ಖಂಡನೆ”ಗ್ರಾಮೀಣ ಭಾಗದ ಜನರಿಗೆ ಉದ್ಯೋಗ ಒದಗಿಸಲು ದಶಕಗಳ ಕಾಲ ಜನತೆ ಹಾಗೂ ಎಡಪಕ್ಷಗಳು ನಡೆಸಿದ ಐಕ್ಯ ಹೋರಾಟಗಳ ಮೂಲಕ ಗಳಿಸಿದ ಅತ್ಯಂತ ಮಹತ್ವದ ಹಕ್ಕಾಗಿರುವ ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತ್ರಿ ಯೋಜನೆ (MGNREGA) ಯ ಹೆಸರನ್ನು ಬದಲಾಯಿಸುವ ಪ್ರಯತ್ನವಾಗಿ ಪ್ರಸ್ತಾವಿತ VB-GRAMG ಮಸೂದೆಯನ್ನು ಮಂಡಿಸಲು ಮುಂದಾಗಿರುವ ಕೇಂದ್ರ ಬಿಜೆಪಿ ಸರಕಾರದ ನಡೆಯನ್ನು ಭಾರತ ಪ್ರಜಾಸತ್ತಾತ್ಮಕ ಯುವಜನ ಫೆಡರೇಷನ್ (ಡಿವೈಎಫ್ಐ) ಕರ್ನಾಟಕ ರಾಜ್ಯ ಸಮಿತಿಯು ಬಲವಾಗಿ ಖಂಡಿಸುತ್ತದೆ” ಎಂದು ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ತಿಳಿಸಿದರು.
ಹಾವೇರಿ ಪಟ್ಟಣದಲ್ಲಿ ಮಂಗಳವಾರ ಈ ಕುರಿತು ಪತ್ರಿಕಾ ಹೇಳಿಕೆ ನೀಡಿದ ಅವರು, “ಉದ್ದೇಶಿತ ಮಸೂದೆಯಲ್ಲಿ ಕೆಲಸದ ದಿನಗಳ ಸಂಖ್ಯೆಯನ್ನು ಹೆಚ್ಚಿಸುವಂತೆ ಮೇಲ್ನೋಟಕ್ಕೆ ಕಂಡುಬಂದರೂ, ವಾಸ್ತವದಲ್ಲಿ ಯೋಜನೆಯ ಹಣಕಾಸಿನ ಮಾದರಿಯನ್ನು ಮೂಲಭೂತವಾಗಿ ಬದಲಾಯಿಸುವ ಮೂಲಕ ಹೊಣೆಗಾರಿಕೆಯಿಂದ ಕೇಂದ್ರ ಸರಕಾರವು ತಪ್ಪಿಸಿಕೊಳ್ಳುವ ಪ್ರಯತ್ನವಾಗಿದೆ” ಎಂದು ಹೇಳಿದರು.
