“ಮೂರನೇ ದಿನಕ್ಕೆ ಕಬ್ಬು ಬೆಳೆಗಾರರ ಪ್ರತಿಭಟನೆ ಕಾಲಿಟ್ಟರೂ ಸಚಿವರ ಸ್ಪಂದನೆ ಇಲ್ಲ. ಜಿಲ್ಲೆಯ ಶಾಸಕರು ಇದುವರೆಗೂ ಭೇಟಿ ನೀಡಿಲ್ಲ. ನಿನ್ನೆ ಒಬ್ಬರು ಶಾಸಕರು ಬಂದು ₹3300 ಕಬ್ಬಿಗೆ ಬೆಲೆ ಸಿಗುತ್ತೆ, ಅಲ್ಲಿವರೆಗೂ ಇಲ್ಲಿಯೇ ಪ್ರತಿಭಟನೆ ಮಾಡಿ ಎಂದು ಏನೇನೋ ಹೇಳಿ ಹೋದರು. ಆ ಶಾಸಕರಿಗೆ ಎಫ್ ಆರ್ ಪಿ ಅಂದ್ರ ಏನು? ಎಫ್ ಆರ್ ಪಿ ಪ್ರಕಾರ ಎಷ್ಟು ದರ ಬರ್ತಿದೆ ಎಂಬುದರ ಕುರಿತು ಮಾಹಿತಿಯೇ ಗೊತ್ತಿಲ್ಲ. ರಾಜಕಾರಣಿಗಳೇ ರೈತರನ್ನು ಗೊಂದಲಕ್ಕೆ ಉಂಟು ಮಾಡುತ್ತಿದ್ದಾರೆ” ಎಂದು ಕಬ್ಬು ಬೆಳೆಗಾರರ ಸಂಘದ ಜಿಲ್ಲಾಧ್ಯಕ್ಷರು ಭುವನೇಶ್ವರ ಶಿಡ್ಲಾಪುರ ಕಿಡಿಕಾರಿದರು.
ಹಾವೇರಿ ಪಟ್ಟಣದ ಹುತ್ಮಾತ್ಮ ಮೈಲಾರ ಮಹದೇವಪ್ಪ ವೃತ್ತದಲ್ಲಿ ಕಬ್ಬು ಬೆಳೆಗಾರರು ಬೆಳಗಾವಿ ಜಿಲ್ಲೆಯ ಕಬ್ಬು ಬೆಳೆಗಾರರಿಗೆ ರಾಜ್ಯ ಸರಕಾರ ಕಬ್ಬಿನ ದರ ₹ 3,300 ದರ ನಿಗದಿ ಮಾಡಿದ್ದು, ಈ ದರವನ್ನು ಹಾವೇರಿ ಜಿಲ್ಲೆಯ ರೈತರಿಗೂ ನೀಡುವಂತೆ ಹಮ್ಮಿಕೊಳ್ಳಲಾಗಿದ್ದ ಧರಣಿ ಬುಧವಾರ ಮೂರನೇ ದಿನಕ್ಕೆ ಕಾಲಿಟ್ಟಿದೆ.
ಧರಣಿಯಲ್ಲಿ ಮಾತನಾಡಿದ ಭುವನೇಶ್ವರ ಶಿಡ್ಲಾಪುರ, “ಸಿಎಂ ಆದೇಶ ನಿಜ ಆಗಿದ್ದರೆ, ಜಿಲ್ಲಾಧಿಕಾರಿಗಳು ಆ ಆದೇಶವನ್ನು ಪಾಲಿಸಬೇಕಿತ್ತು. ಕ್ರಮ ಕೈಗೊಳ್ಳುತ್ತಿಲ್ಲ. ಕೇವಲ ಮಾತಿನ ಮೇಲೆ ನಡೆದಿದೆ. ಕಾರ್ಖಾನೆ ಮಾಲಿಕರನ್ನು ಕರೆಸುತ್ತಿಲ್ಲ. ಸರಕಾರಕ್ಕಿಂತ ಈ ಕಾರ್ಖಾನೆ ಮಾಲಿಕರೇ ಹೆಚ್ಚಾಗಿದ್ದಾರೆ. ಸಿಎಂ ಅವರ ಆದೇಶಕ್ಕೆ ಇವರು ಕಿಮ್ಮತ್ತು ಕೊಡುತ್ತಿಲ್ಲ” ಎಂದು ಆಕ್ರೋಶ ವ್ಯಕ್ತಪಡಿಸಿದರು.
“ಜಿಲ್ಲೆಯ ಆರು ಶಾಸಕರು ಎನ್ ಮಾಡ್ತಿರಿ? ಇಲ್ಲಿಯ ಸಂಸದರು ಇಲ್ಲಿಯೇ ದಿನ ಓಡಾಡುತ್ತಾರೆ. ರೈತರು ಪ್ರತಿಭಟನೆ ಮಾಡುತ್ತಿರುವುದು ಅವರಿಗೆ ಗೊತ್ತಿದೆ. ನಾವು ಹೇಳ್ತೀವಿ ನಿಮಗ ಓಟು ಹಾಕಿದ್ದೀವಿ. ಇಲ್ಲಿಗೆ ಬಂದು ಕಬ್ಬಿಗೆ ದರ ಕೊಡಿಸಿ, ನ್ಯಾಯ ಕೊಡಿಸಲು ಸಂಸದರಿಗೂ ಹೇಳ್ತಿವಿ, ಶಾಸಕರಿಗೂ ಹೇಳ್ತೀವಿ” ಎಂದು ಹೇಳಿದರು.
