ಚಂದ್ರಣ್ಣನಂತಹ ಸಾವಿರಾರು ರೈತರು ಇಂದು ಎಚ್ಚರಗೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಮಾತ್ರವಲ್ಲ, ಅವರ ಮನಸ್ಸಿನಲ್ಲಿ ಹಸಿರು ಕ್ರಾಂತಿ ಮೊಳಕೆಯೊಡೆದಿದೆ. ಇಂತಹ ಯಶೋಗಾಥೆಗಳು ನಮಗೆ ಕಿವಿಮಾತೊಂದನ್ನು ಹೇಳುತ್ತವೆ – ʼಕೃಷಿ ಎಂದರೆ ಬಡತನವಲ್ಲ, ಅದು ಸ್ವಾಭಿಮಾನ; ಲಾಭವೊಂದೇ ಅಲ್ಲ, ಅದು ಜೀವನದ ಸಾರ್ಥಕತೆʼ ಎಂದು.
ಕೃಷಿ ಎಂದರೆ ಮೂಗು ಮುರಿಯುವವರೇ ಹೆಚ್ಚು. ಹೀಗಿರುವಾಗ ನೈಸರ್ಗಿಕ ಬೆಳೆಗಳನ್ನು ಬೆಳೆಯುತ್ತ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ಉತ್ತಮ ಆದಾಯ ಗಳಿಸಿ ತನ್ನ ಕುಟುಂಬವನ್ನು ಆರ್ಥಿಕವಾಗಿ ಗಟ್ಟಿಗೊಳಿಸಿಕೊಂಡ ರೈತನ ಯಶೋಗಾಥೆಯಿದು.
ಹಾವೇರಿ ಜಿಲ್ಲೆಯ ರಾಣೇಬೆನ್ನೂರು ತಾಲೂಕಿನ ಐರಣಿ ಗ್ರಾಮದ ರೈತ ಚಂದ್ರಣ್ಣ ನಾಗೇನಹಳ್ಳಿ ಅವರು ತಮ್ಮ ಮೂರು ಎಕರೆ ಜಮೀನಿನಲ್ಲಿ ಪರಿಸರದೊಲವಿನ ಕೃಷಿಯನ್ನು ಬೆಳೆದು ಇತರ ರೈತರಿಗೆ ಮಾದರಿಯಾಗಿದ್ದಾರೆ. ರೈತರು ಎಷ್ಟೇ ಕಷ್ಟಪಟ್ಟು ಸಾಲ ಮಾಡಿ ಸಂಪ್ರದಾಯಿಕ ಬೆಳೆಗಗಳನ್ನು ಬೆಳೆದು ಮಾರುಕಟ್ಟೆಗೆ ತೆಗೆದುಕೊಂಡು ಹೋದರೆ ಬೆಳೆಗೆ ತಕ್ಕ ಬೆಲೆ ಸಿಗದಿರುವುದನ್ನು ಅರಿತ ರೈತ ಚಂದ್ರಣ್ಣನವರು ಸಮಗ್ರ ಕೃಷಿಯತ್ತ ಮುಖ ಮಾಡುತ್ತಾರೆ.
ರೈತ ಚಂದ್ರಣ್ಣ ಹದಿನಾರು ವರ್ಷಗಳ ಹಿಂದೆ ನೈಸರ್ಗಿಕ ಹಾಗೂ ಸಮಗ್ರ ಕೃಷಿ ಮಾಡಲು ಆರಂಭಿಸಿದಾಗ ಊರಿನ ಜನರು ಅವಮಾನಿಸಿದ್ದರು. ಇಷ್ಟು ಜಮೀನಿನಲ್ಲಿ ಏನು ಸಾಧನೆ ಮಾಡೋಕೆ ಹೊರಟಿದ್ದೀಯಾ? ಖರ್ಚು ಮಾಡಿ ಮೈಮೇಲೆ ಹಾಕಿಕೊಳ್ಳೋಕೆ ಹೊರಟಿದ್ದಾನೆಂದು ಅಪಹಾಸ್ಯ ಮಾಡಿದವರೇ ಹೆಚ್ಚು. ಆದರೆ ಚಂದ್ರಣ್ಣ ಜನರ ಅಪಹಾಸ್ಯಕ್ಕೆ ಕಿವಿಗೊಡದೆ ಸಮಗ್ರ ಕೃಷಿ ಬೆಳೆದು ಈಗ ಲಕ್ಷ ಲಕ್ಷ ಆದಾಯ ಪಡೆದು ಜನರಿಗೆ ಮಾದರಿ ಆಗಿದ್ದಾರೆ.

