ ಇರುತ್ತೇವೆ” ಎಂದು ಹೇಳಿದರು.
ಈ ಸುದ್ದಿ ಓದಿದ್ದೀರಾ? ಚಿತ್ರದುರ್ಗ | ಪುನೀತ್ ಸ್ಮರಣಾರ್ಥ ಆರ್ಯ ಈಡಿಗ ಸಂಘದಿಂದ ಪುಷ್ಪನಮನ ಹಾಗೂ ಉಪಹಾರ ವಿತರಣೆ
ಸಮಾವೇಶದ ಸಮಾರೋಪ ಸಮಾರಂಭದಲ್ಲಿ ಸ್ವಾಗತ ಸಮಿತಿ ಸದಸ್ಯರು ನಾಗರಾಜ ಕಾಳೆ, ಹರ್ಷ, ರೇಣುಕಾ ಕಹಾರ, ಸತೀಶ ಎಂ. ಬಿ, ಚಕೋರ ವೇದಿಕೆ ಸಂಚಾಲಕರು ಮಾರುತಿ ತಳವಾರ, ಎಸ್ ಎಫ್ ಐ ರಾಜ್ಯಾಧ್ಯಕ್ಷರು ಅಬ್ಲೀಕರ ಶಿವಪ್ಪ ಎನ್, ರಾಜ್ಯ ಕಾರ್ಯದರ್ಶಿ ವಿಜಯಕುಮಾರ ಟಿ. ಎಸ್. ಕೇಂದ್ರ ಸಮಿತಿ ಸದಸ್ಯರು ಸುಜಾತಾ ವೈ, ಕೇಂದ್ರ ಸಮಿತಿ ಸದಸ್ಯರು ಬಸವರಾಜ ಡಾ. ಬಸವರಾಜ ಗುಳೇದಾಳ, ಜಿಲ್ಲಾಧ್ಯಕ್ಷರು ಬಸವರಾಜ ಎಸ್ ಇನ್ನೂ ಅನೇಕರು ಉಪಸ್ಥಿತರಿದ್ದರು.