“ಹಾವೇರಿ ಜಿಲ್ಲಾ ಉಸ್ತುವಾರಿ ಸಚಿವರೇ ಸಕ್ಕರೆ ಸಚಿವರು ಇದ್ದಾರೆ ಒಂದು ಫೋನ್ ಇಲ್ಲ, ತಮ್ಮ ಖಾತೆಯನ್ನೇ ಸರಿಯಾಗಿ ನಿಭಾಯಿಸಲು ಆಗುತ್ತಿಲ್ಲ. ಎಲ್ಲ ಕಬ್ಬಿಗಾಗಿ ಹೋರಾಟ ಮಾಡುವುದಾದರೆ ನೀವು ಏನು ಮಾಡುವಿರಿ. ರಾಜೀನಾಮೆ ಕೊಟ್ಟು ಮನೆಗೆ ಹೋಗಿ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ಸರಕಾರ ಸ್ಪಂದನೆ ಮಾಡದಿದ್ದರೆ ಎಲ್ಲ ರೈತರು ತೀರ್ಮಾನ ತಗೊಂಡು ಮುಂದಿನ ಹೋರಾಟ ಹೇಗೆ ಮಾಡಬೇಕು ಅನ್ನೋದನ್ನ ಯೋಚನೆ ಮಾಡ್ತಿವಿ” ಎಂದು ತಿಳಿಸಿದರು.
ಧರಣಿಗೆ ಬೆಂಬಲಿಸಿ ಡಾ. ಪ್ರಾಣವನಂದ ಸ್ವಾಮೀಜಿ ಶರಣ ಬಸವೇಶ್ವರ ಅರೇಮಲ್ಲಾಪುರ ಅವರು ಮಾತನಾಡಿ, “ಸಿಎಂ ಸಿದ್ದರಾಮಯ್ಯ ಅವರ ಸರಕಾರ ರೈತರ ಹೆಸರಿನಲ್ಲಿ ಅಧಿಕಾರಕ್ಕೆ ಬಂದಿದ್ದು. ಮೂರು ದಿನದಿಂದ ರೈತರು ಪ್ರತಿಭಟನೆ ಮಾಡುತ್ತಿದ್ದಾರೆ. ಸರಕಾರದಿಂದ ಯಾವುದೇ ಸ್ಪಂದಿಸದೆ ಇರುವುದು ರೈತರ ದುರಂತ. ಇಲ್ಲಿಯ ಸಚಿವರು ಅನ್ನ ತಿನ್ನುವುದಿಲ್ಲವೇ. ಬೆಳಗಾವಿಯಲ್ಲಿ ₹3300 ಘೋಷಣೆ ಮಾಡಿದ್ದಾರೆ. ಹಾವೇರಿಯ ಕಬ್ಬು ಬೆಳೆಗರಾರಿಗೆ ಯಾಕೆ ಅದೇ ಬೆಲೆ ಕೊಡುತ್ತಿಲ್ಲ” ಎಂದು ಹೇಳಿದರು.
“ಜಿಲ್ಲಾ ಉಸ್ತುವಾರಿ ಸಚಿವರು ಶಿವಾನಂದ ಪಾಟೀಲರು ವಿಜಿಟಿಂಗ್ ಸಚಿವರು ಆರು ತಿಂಗಳಿಗೊಮ್ಮೆ ಬರುವರು ಜಿಲ್ಲೆಗೆ ಬರುವರು. ರೈತರು ಬೆಲೆ ನಿಗದಿ ಮಾಡಲು ಮನವಿ ಮಾಡಿದ್ದಾರೆ. ರೈತರನ್ನು ಬೀದಿಗಿಳಿಸುವ ಹಾಗೆ ಮಾಡಬಾರದು. ರೈತರು ಜೊತೆಗೆ ಚರ್ಚೆಸಿ. ಇಲ್ಲವಾದರೆ ಹಾವೇರಿ ಜಿಲ್ಲೆಯ ಎಲ್ಲ ಜನರು ಮಾತಾಡಿಕೊಂಡು ರಾಷ್ಟೀಯ ಹೆದ್ದಾರಿಯನ್ನು ಬಂದ ಮಾಡಲಾಗುವುದು. ಈ ರೀತಿ ಅವಕಾಶ ಮಾಡಿ ಕೊಡದೆ. ರೈತರ ಬೇಡಿಕೆಗಳನ್ನು ಈಡೇರಿಸಬೇಕು” ಎಂದು ಸ್ವಾಮೀಜಿ ಅವರು ಹೇಳಿದರು.
ಪ್ರತಿಭಟನೆಯಲ್ಲಿ ಕಬ್ಬು ಬೆಳೆಗಾರರು ರೈತರು ಉಪಸ್ಥಿತರಿದ್ದರು.





