“ಕುವೆಂಪು ಅವರ ಸಾಹಿತ್ಯದಲ್ಲಿ ಸಾಮಾಜಿಕ ನ್ಯಾಯ, ಪ್ರಜ್ಞೆ, ಸಂವಿಧಾನದ ಆಶಯ ಒಳಗೊಂಡಿದೆ” ಎಂದು ಡಾ. ಹೊನ್ನಪ್ಪ ಹೊನ್ನಪ್ಪನವರ ಹೇಳಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರ ಪಟ್ಟಣದ ಸರಕಾರಿ ಪ್ರಥಮ ದರ್ಜೆ ಕಾಲೇಜಿನಲ್ಲಿ ಇಂದು ಕರ್ನಾಟಕ ಸಾಹಿತ್ಯ ಅಕಾಡೆಮಿ, ಚಕೋರ ಸಾಹಿತ್ಯ ವಿಚಾರ ವೇದಿಕೆ ಸಹಯೋಗದಲ್ಲಿ ‘ಕುವೆಂಪು ಅವರ ಸಾಹಿತ್ಯದಲ್ಲಿ ಸಂವಿಧಾನಿಕ ನೆಲೆಗಳು’ ಕುರಿತು ವಿಶೇಷ ಉಪನ್ಯಾಸ ಅವರು ನೀಡಿದರು.
“ಕುವೆಂಪು ಅವರ ಪ್ರತಿ ನಾಟಕಗಳಲ್ಲಿಯೂ ಸಾಮಾಜಿಕ ಪ್ರಜ್ಞೆ, ನ್ಯಾಯ ಒಳಗೊಂದಿರುತ್ತದೆ. ಶೂದ್ರ ತಪಸ್ವಿ ನಾಟಕದಲ್ಲಿ ಶಂಭುಕನಿಗೆ ರಾಮನ ಮೂಲಕ ಸಾಮಾಜಿಕ ನ್ಯಾಯವನ್ನು ಕುವೆಂಪು ಅವರು ದೊರಕಿಸಿ, ಶಂಭುಕನನ್ನು ತಪಸ್ಸಿನೆತ್ತರಕೆ ತೆಗೆದುಕೊಂಡು ಹೋದರು. ಎಂದು ಹೇಳಿದರು.
“ಮಲೆಗಳಲ್ಲಿ ಮದುಮಗಳು ಕಾದಂಬರಿಯಲ್ಲಿ ‘ಯಾರು ಮುಖ್ಯರಲ್ಲ, ಯಾರು ಅಮುಖ್ಯರಲ್ಲ’ ಎಂದು ಹೇಳುವುದರ ಮೂಲಕ ಈ ಸಮಾಜದಲ್ಲಿ ಯಾರು ಮೇಲು-ಕೀಳು ಎಂಬುದಿಲ್ಲ. ಎಲ್ಲರೂ ಸಮಾನರೇಂದು ಹೇಳಿದ್ದಾರೆ. ಕುವೆಂಪು ಅವರ ಸಾಹಿತ್ಯವನ್ನು ವಿದ್ಯಾರ್ಥಿಗಳು ಓದಬೇಕು” ಎಂದರು.
“ಜಾತಿ, ಧರ್ಮ ಮೌಢ್ಯದ ಹೆಸರಿನಲ್ಲಿ ಇಂದಿನ ಯುವಕರು ಬಲಿಯಾಗುತ್ತಿದ್ದಾರೆ. ಹಾಗಾಗಿ ಕುವೆಂಪು ಅವರು ಜಾತಿಗೆ ಸಿಲುಕಬೇಡಿ, ಅದರಿಂದ ಹೊರ ಬನ್ನಿ ಮನುಜ ಮತ ಸೇರ ಬನ್ನಿ ಎಂದಿದ್ದಾರೆ” ಎಂದರು.
