“ದೇಶದ ಪ್ರತಿಯೊಬ್ಬ ನಾಗರಿಕರನ್ನು ಕಾನೂನು ಸಮಾನವಾಗಿ ನೋಡುತ್ತದೆ. ಎಲ್ಲರಿಗೂ ಜೀವಿಸುವ ಹಕ್ಕು ಇದೆ. ಮೂಲಭೂತ ಹಕ್ಕು ಮತ್ತು ಕರ್ತವ್ಯಗಳನ್ನು ನೀಡುವುದರ ಜೊತೆಗೆ ಸಮಾನ ಅವಕಾಶಗಳನ್ನು ಎಲ್ಲರಿಗೂ ಖಾತರಿಪಡಿಸುತ್ತದೆ ನಮ್ಮ ಸಂವಿಧಾನ. ಅದರ ಮೂಲ ತತ್ವವೇ ಸಾಮಾಜಿಕ ನ್ಯಾಯ ಆಗಿರುವುದರಿಂದ ಸರ್ವರೂ ಸಂವಿಧಾನ ಮತ್ತು ಕಾನೂನುಗಳ ಜ್ಞಾನ ಪಡೆದುಕೊಳ್ಳಬೇಕು” ಎಂದು ಹಾವೇರಿಯ ಹಿರಿಯ ಸಿವಿಲ್ ನ್ಯಾಯಾಧೀಶರು ಹಾಗೂ ಜಿಲ್ಲಾ ಕಾನೂನು ಸೇವೆಗಳ ಪ್ರಾಧಿಕಾರದ ಸದಸ್ಯ ಕಾರ್ಯದರ್ಶಿಗಳು ಶ್ರೀಶೈಲಜಾ ಎಚ್.ವಿ. ಕರೆ ನೀಡಿದರು.
ಹಾವೇರಿ ನಗರದ ಬಾಲಕಿಯರ ಸರ್ಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ಕಾನೂನು ಸೇವೆಗಳ ಪ್ರಾಧಿಕಾರ, ನ್ಯಾಯವಾದಿಗಳ ಸಂಘ ಮತ್ತು ಕಾಲೇಜಿನ ಸಂಯುಕ್ತ ಆಶ್ರಯದಲ್ಲಿ ವಿಶ್ವ ಸಾಮಾಜಿಕ ನ್ಯಾಯ ದಿನಾಚರಣೆ ಅಂಗವಾಗಿ ಕಾನೂನು ಅರಿವು ಕಾರ್ಯಕ್ರಮ ಉದ್ಘಾಟಿಸಿ ಮಾತನಾಡಿದರು.
“ನಾಗರಿಕರು ಕಾನೂನು ಜ್ಞಾನ ಪಡೆದರೆ ಮಾತ್ರ ತಮ್ಮ ಮೇಲೆ ನಡೆಯುವ ದೌರ್ಜನ್ಯ, ದಬ್ಬಾಳಿಕೆ ಮತ್ತು ಅನ್ಯಾಯಗಳನ್ನು ತಡೆಯಲು ಸಾಧ್ಯ. ಎಷ್ಟೋ ಪ್ರಕರಣಗಳಲ್ಲಿ ಕಾನೂನು ಜ್ಞಾನವಿಲ್ಲದ ನಿರಪರಾಧಿಗಳು ಶಿಕ್ಷೆ ಅನುಭವಿಸುತ್ತಿರುವುದನ್ನು ಕಾಣುತ್ತೇವೆ. ಪ್ರಬಲರು ಮಾಡುವ ಅಪರಾಧಗಳಿಗೆ ದುರ್ಬಲರನ್ನು ಸಿಲುಕಿಸಿ ಜೈಲು ಪಾಲು ಮಾಡುತ್ತಾರೆ. ಮಾನವ ಹಕ್ಕುಗಳ ಮೇಲೆ ನಡೆಯುವ ವಿವಿಧ ರೀತಿಯ ಅಪರಾಧಿಕ ಕೃತ್ಯಗಳನ್ನು ತಡೆಯಲು ನಾಗರಿಕರಿಗೆ ಉಚಿತ ಕಾನೂನು ಸೇವೆಗಳಿವೆ” ಎಂದರು.
“ದೇಶದ ನಾಗರಿಕರು ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಮತ್ತು ಔದ್ಯೋಗಿಕ ಕ್ಷೇತ್ರ ಸೇರಿದಂತೆ ವಿವಿಧ ಕ್ಷೇತ್ರಗಳಲ್ಲಿ ಸಮಾನತೆಯನ್ನ ಸಾಧಿಸಬೇಕೆಂದು ನಮ್ಮ ಡಾ.ಬಿ.ಆರ್. ಅಂಬೇಡ್ಕರ್ ರಚಿತ ಸಂವಿಧಾನ ಸಾರಿ ಹೇಳುತ್ತದೆ. ಉತ್ತಮ ಬದುಕಿಗಾಗಿ ಕಾನೂನಿನ ಜ್ಞಾನ ಮತ್ತು ಅರಿವು ತುಂಬಾ ಅಗತ್ಯ. ವಿದ್ಯಾರ್ಥಿಗಳು ಇದನ್ನ ತಿಳಿದುಕೊಂಡು ಇತರರಿಗೂ ಹಂಚುವ ಕೆಲಸ ಮಾಡಬೇಕು. ವಿಶ್ವದ ಪ್ರತಿಯೊಂದು ಜೀವಿಗೂ ಸಾಮಾಜಿಕ ನ್ಯಾಯ ಸಿಗಬೇಕು. ಆಗ ಮಾತ್ರ ಸಮೃದ್ಧಿ ನೆಲೆಸುತ್ತದೆ” ಎಂದು ಕಿವಿಮಾತು ಹೇಳಿದರು.
