“ರಾಣಿಬೆನ್ನೂರ ಸರಕಾರಿ ತಾಲ್ಲೂಕು ಆಸ್ಪತ್ರೆ ಅನಾರೋಗೋಗ್ಯದಿಂದ ಬಂದಂತಹ ಎಲ್ಲ ಸಮುದಾಯದ ಜನರಿಗೆ ಉಚಿತ ಊಟದ ವ್ಯವಸ್ಥೆಯನ್ನು ಉಮ್ಮತ್ ವೇಲ್ಫೇರ್ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ಮಾಡುತ್ತಿರುವುದು ತುಂಬಾ ಔಚಿತ್ಯ ಪೂರ್ಣವಾಗಿದೆ” ಎಂದು ಬಿ.ಎ.ಜೆ.ಎಸ್.ಎಸ್ ಕಾಲೇಜಿನ ಅಧ್ಯಕ್ಷರು ಹಾಗೂ ಎಂಎಲ್ಸಿ ಅಭ್ಯರ್ಥಿ ಡಾ. ಆರ್. ಎಂ. ಕುಬೇರಪ್ಪ ಅವರು ಹೇಳಿದರು.
ಹಾವೇರಿ ಜಿಲ್ಲೆಯ ರಾಣಿಬೆನ್ನೂರು ಪಟ್ಟಣದ ತಾಲ್ಲೂಕು ಆಸ್ಪತ್ರೆಯಲ್ಲಿ ಉಮ್ಮತ್ ವೇಲ್ಫೇರ್ ಎಜುಕೇಷನ್ ಅಂಡ್ ಚಾರಿಟೇಬಲ್ ಟ್ರಸ್ಟ್ ವತಿಯಿಂದ ಪ್ರತಿ ಮಂಗಳವಾರ ಉಚಿತ ಮದ್ಯಾಹ್ನ ಭೋಜನ ಕಾರ್ಯಕ್ರಮವನ್ನು ಉದ್ಘಾಟಿಸಿ ಮಾತನಾಡಿದರು.
ಆಸ್ಪತ್ರೆಗೆ ಬರುವಂತಹ ರೋಗಿಗಳು ಹಳ್ಳಿ ಜನರಾಗಿದ್ದು, ಬಡವರಾಗಿರುತ್ತಾರೆ. ಅವರು ಇಲ್ಲಿಗೆ ಬಂದಾಗ ಊಟ ಸಿಗುವುದಿಲ್ಲ. ಅಂತವರಿಗೆ ಅನುಕೂಲ ಆಗಲೆಂದು ಉಚಿತ ಊಟದ ವ್ಯವಸ್ಥೆ ಮಾಡಿರುತ್ತಾರೆ. ಅಲ್ಪಸಂಖ್ಯಾತರಾಗಿದ್ದರೂ ಎಲ್ಲ ಸಮುದಾಯ ಜನರಿಗೆ ಉಚಿತ ಅನ್ನದ ಸೇವೆ ಮಾಡುತ್ತಿದ್ದಾರೆ. ಇದೊಂದು ಒಳ್ಳೆಯ ಕಾರ್ಯವಾಗಿದೆ. ಎಲ್ಲ ಸಮುದಾಯದ ಜನರು ಒಗ್ಗಟ್ಟಾಗಿ ಇರೋಣ ಎನ್ನುವ ಸಂದೇಶವನ್ನು ಈ ಮೂಲಕ ಅವರು ಸಾರುತ್ತಿದ್ದಾರೆ. ಅವರಿಗೆ ಅಭಿನಂದನೆಗಳನ್ನು ಸಲ್ಲಿಸುತ್ತಿದ್ದೇನೆ ” ಎಂದು ಹೇಳಿದರು.
ಅಂಜುಮನ್ ಅಧ್ಯಕ್ಷರು ಎಚ್. ಎಫ್. ಬಿದಾರಿ ಮಾತನಾಡಿ, “ವೈದ್ಯಕೀಯ ಚಿಕಿತ್ಸೆಗಾಗಿ ಗ್ರಾಮೀಣ ಹಾಗೂ ದೂರದ ಪ್ರದೇಶಗಳಿಂದ ಆಗಮಿಸುವ ಮತ್ತು ಆರ್ಥಿಕ ಸಂಕಷ್ಟವನ್ನು ಎದುರಿಸುತ್ತಿರುವ ರೋಗಿಗಳು ಹಾಗೂ ಅವರ ಸಹಾಯಕರುಗಳಿಗೆ ತಾಜಾ ಮತ್ತು ಸ್ವಚ್ಛ ಆಹಾರವನ್ನು ವಿತರಿಸುತ್ತಿರುವುದು ಮಾದರಿಯಾಗಿದೆ” ಎಂದು ಹೇಳಿದರು.