“ಪ್ರಸ್ತಾವಿತ ಮಸೂದೆಯು ವೇತನ ಪಾವತಿಗೆ ಕೇಂದ್ರ ಸರ್ಕಾರದ ಜವಾಬ್ದಾರಿಯನ್ನು 100 ಪ್ರತಿಶತದಿಂದ ರಾಜ್ಯಗಳಿಗೆ 60:40 ಹಂಚಿಕೆ ವ್ಯವಸ್ಥೆಗೆ ಕಡಿಮೆ ಮಾಡುತ್ತದೆ. ಇದು ನಿರುದ್ಯೋಗ ಭತ್ಯೆಯ ಹೊರೆ ಮತ್ತು ವಿಳಂಬ ಪಾವತಿಗಳಿಗೆ ಪರಿಹಾರವನ್ನು ಸಂಪೂರ್ಣವಾಗಿ ರಾಜ್ಯ ಸರ್ಕಾರಗಳ ಮೇಲೆ ವರ್ಗಾಯಿಸುತ್ತದೆ. ರಾಜ್ಯಗಳ ಮೇಲೆ ಸಮರ್ಥನೀಯವಲ್ಲದ ಆರ್ಥಿಕ ಒತ್ತಡವನ್ನು ಹೇರುತ್ತದೆ. ಅದೇ ಸಮಯದಲ್ಲಿ ನಿರ್ಧಾರಗಳನ್ನು ತೆಗೆದುಕೊಳ್ಳುವಲ್ಲಿ ರಾಜ್ಯ ಸರಕಾರಗಳಿಗೆ ಯಾವುದೇ ಅರ್ಥಪೂರ್ಣ ಪಾತ್ರವನ್ನು ನಿರಾಕರಿಸುತ್ತದೆ. ಕೇಂದ್ರವು ರಾಜ್ಯವಾರು ವೆಚ್ಚದ ಮಿತಿಗಳು ಮತ್ತು ರಾಜ್ಯಗಳು ಭರಿಸಬೇಕಾದ ಹೆಚ್ಚುವರಿ ವೆಚ್ಚಗಳೊಂದಿಗೆ ‘ನಿಯಮಿತ ಹಂಚಿಕೆ’ ಯ ಪರಿಚಯವು ಕಾರ್ಯಕ್ರಮದ ವ್ಯಾಪ್ತಿಯನ್ನು ತೀವ್ರವಾಗಿ ಮೊಟಕುಗೊಳಿಸುತ್ತದೆ ಮತ್ತು ದುಡಿಯುವ ಬಡಜನರ ಮೇಲಿನ ಕೇಂದ್ರದ ಹೊಣೆಗಾರಿಕೆಯನ್ನು ದುರ್ಬಲಗೊಳಿಸುತ್ತದೆ” ಎಂದು ಹೇಳಿದರು.
“ಈ ಮಸೂದೆಯಲ್ಲಿ ಮಹಾತ್ಮ ಗಾಂಧೀಜಿಯವರ ಹೆಸರನ್ನು ತೆಗೆದುಹಾಕುವ ಕ್ರಮವನ್ನು ಡಿವೈಎಫ್ಐ ತೀವ್ರವಾಗಿ ವಿರೋಧಿಸುತ್ತದೆ. MGNREGA ಅನ್ನು ಮರು ಹೆಸರಿಸುವ ಪ್ರಯತ್ನವು ಕೇವಲ ಆಡಳಿತಾತ್ಮಕ ಬದಲಾವಣೆಯಲ್ಲ; ಇದು ಉದ್ದೇಶಪೂರ್ವಕ ರಾಜಕೀಯ ಕುಟಿಲ ನೀತಿಯ ಕೃತ್ಯವಾಗಿದೆ. ಬಿಜೆಪಿ ನೇತೃತ್ವದ ಸರ್ಕಾರವು ಸಾರ್ವಜನಿಕ ಸ್ಮರಣೆ ಮತ್ತು ರಾಷ್ಟ್ರೀಯ ಸಂಸ್ಥೆಗಳಿಂದ ಗಾಂಧೀಜಿಯವರನ್ನು ಅಳಿಸಲು ವ್ಯವಸ್ಥಿತವಾಗಿ ಪ್ರಯತ್ನಿಸುತ್ತಿದೆ” ಎಂದು ಅಸಮಾಧಾನ ವ್ಯಕ್ತಪಡಿಸಿದರು.
