ಪರೀಕ್ಷೆ ಬರೆಯಲು ಹೊರಟಿದ್ದ ರೋಹಿತ್ ಕೇಸರಹಳ್ಳಿ ವಿದ್ಯಾರ್ಥಿಗೆ ಚಾಲಕನ ನಿರ್ಲಕ್ಷ್ಯದಿಂದ ಸರಕಾರಿ ಬಸ್ ಡಿಕ್ಕಿ ಹೊಡೆದ ಪರಿಣಾಮ ವಿದ್ಯಾರ್ಥಿಯ ಬೆನ್ನು ಕೈಕಾಲುಗಳಿಗೆ ಗಾಯಗೊಂಡು ಸರಕಾರಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾನೆ.
ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಕೊಣತಂಬಿಗಿ ಗ್ರಾಮದ ವಿಧ್ಯಾರ್ಥಿಯಾಗಿದ್ದು, ಸರ್ಕಾರಿ ಪಿಯು ಕಾಲೇಜಿನಲ್ಲಿ ವಿದ್ಯಾಭ್ಯಾಸ ಮಾಡುತ್ತಿದ್ದು, ವಸತಿ ನಿಲಯದದಿಂದ ಪರೀಕ್ಷೆ ಬರೆಯಲು ಹೋಗುವ ಸಂದರ್ಭದಲ್ಲಿ ಘಟನೆ ನಡೆದಿದೆ. ಇದರಿಂದ ಗಾಯಗೊಂಡು, ಪರೀಕ್ಷೆಯಿಂದ ವಂಚಿತನಾಗಿದ್ದಾನೆ.
ಚಾಲಕನ ನಿರ್ಲಕ್ಷತನವನ್ನು ಖಂಡಿಸಿ ಬಸ್ ನಿಲ್ದಾಣ ಬಂದ್ ಮಾಡಿ ಸಿಬ್ಬಂದಿ ಮೇಲೆ ಶಿಸ್ತು ಕ್ರಮ ಜರುಗಿಸಲು ವಿದ್ಯಾರ್ಥಿಗಳು, ಸಹಪಾಠಿಗಳು ಪ್ರತಿಭಟಿಸಿ ಆಕ್ರೋಶ ವ್ಯಕ್ತಪಡಿಸಿದರು.
ಘಟನೆ ತಿಳಿದ ತಕ್ಷಣಕ್ಕೆ ಎಸ್ಎಫ್ಐ ಕಾರ್ಯಕರ್ತರು ಸ್ಥಳಕ್ಕೆ ಆಗಮಿಸಿ ವಿದ್ಯಾರ್ಥಿಯನ್ನು ಆಸ್ಪತ್ರೆಗೆ ದಾಖಲಿಸುವಂತೆ ಒತ್ತಡ ಹಾಕಿ ಚಿಕಿತ್ಸೆಗಾಗಿ ಸರ್ಕಾರಿ ಆಸ್ಪತ್ರೆಗೆ ದಾಖಲಿಸಿದರು. ಸಣ್ಣ ಪುಟ್ಟ ಗಾಯಗೊಂಡ ವಿದ್ಯಾರ್ಥಿಗೆ ಯಾವುದೇ ಹಾನಿ ಆಗಿಲ್ಲ ಎಂದು ತಿಳಿದ ತಕ್ಷಣ ಹೋರಾಟವನ್ನು ನಿಲ್ಲಿಸಿ ತಮ್ಮ ತಮ್ಮ ಕಾಲೇಜಿಗಳಿಗೆ ತೆರಳಲು ಕರೆ ನೀಡಿದರು.
ದಿನನಿತ್ಯವು ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆಯು ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕ ಸೇವೆ ಒದಗಿಸುವಲ್ಲಿ ನಿರ್ಲಕ್ಷ್ಯತನ ತೋರಿತ್ತಿರುವುದು ಹಾಗೂ ಶಕ್ತಿ ಯೋಜನೆ ನೆಪದಿಂದಾಗಿ ತಮ್ಮ ಕರ್ತವ್ಯ ಜವಾಬ್ದಾರಿ ಮರೆಮಾಚುತ್ತಿರುವುದನ್ನು ಎಸ್ಎಫ್ಐ ತೀವ್ರವಾಗಿ ಖಂಡಿಸಿತು.
