ಹಾವೇರಿ ಗುರು ಭವನದಲ್ಲಿ ಎರಡು ದಿನಗಳ ಕಾಲ ಜರುಗಿದ ರಾಜ್ಯ ಮಟ್ಟದ ಹಾಸ್ಟೇಲ್ ವಿದ್ಯಾರ್ಥಿಗಳ ಸಮಾವೇಶದಲ್ಲಿ ವಿಚಾರದ ಜೊತೆಗೆ ರಂಜನೆಯನ್ನು ನೀಡುವ ಎರಡು ನಾಟಕಗಳು ಪ್ರದರ್ಶನಗೊಂಡವು.
ಮೊದಲ ನಾಟಕ ‘ಹಾಸ್ಟೇಲ್ ಹಾಸ್ಟೇಲ್’ ನಾಟಕ ಈಗಿರುವ ವ್ಯವಸ್ಥೆಯಲ್ಲಿ ಅನುದಾನವನ್ನು ಹೆಚ್ಚಿಸುವ ಕುರಿತದ್ದಾಗಿತ್ತು. ‘ಬೇಕೆ ಬೇಕು ನ್ಯಾಯಾ ಬೇಕು’ ಎಂದು ಪ್ರತಿಭಟನೆಯೊಂದಿಗೆ ಆರಂಭವಾಗುವ ನಾಟಕ ನಂತರ ನಾನಾ ತಿರುವುಗಳನ್ನು ಪಡೆಯುತ್ತದೆ. ಅಲ್ಲಿಗೆ ಆಗಮಿಸಿದ ಪತ್ರಕರ್ತ ಪ್ರತಿಭಟನಾಕಾರರನ್ನು ಶಾಸಕರ ಬಳಿ ಕರೆದೊಯ್ದು ಸಮಸ್ಯೆಗಳ ಪರಿಹಾರಕ್ಕೆ ಹೊಸ ಆಯಾಮ ನೀಡುತ್ತಾನೆ.
ಶಾಸಕರು ಎಲ್ಲ ಸಮ್ಮಸ್ಯೆಗಳನ್ನು ಆಲಿಸಿ ಸಚಿವರ ಬಳಿ ಬೆಂಗಳೂರಿಗೆ ವಿದ್ಯಾರ್ಥಿ ಸಮೂಹವನ್ನು ಕರೆದೊಯ್ದಾಗ ಸಚಿವರು ‘ಈ ಬಜಟ್ಟಿನಲ್ಲಿ ಅನುದಾನ ಹೆಚ್ಚಿಸುವುದಾಗಿ’ ಭರವಸೆ ನೀಡುತ್ತಾರೆ. ಜೈ ಕಾರದೊಂದಿಗೆ ನಾಟಕ ಮುಕ್ತಾಯವಾಗುತ್ತದೆ. ನಾಟಕವನ್ನು ಸತೀಶ ಕುಲಕರ್ಣಿ ನಿರ್ದೇಶಿಸಿದ್ದರು.
ಸಮಾವೇಶಕ್ಕೆ ಆಗಮಿಸಿದ ಸುಮಾರು ೩೦ ವಿದ್ಯಾರ್ಥಿಗಳು ನಾಟಕದಲ್ಲಿ ಉತ್ಸಾಹದಿಂದ ಪಾಲ್ಗೊಂಡಿದ್ದರು. ಪತ್ರಕರ್ತರಾಗಿ ನಿಂಗಪ್ಪ ಆರೇರ್, ಶಾಸಕರಾಗಿ ಸತೀಶ ಕುಲಕರ್ಣಿ, ಸಚಿವರಾಗಿ ಬಸವರಾಜ ಪೂಜಾರ, ಆಪ್ತ ಕಾರ್ಯದರ್ಶಿಯಾಗಿ ನಾರಾಯಣ ಕಾಳೆ ಪ್ರಮುಖ ಪಾತ್ರಧಾರಿಗಳಾಗಿದ್ದರು.
ವಿದ್ಯಾರ್ಥಿ ನಾಯಕರಾಗಿ ಬಸವರಾಜ ಎಸ್. ರೇಣುಕಾ ಕಹಾರ, ಚೈತ್ರಾ ಕೊರವರ, ಅರುಣ ನಾಗವತ, ಧನುಶ್ ದೊಡ್ಡಮನಿ, ಪೂರ್ಣಿಮಾ ಡವಗಿ, ನಾಗರಾಜ ಕಾಯಕದ, ವಿಶ್ವ ಈಳಗೇರ, ಬೀರೇಶ, ಪವನ ಜಾಡರ, ಪ್ರಿಯಾಂಕ, ಭೂಮಿಕಾ ಮಾದರ, ಸಂಜನಾ ಆಡೂರ, ಕೀರ್ತಿ ಲಮಾಣಿ, ಪವಿತ್ರ ಬೆಳಕೇರಿ, ಭಾರತಿ, ಭರತ ಮಡಿವಾಳರ, ಮಾರುತಿ ಲಂಕೇರ, ಮಹೇಶ ಮರೋಳ, ವನಜಾಕ್ಷ ಬುಳ್ಳಮ್ಮನವರ, ಭವ್ಯ ಲಕರೆಡ್ಡಿ ಮುಂತಾದವರು ಅಭಿನಯಿಸಿದ್ದರು.