ಹದಿನಾರು ವರ್ಷಗಳಿಂದ ಸಮಗ್ರ ಕೃಷಿ ಹಾಗೂ ನೈಸರ್ಗಿಕ ಬೆಳೆಗಳನ್ನು ಬೆಳೆದು ಮೂರು ಎಕರೆ ಜಮೀನನ್ನು ಹಸಿರುಮಯವಾಗಿ ಪರಿವರ್ತಿಸಿದ್ದಾರೆ. ತಮ್ಮ ಜಮೀನಿನಲ್ಲಿ ಅಡಿಕೆ, ತೆಂಗು ರಾಮಫಲ, ಕಿತ್ತಳೆ, ನೇರಳೆ ಲಿಂಬೆ ಬೆಳೆದಿದ್ದಾರೆ. ಸಾರಜನಕ ಸ್ಥಿರೀಕರಣಕ್ಕಾಗಿ ಗ್ಲಿರಿಸೀಡಿಯಾ(ಗೊಬ್ಬರದ ಗಿಡ)ಗಳನ್ನು ಸುತ್ತಲೂ ಬೆಳೆಸಿದ್ದಾರೆ. ಜತೆಗೆ ಜಾಯಿಕಾಯಿ, ಕರಿಮೆಣಸು, ವೀಳ್ಯೇದೆಲೆ ಬಳ್ಳಿ, ಏಲಕ್ಕಿ, ಬಾಳೆ, ಲವಂಗ, ಹಲಸು, ಪೇರಲ, ಮಾವು, ಅಮಟೆಕಾಯಿ ಸಾಂಬಾರು ಪದಾರ್ಥದಂತಹ ಬೆಳೆಗಳನ್ನು ಬೆಳೆದಿದ್ದಾರೆ. ಶುದ್ಧ ನೈಸರ್ಗಿಕ ಹಾಗೂ ಸಾವಯುವ ಕೃಷಿಯನ್ನು ಮಾಡಿ ರೈತ ಚಂದ್ರಣ್ಣನವರು ಯಶಸ್ಸು ಕಂಡಿದ್ದಾರೆ.
ಕೃಷಿಯಿಂದ ಲಕ್ಷ ಲಕ್ಷ ಆದಾಯ:
ರೈತ ಚಂದ್ರಣ್ಣನವರು ಮಾಡಿದ ನೈಸರ್ಗಿಕ ಕೃಷಿ ಪದ್ಧತಿಯಲ್ಲಿ ಬೆಳೆದ ಅಡಿಕೆ ಬೆಳೆ ಒಂದರಿಂದಲೇ ವರ್ಷಕ್ಕೆ 10ರಿಂದ 12 ಲಕ್ಷ ರೂಪಾಯಿ ಆದಾಯ ಗಳಿಸುತ್ತಿದ್ದಾರೆ. ಉಳಿದ ಬೆಳೆಗಳಿಂದ ಸಾಕಷ್ಟು ಆದಾಯ ಬರುತ್ತದೆ. ಮೂರು ಎಕರೆ ಜಮೀನಿನಲ್ಲೇ ಜೇನು ಸಾಕಾಣಿಕೆ, ದೇಸಿ ತಳಿಯ ಆಕಳು ಎಮ್ಮೆಗಳನ್ನು ಸಾಕಿದ್ದಾರೆ. ಇವುಗಳ ಮೂಲಕವೂ ಕೂಡ ನಿರಂತರ ಆದಾಯ ಗಳಿಸುತ್ತಿದ್ದಾರೆ.
ರಾಸಾಯನಿಕ ಗೊಬ್ಬರ ಬಳಕೆ ಇಲ್ಲ:
ಜಮೀನಿನಲ್ಲಿ ಬೆಳೆದ ಬೆಳೆಗಳಿಗೆ ಯಾವುದೇ ರೀತಿಯ ರಾಸಾಯನಿಕ ಗೊಬ್ಬರ, ಔಷಧಿಗಳನ್ನು ಬಳಕೆ ಮಾಡುವುದಿಲ್ಲ. ಜಮೀನಿನಲ್ಲಿ ಬೆಳೆದ ತ್ಯಾಜ್ಯ, ಕಸ, ಗಿಡಮರಗಳಿಂದ ಉದುರಿದ ಎಲೆಗಳನ್ನೇ ಗೊಬ್ಬರವಾಗಿ ಬಳಕೆ ಮಾಡುತ್ತೇವೆ. ನಾವೇ ಎರೆಹುಳು ತೊಟ್ಟಿ ಮಾಡಿಕೊಂಡು ಗೊಬ್ಬರ ತಯಾರಿ ಮಾಡಿ, ಜೀವಾಮೃತವನ್ನು ನಿರಂತರ ಬಳಕೆ ಮಾಡುತ್ತೇವೆಂದು ಚಂದ್ರಣ್ಣವರು ಹೇಳುವರು.