ಕಾರ್ಯಕ್ರಮವನ್ನು ಉದ್ಘಾಟಿಸಿದ ಜಾನಪದ ವಿವಿ ಕುಲಸಚಿವರು ಡಾ. ಶಿವಶಂಕರ ಕೆ ಅವರು ಮಾತನಾಡಿ, “ಕುವೆಂಪು ಅವರ ಸಾಹಿತ್ಯವನ್ನು ಓದಿದರೆ, ಕಷ್ಟದ ನಡುವೆಯು ನಗುವನ್ನು, ಸಂತೋಷವನ್ನು ತುಂಬವ ಸಾಹಿತ್ಯ ರಚಿಸಿದ್ದಾರೆ” ಎಂದರು.
ಮುಖ್ಯ ಅತಿಥಿಗಳು ಡಾ. ಮಲ್ಲಿಕಾರ್ಜುನ ಮಾನ್ಪಡೆ ಅವರು ಮಾತನಾಡಿ, “ಧರ್ಮ, ಜಾತಿ, ಲಿಂಗದ ಆಧಾರದ ಮೇಲೆ ಸಮಾನತೆಯನ್ನು ಮೇಲ್ವರ್ಗದವರು ಕಿತ್ತುಕೊಂದಿದ್ದರು. ಕೆಳ ವರ್ಗದವರಿಗೆ ಶಿಕ್ಷಣ ಪಡೆದುಕೊಳ್ಳಲು ಆಗುತ್ತಿರಲಿಲ್ಲ. ನಂತರದಲ್ಲಿ ಡಾ. ಬಿ. ಆರ್. ಅಂಬೇಡ್ಕರ್, ಜ್ಯೋತಿ ಬಾ ಪುಲೆ ಅವರು ಬಂದ ಮೇಲೆ ಎಲ್ಲರಿಗೂ ಶಿಕ್ಷಣ ಪಡೆಯಲಾಯಿತು” ಎಂದು ಹೇಳಿದರು.
ಪ್ರಸ್ತಾವಿಕವಾಗಿ ಚಕೋರ ಸಾಹಿತ್ಯ ವೇದಿಕೆ ಜಿಲ್ಲಾ ಸಂಚಾಲಕ ಮಾರುತಿ ತಳವಾರ ಮಾತನಾಡಿ, “ಚಕೋರ ಸಾಹಿತ್ಯ ವಿಚಾರ ವೇದಿಕೆಯ ಮೂಲಕ ವಿದ್ಯಾರ್ಥಿಗಳಲ್ಲಿ ಸಾಹಿತ್ಯದ ಪರಿಚಯ, ವಿಚಾರಗಳ ಕುರಿತು ಅರಿವು ಮೂಡಿಸುವ ಉದ್ದೇಶದಿಂದ ಈ ಕಾರ್ಯಕ್ರಮವನ್ನು ಆಯೋಜಿಸಲಾಗಿದೆ. ಎಲ್ಲ ವಿದ್ಯಾರ್ಥಿಗಳು ಸದುಪಯೋಗ ಪಡೆಕೊಂಡು ಸಾಹಿತ್ಯದ ಕಡೆ ಅಭಿರುಚಿ ಹೆಚ್ಚಿಸಿಕೊಳ್ಳಬೇಕು” ಎಂದರು.
ಕಾರ್ಯಕ್ರಮದ ವೇದಿಕೆಯಲ್ಲಿ ಕಾಲೇಜಿನ ಪ್ರಾಚಾರ್ಯರು ರವಿಕುಮಾರ್ ನಾಯಕ ಅವರು ಅಧ್ಯಕ್ಷತೆ ವಹಿಸಿದ್ದರು, ಕನ್ನಡ ವಿಭಾಗದ ಮುಖ್ಯಸ್ಥರು ಡಾ. ಆಶಿಕಾ.ಎಚ್.ಸಿ, ಇದ್ದರು. ಚಕೋರ ಸಾಹಿತ್ಯ ವಿಚಾರ ವೇದಿಕೆ ಜಿಲ್ಲಾ ಸಂಚಾಲಕರು ಶೇಖರ ಭಜಂತ್ರಿ ಸ್ವಾಗತಿಸಿದರು. ಗೋವಿಂದಪ್ಪ.ಜಿ ಅವರು ನಿರೂಪಿಸಿದರು. ಪುಟ್ಟಪ್ಪ ಲಮಾಣಿ ವಂದನಾರ್ಪಣೆ ಮಾಡಿದರು. ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





