“ಸರ್ವಜ್ಞನ ತ್ರಿಪದಿ ಸಾಹಿತ್ಯವು ಮೂಢನಂಬಿಕೆಗಳನ್ನು ಖಂಡಿಸಿ ವೈಚಾರಿಕ,ವೈಜ್ಞಾನಿಕ ಮತ್ತು ತಾರ್ಕಿಕ ಚಿಂತನೆಗೆ ಹಚ್ಚುತ್ತವೆ ಎಂದು ಮಾಸೂರಿನ ಪ್ರಾಚಾರ್ಯರು ಕೆ.ಆರ್ ಕೊಣ್ತಿ ಹೇಳಿದರು.
ಹಾವೇರಿ ಜಿಲ್ಲೆಯ ಹಿರೇಕೆರೂರು ಪಟ್ಟಣದ ಶ್ರೀ ಕಾಗಿನೆಲೆ ಮಹಾಸಂಸ್ಥಾನ ಕನಕ ಗುರುಪೀಠ ಪದವಿಪೂರ್ವ ಮಹಾವಿದ್ಯಾಲಯದಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿ ಹಾಗೂ ಜಿಲ್ಲಾ ಚಕೋರ ಸಾಹಿತ್ಯ ವಿಚಾರ ವೇದಿಕೆ ವತಿಯಿಂದ ತ್ರಿಪದಿ ಕವಿ ಸರ್ವಜ್ಞರ ಸಾಹಿತ್ಯದಲ್ಲಿ ಸಾಮಾಜಿಕ ಪ್ರಜ್ಞೆ ವಿಶೇಷದ ಕುರಿತು ನೀಡಿದರು.
“ಸರ್ವಜ್ಞನ ತ್ರಿಪದಿಗಳು ಅವು ಬರಿ ಕವಿತೆಗಳಲ್ಲ ಸಮಾಜದ ಅಂಕುಡೊಂಕುಗಳನ್ನು ತಿದ್ದಿ ಸಲಹೆ ಸೂಚನೆ ಮಾರ್ಗದರ್ಶನ ನೀಡುವ ಸಂದೇಶಗಳಾಗಿವೆ. ಮಾನವೀಯ ಮೌಲ್ಯಗಳನ್ನು ಮೂಡಿಸಿ ಸರ್ವರು ಸಮಾನರು ಎಂಬ ಭಾವನೆಯನ್ನು ಮೂಡಿಸುತ್ತವೆ.
ಸರ್ವಜ್ಞರಿಗೆ ಲೌಕಿಕ ಬದುಕಿನ ಅನುಭವ ಹಾಗೂ ಆಧ್ಯಾತ್ಮಿಕ ಅನುಭಾವಗಳನ್ನು ಬಲ್ಲವರಾದ್ದರಿಂದ ಅವರ ಸಾಹಿತ್ಯದಲ್ಲಿ ಶಿಸ್ತು, ಜ್ಞಾನ, ಭಕ್ತಿ, ನೇರ ನುಡಿ, ಸರಳತೆ ವೈಚಾರಿಕ ಹಾಗೂ ವೈಜ್ಞಾನಿಕತೆ ಅವರ ತ್ರಿಪದಿಗಳ ಸಾರವಾಗಿವೆ” ಎಂದರು.
“ಜಾತಿ ತಾರತಮ್ಯವಿರದ ಸೌಹಾರ್ದ ಸಾಮರಸ್ಯದ ಸಮ ಸಮಾಜ ನಿರ್ಮಿಸಲು ಜನತೆಯಲ್ಲಿ ಸಾಮಾಜಿಕ ಪ್ರಜ್ಞೆಯನ್ನು ಮೂಡಿಸಿದ ಸರ್ವಜ್ಞರು ಸಮಾಜೋದ್ಧಾರದ ಸಂದೇಶಗಳನ್ನು ಸಾರಿದ್ದಾರೆ” ಎಂದು ಹೇಳಿದರು.
ಸಾಹಿತಿ ಬಸವರಾಜ ಪೂಜಾರ ಮಾತನಾಡಿ, “ಇಂದಿನ ಯುವ ಜನತೆ ಸರ್ವಜ್ಞರ ಸಾಹಿತ್ಯವನ್ನು ಓದಿ ಅವರ ಚಿಂತನೆಗಳನ್ನು ಮೈಗೂಡಿಸಿಕೊಳ್ಳಬೇಕು” ಎಂದು ತಿಳಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯ ಶ್ರೀ ಗುಡ್ಡಪ್ಪ ಮಾಳಗುಡ್ಡಪ್ಪನವರ ಮಾತನಾಡಿ, “ಸರ್ವಜ್ಞರ ಸಾಹಿತ್ಯ ಸರ್ವರಿಗೂ ಮುಟ್ಟುವಂತಾಗಲಿ ಸರ್ಕಾರ, ಸಾಹಿತ್ಯ ಅಕಾಡೆಮಿ ಸರ್ವಜ್ಞರ ತ್ರಿಪದಿ ಸಾಹಿತ್ಯದ ಕುರಿತು ಸಂಶೋಧನೆ, ಪುಸ್ತಕ ಪ್ರಕಟಣೆ ಹೆಚ್ಚು ಹೆಚ್ಚು ಕೈಗೊಳ್ಳುಲಿ. ಸರ್ವಜ್ಞ ಅಭಿವೃದ್ಧಿ ಪ್ರಾಧಿಕಾರ ಶೀಘ್ರ ಕಾರ್ಯೋನಮುಖವಾಗಿ ಕಾರ್ಯಪ್ರವೃತ್ತವಾಗಲಿ” ಎಂದು ಆಶಿಸಿದರು.
ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕ ಮಾರುತಿ ತಳವಾರ ಪ್ರಾಸ್ತಾವಿಕವಾಗಿ ಮಾತನಾಡಿದರು. ಮಹಾವಿದ್ಯಾಲಯದ ಕನ್ನಡ ಉಪನ್ಯಾಸಕ ಕುಮಾರ ಮಡಿವಾಳರ ವಿದ್ಯಾರ್ಥಿ ವೇದಿಕೆ ಪ್ರತಿನಿಧಿ ಕುಮಾರಿ ರೇಣುಕಾ ಹಾಗೂ ರವಿ ಭಜಂತ್ರಿ ಉಪಸ್ಥಿತರಿದ್ದರು. ಸೃಷ್ಟಿ ಅಂಕಿತ ಪ್ರಾರ್ಥಿಸಿದರು,ಕು. ದೀಪಾ ಹರಿಯಪ್ಪನವರ ನಿರೂಪಿಸಿದರು ಕಾಂಚನ ಮಡಿವಾಳರ ಸ್ವಾಗತಿಸಿದರು, ರಾಧಿಕಾ ವಂದಿಸಿದರು.