ಸಮಗ್ರ ಕೃಷಿ ಮಾಡುವ ಮೊದಲು ರೈತ ಚಂದ್ರಣ್ಣ ನಾಗೇನಹಳ್ಳಿ ಅವರು ಕೃಷಿ ತಜ್ಞ ಸುಭಾಶ್ ಪಾಳೆಕಾರ್ ಅವರ ಕೃಷಿ ಪದ್ಧತಿ ಕಾರ್ಯಾಗಾರಗಳಲ್ಲಿ ಭಾಗವಹಿಸಿ, ತರಬೇತಿ ಪಡೆದುಕೊಂದ್ದೇನೆ. ತೋಟಗಾರಿಕೆ ಹಾಗೂ ಕೃಷಿ ಇಲಾಖೆ, ಕೃಷಿ ವಿಜ್ಞಾನ ಕೇಂದ್ರ ಹನುಮನಮಟ್ಟಿ ಹಾಗೂ ರಾಣೇಬೆನ್ನೂರಿನ ವನಸಿರಿ ಗ್ರಾಮೀಣ ಅಭಿವೃದ್ಧಿ ಸಂಸ್ಥೆ ತರಬೇತಿಗಳಲ್ಲಿ ಭಾಗವಹಿಸಿ ಮಾಹಿತಿ ಪಡೆದಿರುವೆ. ಸಮಗ್ರ ಕೃಷಿ ಬೆಳೆದು ಮಾದರಿಯಾದ ರೈತರ ಹತ್ತಿರ ಹೋಗಿ, ನೋಡಿ, ತಿಳಿದುಕೊಂಡು ಅಧ್ಯಯನ ಮಾಡಿ ನೈಸರ್ಗಿಕ ಕೃಷಿ ಪದ್ದತಿಯನ್ನು ಅಳವಡಿಸಿಕೊಂಡಿರುವೆ ಎಂದು ಹೇಳುತ್ತಾರೆ.
“ಗೋವಿನ ಜೋಳದ ಹಾಗೆ ಮಾರುಕಟ್ಟೆ ಬೆಲೆ ಏರಿಳಿತ ಸಮಸ್ಯೆ ಸಮಗ್ರ ಕೃಷಿ ಬೆಳೆಗಳಿಗೆ ಇಲ್ಲ. ಅಡಿಕೆ ವ್ಯಾಪಾರಿಗಳು ತಾವೇ ಖುದ್ದಾಗಿ ನಮ್ಮ ತೋಟಕ್ಕೆ ಬಂದು, ಉತ್ತಮ ಬೆಲೆ ನಿಗದಿ ಮಾಡಿ, ಮುಂಗಡ ಹಣ ಕೊಟ್ಟು ಖರೀದಿ ಮಾಡುತ್ತಾರೆ. ಇದರಿಂದ ಸಾಕಷ್ಟು ಆದಾಯ ಬರುತ್ತಿದೆ. ಊರಿನ ರೈತರಿಗೂ ಸಮಗ್ರ ಕೃಷಿ ಅಳವಡಿಸಿಕೊಂಡು ಆರ್ಥಿಕ ಸದೃಢರಾಗಿ” ಎಂದು ಕಿವಿಮಾತು ಹೇಳಿದರು.

ಇಂದು ಮಾರುಕಟ್ಟೆಗೂ ಕಾಲಿಡದ ಗ್ರಾಹಕರನ್ನು ಹೊಲಕ್ಕೇ ಕರೆದೊಯ್ಯುವ ವಿಶ್ವಾಸ, ವರ್ಷಕ್ಕೆ 10ರಿಂದ 11 ಲಕ್ಷ ರೂಪಾಯಿಗೂ ಅಧಿಕ ಆದಾಯ ತರುವ ಸಮಗ್ರ ಕೃಷಿಯನ್ನು ಅಳವಡಿಸಿಕೊಂಡು ತನ್ನದೇ ಮಾದರಿಯ ಮೂಲಕ ಅನೇಕ ರೈತರ ಮನಸ್ಥಿತಿಯನ್ನು ಬದಲಾಯಿಸಿರುವ ಸಾಧನೆ. ವೆಲ್ಲವೂ ರೈತ ಚಂದ್ರಣ್ಣ ನಾಗೇನಹಳ್ಳಿ ಅವರನ್ನು ಯಶಸ್ವಿ ರೈತನನ್ನಾಗಿ ರೂಪಿಸಿವೆ.