ಕೆಎಸ್ಆರ್ಟಿಸಿ ಡ್ರೈವರ್ ಹಾಗೂ ಕಂಡಕ್ಟರ್ ಅವರ ನಿರ್ಲಕ್ಷ್ಯತನದಿಂದಾಗಿ ಈ ಘಟನೆ ಸಂಭವಿಸಿದ್ದು ಸಮರ್ಪಕವಾಗಿ ಬಸ್ಸಿನ ಸೌಲಭ್ಯ ಒದಗಿಸದೆ ಇರುವುದೆ ಪ್ರಮುಖ ಕಾರಣ ಎಂದು ಎಸ್ಎಫ್ಐ ಗಂಭೀರವಾಗಿ ಆರೋಪಿಸಿತು.
“ಈ ಹಿಂದ ಮಾನ್ಯ ಜಿಲ್ಲಾಧಿಕಾರಿಗಳ ಆದೇಶದ ಮೇರೆಗೆ ಅರ್ಧ ಗಂಟೆಗೊಮ್ಮೆ ಬಸ್ ಗಳನ್ನು ಬಿಡುತಿದ್ದರು. ಆದರೆ ಕಳೆದ ಎರಡು ಮೂರು ತಿಂಗಳಿಂದ ಅವರ ಆದೇಶವನ್ನು ಕೆಎಸ್ಆರ್ಟಿಸಿ ಸಾರಿಗೆ ಸಂಸ್ಥೆ ಉಲ್ಲಂಘನೆ ಮಾಡಿದೆ. ಇದರಿಂದ ದಿನ ನಿತ್ಯವು ವಿದ್ಯಾರ್ಥಿಗಳ ಸಮಯಕ್ಕೆ ಸರಿಯಾಗಿ ಸಮರ್ಪಕ ಬಸ್ ಬಿಡದೆಯಿರುವುದರಿಂದ ಇಂತಹ ಘಟನೆಗಳು ಸಂಭವಿಸುತ್ತಿವೆ” ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷರು ಬಸವರಾಜ ಎಸ್ ಅಸಮಾಧಾನ ವ್ಯಕ್ತಪಡಿಸಿದರು.
“ಸರ್ಕಾರ ಹಾಗೂ ಜಿಲ್ಲಾಡಳಿತ ವಿದ್ಯಾರ್ಥಿಗಳು ಸೇರಿದಂತೆ ಸಾರ್ವಜನಿಕ ಸೇವೆಗೆ ಸಮರ್ಪಕವಾಗಿ ಬಸ್ಸುಗಳನ್ನು ಬಿಡಬೇಕು ಹಾಗೂ ವಿದ್ಯಾರ್ಥಿಗಳ ಸಂಖ್ಯೆಗೆ ಅನುಗುಣವಾಗಿ ಹೆಚ್ಚುವರಿ ಬಸ್ಸಿನ ಸೌಲಭ್ಯ ಒದಗಿಸಬೇಕು” ಎಂದರು.
“ನಿತ್ಯವು ಕನಿಷ್ಠ 20 ಬಸ್ಸುಗಳನ್ನು ನಗರ ಸಾರಿಗೆ ವ್ಯವಸ್ಥೆ ಕಲ್ಪಿಸಬೇಕು. ಸಾರಿಗೆ ಸಂಸ್ಥೆ ಸಿಬ್ಬಂದಿಗಳಿಗೆ ಶಿಸ್ತು ಕ್ರಮ ಜರುಗಿಸಬೇಕು. ಗಾಯಗಳು ವಿದ್ಯಾರ್ಥಿಗಳಿಗೆ ಸೂಕ್ತ ವೈದ್ಯಕೀಯ ಚಿಕಿತ್ಸೆ ಜೊತೆಗೆ 1 ಲಕ್ಷ ಪರಿಹಾರ ಕೊಡಬೇಕು. ಜಿಲ್ಲಾಧಿಕಾರಿ ನೇತೃತ್ವದಲ್ಲಿ ವಿದ್ಯಾರ್ಥಿಗಳ ಸಭೆ ಕರೆದು ಇಡೀ ಜಿಲ್ಲೆಯ ಬಸ್ಸಿನ ಸಮಸ್ಯೆಗಳನ್ನು ಪರಿಹಾರಿಸಬೇಕು ಎಂದು ಎಸ್ಎಫ್ಐ ಜಿಲ್ಲಾಧ್ಯಕ್ಷ ಬಸವರಾಜ ಎಸ್, ಜಿಲ್ಲಾ ಮುಖಂಡರಾದ ಅರುಣ್ ನಾಗವತ್ ಆಗ್ರಹಿಸಿದರು.