ಇನ್ನೊಂದು ನಾಟಕ ಮೂಕಿ ಟಾಕಿ ಸಂಪೂರ್ಣ ಹಾಸ್ಯ ಮಯವಾಗಿತ್ತು. ಎಸ್.ಆರ್.ಎಸ್ ಕಲಾ ತಂಡದವರು ಅಭಿನಯಿಸಿದ ನಾಟಕದಲ್ಲಿ ಕೇವಲ ಮೂವರು ಪಾತ್ರಧಾರಿಗಳು. ಎ.ಎಸ್. ಮೂರ್ತಿ ಅವರು ಬರೆದ ನಾಟಕವು ಸಭಾಂಗಣದಲ್ಲಿ ಸೇರಿದ್ದ ಇನ್ನೂರಕ್ಕೂ ಹೆಚ್ಚು ವಿದ್ಯಾರ್ಥಿ ಸಮೂಹವನ್ನು ರಂಜಿಸಿತು.
ನಾಯಕ ಶಂಕ್ರಪ್ಪ ( ಶಂಕರ ತುಮ್ಮಣ್ಣನವರ ) ತಪಸ್ಸು ಮಾಡಿ ಬ್ರಹ್ಮನನ್ನು ಸಾಕ್ಷಾತ್ಕರಿಸಿಕೊಳ್ಳುತ್ತಾನೆ. ‘ನನಗೊಂದು ಚಂದನ ಹೆಂಡತಿ ಬೇಕು’ ಎಂದು ವರ ಕೇಳುತ್ತಾನೆ. ಬ್ರಹ್ಮ ( ರಾಘವೇಂದ್ರ ಕಬಾಡಿ ) ತತಾಸ್ಥು ಎಂದು ಒಬ್ಬ ಚೆಲುವೆಯನ್ನು ( ಶ್ರೀಮತಿ ಶಶಿಕಲಾ ಅಕ್ಕಿ ) ಸೃಷ್ಠಿ ಮಾಡುತ್ತಾನೆ. ಖುಷಿಯಿಂದ ಶಂಕ್ರಪ್ಪ ಪ್ರೀತಿಸಲು ಹೋದಾಗ ಅವಳು ಮೂಕಿಯಾಗಿರುತ್ತಾಳೆ. ಅವಳನ್ನು ನಿರಾಕರಿಸಿದ ಶಂಕ್ರಪ್ಪ ಮತ್ತೆ ತಪಸ್ಸು ಮಾಡಿ ‘ಬಾಯಿ ಇರುವ ಟಾಕಿ ಹೆಂಡತಿ ಬೇಕು’ ಎಂದು ಕೇಳುತ್ತಾನೆ.
ಟಾಕಿ ಹೆಂಡತಿ ಕಾರು ಬಂಗಲೆ, ಐಶಾರಾಮಿ ಬದುಕು ಬೇಕೆಂದು ಹಲವು ಶರತ್ತುಗಳನ್ನು ಹಾಕಿದಾಗ ಕಂಗಾಲಾದ ಶಂಕ್ರಪ್ಪ ಮತ್ತೆ ಬ್ರಹ್ಮನನ್ನು ತಪಸ್ಸು ಮಾಡಿ ಕರೆಯಿಸಿದಾಗ ‘ನನ್ನನ್ನು ಮೂಕ, ಕಿವುಡ, ಕುರುಡನನ್ನಾಗಿ’ ಮಾಡೆಂದು ಕೇಳುತ್ತಾನೆ. ಇದ್ದುದರಲ್ಲಿಯೇ ಸಂತೋಷ ಪಡಬೇಕು ಎಂಬ ಸಂದೇಶವನ್ನು ಬ್ರಹ್ಮ ಕೊನೆಯಲ್ಲಿ ಸಾರುತ್ತಾನೆ. ನಾಟಕವನ್ನು ರಾಘವೇಂದ್ರ ಕಬಾಡಿ ಅವರು ನಿರ್ದೇಶಿಸಿದ್ದರು.
ಇದನ್ನು ಓದಿದ್ದೀರಾ? ಹಾವೇರಿ | SFI ರಾಜ್ಯ ಮಟ್ಟದ ಸಮಾವೇಶದ ಸಮಾರೋಪ; ಹೋರಾಟದ ಮೂಲಕ ಬದಲಾವಣೆ ಆಗಲಿ: ಪರಿಮಳ ಜೈನ್
ಎರಡು ಅತ್ಯುತ್ತಮ ಸಂದೇಶಗಳನ್ನು ನಾಟಕಗಳು ನೀಡುವಲ್ಲಿ ಯಶಸ್ವಿಯಾದವು. ಆರಂಭದಲ್ಲಿ ಶ್ರೀಮತಿ ಪರಿಮಳಾ ಜೈನ್, ಡಾ. ರಾಧಾ ರಂಗಭೂಮಿಯ ಅಗತ್ಯ ಕುರಿತು ಮಾತನಾಡಿದ್ದು ವಿದ್ಯಾರ್ಥಿ ಸಮೂದಾಯಕ್ಕೆ ಸಾಂಸ್ಕೃತಿಕ ಅರಿವೂ ಮುಖ್ಯ ಎಂಬ ಸಂದೇಶ ನೀಡಿದರು.
ಬರಹ : ಸಾಹಿತಿ ಸತೀಶ ಕುಲಕರ್ಣಿ