ಸಮಗ್ರ ಕೃಷಿ ಎನ್ನುವುದು ಕೇವಲ ಬೆಳೆ ಬೆಳೆಯುವ ವಿಧಾನವಲ್ಲ, ಅದು ಒಂದು ಜೀವನ ದರ್ಶನ. ಮಣ್ಣನ್ನು ಉಳಿಸುವುದು, ಆರೋಗ್ಯವನ್ನು ಕಾಯುವುದು ಮತ್ತು ಮುಂದಿನ ಪೀಳಿಗೆಗೆ ಶುದ್ಧ ಆಹಾರವನ್ನೂ ಶುದ್ಧ ಪರಿಸರವನ್ನೂ ಬಿಟ್ಟುಕೊಡುವ ಜವಾಬ್ದಾರಿ.
ಇದನ್ನೂ ಓದಿದ್ದೀರಾ? ಚಿತ್ರದುರ್ಗ | ರೈತಸಂಘದ ಬೇಡಿಕೆಗಳ ಈಡೇರಿಕೆಗಾಗಿ ಬೆಳಗಾವಿ ಸುವರ್ಣಸೌಧ ಚಲೋ
ಚಂದ್ರಣ್ಣನಂತಹ ಸಾವಿರಾರು ರೈತರು ಇಂದು ಎಚ್ಚರಗೊಳ್ಳುತ್ತಿದ್ದಾರೆ. ಅವರ ಕೈಯಲ್ಲಿ ಮಾತ್ರವಲ್ಲ, ಅವರ ಮನಸ್ಸಿನಲ್ಲಿ ಹಸಿರು ಕ್ರಾಂತಿ ಮೊಳಕೆಯೊಡೆದಿದೆ. ಇಂತಹ ಯಶೋಗಾಥೆಗಳು ನಮಗೆ ಕಿವಿಮಾತೊಂದನ್ನು ಹೇಳುತ್ತವೆ – ʼಕೃಷಿ ಎಂದರೆ ಬಡತನವಲ್ಲ, ಅದು ಸ್ವಾಭಿಮಾನ; ಲಾಭವೊಂದೇ ಅಲ್ಲ, ಅದು ಜೀವನದ ಸಾರ್ಥಕತೆʼ ಎಂದು.
ಆದ್ದರಿಂದ, ಈ ಕಥೆಯ ಮೂಲಕ ನಾವೆಲ್ಲರೂ ಒಂದು ಸಣ್ಣ ಪ್ರತಿಜ್ಞೆ ಮಾಡೋಣ, ಒಬ್ಬ ಸಾವಯವ ರೈತನನ್ನಾದರೂ ಬೆಂಬಲಿಸೋಣ. ಏಕೆಂದರೆ, ಆ ರೈತನ ಗೆಲುವು ನಮ್ಮೆಲ್ಲರ ಗೆಲುವು – ಆರೋಗ್ಯ, ಪರಿಸರ ಮತ್ತು ಆತ್ಮಸ್ಥೈರ್ಯದ ಗೆಲುವು! ಇಂತಹ ರೈತರ ಹೆಜ್ಜೆಗಳು ಲಕ್ಷಾಂತರ ರೈತರಿಗೆ ದಾರಿದೀಪವಾಗಲಿ.
ಸಮಗ್ರ ಕೃಷಿ ಕುರಿತು ಮಾಹಿತಿ ಪಡೆಯಲು ರೈತ ಚಂದ್ರಣ್ಣ ನಾಗೇನಹಳ್ಳಿ ಮೊಬೈಲ್ ಸಂಖ್ಯೆ :7019575690 ಸಂಪರ್ಕಿಸಿ.

ಶರಣಪ್ಪ ಎಚ್ ಸಂಗನಾಳ
ಗದಗ ಜಿಲ್ಲೆಯ ರೋಣ ತಾಲೂಕಿನ ಸವಡಿ ಗ್ರಾಮದವರು. ಕರ್ನಾಟಕ ವಿಶ್ವವಿದ್ಯಾಲಯದಿಂದ ಸ್ನಾತಕೋತ್ತರ ಪದವಿ. ಧ್ವನಿ ಶೈಕ್ಷಣಿಕ ಸಂಪನ್ಮೂಲ ಕೇಂದ್ರದಲ್ಲಿ ಒಂದಷ್ಟು ಕಾಲ ಕೆಲಸ. ಸದ್ಯ 'ಈ ದಿನ.ಕಾಮ್'ನಲ್ಲಿ ಮೀಡಿಯಾ ಕೋಆರ್ಡಿನೇಟರ್. ಓದು, ಪಕ್ಷಿ ವೀಕ್ಷಣೆ, ಕೃಷಿಯಲ್ಲಿ ಆಸಕ್ತಿ.