ಕಾರ್ಯಕ್ರಮದ ಉಮ್ಮತ್ ವೆಲ್ಫೇರ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ನ ಅಧ್ಯಕ್ಷರು ಮುಷ್ಟಾಕ್ ಅಹಮದ್ ಸೈಕಲಗಾರ ಮಾತನಾಡಿ, “ಅನ್ನ ದಾನ ಶ್ರೇಷ್ಠ ದಾನ ಎನ್ನುವರು. ಅಂತಹ ಕಾರ್ಯವನ್ನು ನಮ್ಮ ಸಂಸ್ಥೆಯಿಂದ ಪ್ರತಿ ಮಂಗಳವಾರ ಸರಕಾರಿ ಆಸ್ಪತ್ರೆಯ ರೋಗಿಗಳು, ಅವರ ಜೊತೆಗೆ ಬರುವ ಸಹ ಜನರಿಗೆ ಉಚಿತ ಭೋಜನ ವ್ಯವಸ್ಥೆಯನ್ನು ಮಾಡಿರುತ್ತೇವೆ” ಎಂದರು.
“ಇದರ ಜೊತೆಗೆ ಅನೇಕ ಸಾಮಾಜಿಕ ಕಾರ್ಯಗಳನ್ನು ಮಾಡುತ್ತಿದ್ದು, ಪ್ರತಿ ವಾರ್ಡ್ ಗಳಲ್ಲಿ ಶೈಕ್ಷಣಿಕ ಸಮೀಕ್ಷೆ ಮಾಡಿ ಸಾಕ್ಷರತಾ ಮಟ್ಟ, ಶಾಲೆ–ಕಾಲೇಜು ದಾಖಲಾತಿ, ಮಧ್ಯದಲ್ಲಿ ಶಿಕ್ಷಣ ತೊರೆದ ಪ್ರಕರಣಗಳು ಹಾಗೂ ವಿದ್ಯಾರ್ಥಿಗಳು ಎದುರಿಸುತ್ತಿರುವ ಶೈಕ್ಷಣಿಕ ಸವಾಲುಗಳ ಕುರಿತು ಮಾಹಿತಿಯನ್ನು ಸಂಗ್ರಹಿತ್ತೇವೆ. ನಂತರದಲ್ಲಿ ಸಂಗ್ರಹಿಸಿದ ಮಾಹಿತಿಯನ್ನು ಆಧರಿಸಿ ರಚನಾತ್ಮಕ ಶೈಕ್ಷಣಿಕ ಬೆಂಬಲ ಕಾರ್ಯಕ್ರಮಗಳು, ವಿದ್ಯಾರ್ಥಿವೇತನಗಳು, ವೃತ್ತಿ ಮಾರ್ಗದರ್ಶನ ಮತ್ತು ಕೌಶಲ್ಯಾಭಿವೃದ್ಧಿ ಯೋಜನೆಗಳನ್ನು ಅರ್ಹ ವಿದ್ಯಾರ್ಥಿಗಳಿಗಾಗಿ ರೂಪಿಸಲಾಗುವುದು” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ವೆಲ್ಫೇರ್ ಎಜುಕೇಶನಲ್ & ಚಾರಿಟೇಬಲ್ ಟ್ರಸ್ಟ್ ಉಪಾಧ್ಯಕ್ಷ ಅಬ್ದುಲ್ಖಾದರ್ ಬಂಕರ್, ಕಾರ್ಯದರ್ಶಿ ಅನ್ಸಾರ್ ಖಾಜಿ, ಖಜಾಂಚಿ ಅಬ್ದುಲ್ ಸತ್ತಾರ್ ರೋಟಿವಾಲೆ, ಟ್ರಸ್ಟಿ ಸದಸ್ಯರು ಗೌಸ್ ಆಗಡಿ, ಮುನೀರ್ ಅಹಮದಸಿ, ಸಯ್ಯದ್ ನಾಸರ್ ಬ್ಯಾಡಗಿ, ರಫೀಕ್ ಅಹಮದ್ ಮೊಮಿನ, ನೌಶಾದ್ ಅಹಮದ್ ಖಾಜಿ ಹಾಗೂ ಮುಖಂಡರು, ಸ್ವಯಂಸೇವಕರು ಉಪಸ್ಥಿತರಿದ್ದರು.