ಪೆನಲ್ ವಕೀಲರು ಜಿ.ಕೆ.ಕಮ್ಮಾರ ‘ವಿಶ್ವ ಸಾಮಾಜಿಕ ನ್ಯಾಯ’ ವಿಷಯದ ಕುರಿತು ಉಪನ್ಯಾಸ ನೀಡಿದ ಅವರು, “ನ್ಯಾಯದಾನ ನೀಡುವುದು ಸುಲಭದ ಕೆಲಸವಲ್ಲ. ಅದಕ್ಕೆ ಅಂತಃಚಕ್ಷು ಶುದ್ಧವಿರಬೇಕು. ನ್ಯಾಯ ಅನ್ಯಾಯಗಳನ್ನು ವಿಂಗಡಿಸಿ ನೋಡುವ ಒಳನೋಟವಿರಬೇಕು. ಬಹಳಷ್ಟು ಪ್ರಕರಣಗಳಲ್ಲಿ ಮೇಲ್ನೋಟಕ್ಕೆ ಸತ್ಯವೆಂದು ಕಾಣುವುದು ಸುಳ್ಳಾಗಿರುತ್ತದೆ. ಸುಳ್ಳು ಎಂಬುದು ಸತ್ಯವಾಗಿರುತ್ತದೆ. ಇದನ್ನು ತಿಳಿಯಬೇಕಾದರೆ ಕಾನೂನುಗಳ ಆಳವಾದ ಜ್ಞಾನ ಬೇಕು” ಎಂದು ಹೇಳಿದರು.
ಸಾಂಸ್ಕೃತಿಕ ಕಾರ್ಯದರ್ಶಿ ಶೇಖರ ಭಜಂತ್ರಿ ಪ್ರಾಸ್ತಾವಿಕವಾಗಿ ಮಾತನಾಡಿ, “ನಮ್ಮ ಸಂವಿಧಾನದ ಆಶಯದಂತೆ ದೇಶದ ಕಟ್ಟ ಕಡೆಯ ವ್ಯಕ್ತಿಗೂ ಸಮಾನ ಅವಕಾಶ ಮತ್ತು ಹಕ್ಕುಗಳು ದೊರೆಯಬೇಕು. ನ್ಯಾಯ ಸುಲಭವಾಗಿ ಸಿಗುವಂತಾದರೆ, ಸಮಾಜದಲ್ಲಿನ ಎಲ್ಲ ರೀತಿಯ ಅಸಮಾನತೆಗಳನ್ನು ತೊಲಗಿಸಬಹುದು. ಹಕ್ಕುಗಳನ್ನ ಪಡೆಯುವ ನಾಗರಿಕರು ಕರ್ತವ್ಯಗಳನ್ನು ನಿರ್ವಹಿಸಿದರೆ ಸುಭದ್ರ ಹಾಗೂ ಅಭಿವೃದ್ಧಿ ಹೊಂದಿದ ದೇಶ ನಿರ್ಮಾಣವಾಗುತ್ತದೆ” ಎಂದರು.
ಅಧ್ಯಕ್ಷೀಯ ನುಡಿಗಳನ್ನಾಡಿದ ಪ್ರಾಚಾರ್ಯ ಬಸವರಾಜ ಇಟ್ಟಿಗುಡಿ, “ಎಲ್ಲರೂ ಸಮಾನತೆ, ಸೌಹಾರ್ದತೆ ಮತ್ತು ಸಹೋದರತೆಯಿಂದ ಬದುಕಬೇಕೆಂಬ ಮಹದಾಸೆಯಿಂದ ನಮ್ಮ ಹಿರಿಯರೆಲ್ಲ ಸೇರಿ ಅಂಬೇಡ್ಕರ್ ರವರ ನೇತೃತ್ವದಲ್ಲಿ ಸಂವಿಧಾನದ ಮೂಲಕ ಕಾನೂನು ಚೌಕಟ್ಟುಗಳನ್ನು ನಿರ್ಮಿಸಿದ್ದಾರೆ. ಅದು ಸರ್ವರಿಗೂ ಎಲ್ಲವನ್ನೂ ನೀಡುತ್ತದೆ. ಸಂವಿಧಾನವು ಪ್ರತಿ ಹಂತದಲ್ಲೂ ಸಾಮಾಜಿಕ ನ್ಯಾಯವನ್ನು ಪಾಲಿಸಲು ಸೂಚಿಸುತ್ತದೆ” ಎಂದರು
ಉಪನ್ಯಾಸಕಿ ಪುಷ್ಪಲತಾ ಡಿ.ಎಲ್, ಸುಮಾ, ವಂದನಾ ಕರ್ಜಗಿ ಮತ್ತು ಇತರರು ಉಪಸ್ಥಿತರಿದ್ದರು. ಮೊದಲಿಗೆ ಕು.ಭೂಮಿಕಾ ಬಸಾಪುರ ಪ್ರಾರ್ಥಿಸಿದರೆ, ಸುಮಾ ಸ್ವಾಗತಿಸಿದರು. ಶೇಖರ ಭಜಂತ್ರಿ ನಿರೂಪಿಸಿ ವಂದಿಸಿದರು.