“ನಿರುದ್ಯೋಗವು ವಿಶೇಷವಾಗಿ ಯುವಜನರಲ್ಲಿ ಆತಂಕಕಾರಿ ಮಟ್ಟದಲ್ಲಿರುವಾಗ, ಉದ್ಯೋಗ ಖಾತ್ರಿಯ ವ್ಯಾಪ್ತಿಯನ್ನು ವಿಸ್ತರಿಸುವುದು, ಸಮಯೋಚಿತ ಪಾವತಿಗಳನ್ನು ಖಚಿತಪಡಿಸುವುದು, ವೇತನವನ್ನು ಹೆಚ್ಚಿಸುವುದು ಮತ್ತು ನಗರ ಪ್ರದೇಶಗಳಿಗೆ ಉದ್ಯೋಗ ಖಾತರಿಯನ್ನು ವಿಸ್ತರಿಸುವುದು ಈ ಸಂದರ್ಭದ ತುರ್ತು ಅಗತ್ಯವಾಗಿದೆ. ಆದರೆ ಕೇಂದ್ರ ಸರ್ಕಾರವು ಈ ಮಹತ್ವದ ಹಕ್ಕನ್ನು ಪರಿಣಾಮಕಾರಿಯಾಗಿ ಜಾರಿಗೊಳಿಸುವ ಬದಲಿಗೆ ತಾನು ಜವಾಬ್ದಾರಿಯಿಂದ ನುಣುಚಿಕೊಳ್ಳಲು ಪ್ರಯತ್ನಿಸುತ್ತಿದೆ. ಅಲ್ಲದೇ ಜನತೆಯ ಹಕ್ಕು ಆಧಾರಿತ ಈ ಮಹತ್ವದ ಯೋಜನೆಯನ್ನು ದುರ್ಬಲಗೊಳಿಸುತ್ತದೆ” ಎಂದು ಹೇಳಿದರು.
“ತನ್ನ ರಾಜಕೀಯ ಲಾಭಕ್ಕಾಗಿ ಯೋಜನೆಯ ಮರು ನಾಮಕರಣಕ್ಕೆ ಮುಂದಾಗಿರುವ ಈ ದುಷ್ಟ ಕ್ರಮವನ್ನು ಡಿವೈಎಫ್ಐ ಪ್ರಬಲವಾಗಿ ವಿರೋಧಿಸುತ್ತದೆ. ಕೇಂದ್ರ ಸರಕಾರ ಹೆಸರು ಬದಲಾವಣೆ ಮಾಡುವ ಇಂತಹ ಕುತಂತ್ರಗಳ ಬದಲಾಗಿ ಮನರೇಗಾಕ್ಕೆ ಹೆಚ್ಚಿನ ಅನುದಾನ ಮೀಸಲಿರಿಸಿ ಸಮರ್ಪಕವಾಗಿ ಜಾರಿಗೊಳಿಸಬೇಕು. ನಗರ ಪ್ರದೇಶದ ಬಡಜನರಿಗೂ ಉದ್ಯೋಗ ಸೌಲಭ್ಯ ಕಲ್ಪಿಸಲು ಸಾಧ್ಯವಾಗುವಂತೆ ನಗರ ಪ್ರದೇಶಕ್ಕೂ ಈ ಯೋಜನೆಯನ್ನು ವಿಸ್ತರಿಸಬೇಕು” ಎಂದು ಆಗ್ರಹಿಸಿದರು.
“ದೇಶದ ಗ್ರಾಮೀಣ ಪ್ರದೇಶದ ಜನರ ಉದ್ಯೋಗದ ಹಕ್ಕು, ದೇಶದ ಒಕ್ಕೂಟ ತತ್ವಗಳು ಮತ್ತು ಸಾಮಾಜಿಕ ನ್ಯಾಯದ ಮೇಲೆ ಕೇಂದ್ರ ಬಿಜೆಪಿ ಸರಕಾರ ನಡೆಸುತ್ತಿರುವ ಈ ದಾಳಿಯನ್ನು ಹಿಂಪಡೆಯದಿದ್ದರೆ ಇದರ ವಿರುದ್ಧ ಯುವಜನತೆ ಪ್ರಬಲ ಪ್ರತಿರೋಧ ಚಳುವಳಿ ನಡೆಸಲಾಗುವುದು” ಎಂದು ಬಸವರಾಜ ಪೂಜಾರ್ ಕೇಂದ್ರ ಸರಕಾರಕ್ಕೆ ಎಚ್ಚರಿಕೆ ನೀಡಿದರು.





