ಕೇಂದ್ರ ಸರ್ಕಾರ ಪ್ರಸ್ತಾಪಿಸಿರುವ ವಿಕಸಿತ ಭಾರತ ಜಿ-ರಾಮ್-ಜಿ ಮಸೂದೆ 2025ನ್ನು ಖಂಡಿಸಿ ಹಾಗೂ ಮಹಾತ್ಮಗಾಂಧಿ ನರೇಗಾ ಯೋಜನೆ ಮರುಸ್ಥಾಪಿಸಿ, ಬಲವರ್ಧನೆಗೆ ಆಗ್ರಹಿಸಿ ಜಿಲ್ಲಾ ಸಂಯುಕ್ತ ಸಂಘಟನೆಗಳ ಹೋರಾಟ ಸಮಿತಿಯಿಂದ ಪ್ರತಿಭಟನೆ ನಡೆಸಲಾಯಿತು.
ಹಾವೇರಿ ಪಟ್ಟಣದ ಮುರುಘರಾಜೇಂದ್ರ ಮಠದಿಂದ ಸೋಮವಾರ ಪ್ರತಿಭಟನೆ ಪಾದಯಾತ್ರೆ ನಡೆಸಿದ ಕಾರ್ಯಕರ್ತರು, ಕೂಲಿ ಕಾರ್ಮಿಕರು ಹೊಸಮನಿ ಸಿದ್ದಪ್ಪ ವೃತ್ತದ ಮಾರ್ಗವಾಗಿ ತಾಪಂ ಆವರಣದಲ್ಲಿರುವ ಸಂಸದರ ಜನ ಸಂಪರ್ಕ ಕಚೇರಿ ಎದುರು ಪ್ರತಿಭಟಿಸಿ, ಅಲ್ಲಿಂದ ಜಿಲ್ಲಾಡಳಿತ ಭವನಕ್ಕೆ ತೆರಳಿ ಪ್ರತಿಭಟಿಸಿ ಕೇಂದ್ರ ಸರ್ಕಾರ ವಿರುದ್ಧ ಘೋಷಣೆ ಕೂಗಿ ಆಕ್ರೋಶ ವ್ಯಕ್ತಪಡಿಸಿದರು.
ಪ್ರತಿಭಟನೆಗೆ ಬೆಂಬಲಿಸಿದ ಡಿವೈಎಫ್ಐ ರಾಜ್ಯ ಕಾರ್ಯದರ್ಶಿ ಬಸವರಾಜ ಪೂಜಾರ ಮಾತನಾಡಿ, “ಕೇಂದ್ರ ಸರಕಾರ ಮಹಾತ್ಮ ಗಾಂಧಿ ರಾಷ್ಟೀಯ ಗ್ರಾಮೀಣ ಉದ್ಯೋಗ ಖಾತರಿ ಕಾಯ್ದೆಯ ಹೆಸರನ್ನು ಬದಲಾವಣೆ ಮಾಡಿ ಅದರ ಸಂಪೂರ್ಣ ಸ್ವರೂಪವನ್ನೇ ಬದಲಾಯಿಸಿದೆ. ಇದರ ವಿರುದ್ಧ ಇಡೀ ದೇಶವ್ಯಾಪಿ ಹೋರಾಟ ನಡೆದಿದೆ. ನಮ್ಮ ಹೋರಾಟದ ಬೇಡಿಕೆಯೆಂದರೆ ಹಿಂದಿನ ಕಾಯ್ದೆಯೇ ಮತ್ತೆ ಜಾರಿ ಆಗಬೇಕು. ವಿಬಿ-ಜಿ ರಾಮ್-ಜಿ ಹೆಸರನ್ನು ರದ್ದು ಮಾಡಬೇಕು. ಹೆಸರು ಬಾಲಾವಣೆ ಮಾಡುವ ಮೂಲಕ ಮನರೇಗಾ ಯೋಜನೆಯನ್ನು ಸಂಪೂರ್ಣ ನಾಶ ಮಾಡಲು ಮೋದಿ ಸರಕಾರ ಹೊರಟಿದೆ” ಎಂದು ಕಿಡಿಕಾರಿದರು.
“ಮನರೇಗ ಯೋಜನೆಗೆ 90ರಷ್ಟು ಕೇಂದ್ರ ಸರಕಾರ, 10ರಷ್ಟು ರಾಜ್ಯ ಸರಕಾರ ಕೊಡುತ್ತಿತ್ತು. ಇವತ್ತು 60ರಷ್ಟು ಕೇಂದ್ರ ಸರಕಾರ, 40ರಷ್ಟು ಕೇಂದ್ರ ಸರಕಾರ ಹಣ ಕೊಡಬೇಕು ಎಂಬುದನ್ನು ಕೇಂದ್ರ ಸರಕಾರ ತಂದಿದೆ. ಬಜೆಟ್ಟಿನಲ್ಲಿಯೂ ಹಣ ಕಡೆ ಕಡಿತ ಮಾಡಿದ್ದಾರೆ. ಹೀಗೆ ಮುಂದುವೆರೆದು ಮನರೇಗಾ ಯೋಜನೆಯನ್ನೇ ನಿರ್ನಾಮ ಮಾಡಲು ಹೊರಟಿರುವುದನ್ನು ನಾವು ಖಂಡಿಸುತ್ತೇವೆ” ಎಂದರು.

“ಹಿಂದಿನ ಕಾಯ್ದೆಯಲ್ಲಿ ನಾವು ಯಾವಾಗ ಅರ್ಜಿ ಹಾಕುತ್ತೇವೆಯೋ ಅವಾಗ ಉದ್ಯೋಗ ಪಡೆಯುವ ಅವಕಾಶ ಇತ್ತು, ಆದರೆ ಇವತ್ತು ಆ ಅವಕಾಶ ಇಲ್ಲ. ಇದು ದುಡಿಯುವ ಜನರ ಮೇಲೆ ಬರೆ ಎಳೆದಿದ್ದಾರೆ. ಅವರನ್ನು ಬೀದಿಪಾಲು ಮಾಡಲು ಹೊರಟಿದ್ದಾರೆ. ಬಿಜೆಪಿಗೆ ಗಾಂಧೀಜಿ ಅವರ ಮೇಲೆ ಎಷ್ಟು ದ್ವೇಷ ಇತ್ತೋ ಅಷ್ಟೇ ಬಡವರ ಮೇಲೂ ದ್ವೇಷ ಇದೆ ಎಂಬುದನ್ನು ಸಾಬೀತು ಮಾಡಿದ್ದಾರೆ. ಕೇಂದ್ರ ಸರಕಾರ ಈ ಕಾಯ್ದೆಯನ್ನು ವಾಪಸ್ ತೆಗದುಕೊಳ್ಳದೆ ಹೋದಲ್ಲಿ ರಾಜ್ಯವ್ಯಾಪಿ ಉಗ್ರ ಹೋರಾಟ ಮಾಡಲಾಗುವುದು” ಎಂದು ಎಚ್ಚರಿಕೆ ನೀಡಿದರು.
ಪ್ರತಿಭಟನೆಯಲ್ಲಿ ಕಾರ್ಮಿಕ ಮುಖಂಡರು ದಾದಾಪಿರ್ ಅವರು ಕೇಂದ್ರ ಸರಕಾರ ಮನರೇಗಾ ಯೋಜನೆ ಬದಲಾಯಿಸಿದ್ದನ್ನು ಖಂಡಿಸಿ ಮಾತನಾಡಿದರು.
ಪ್ರತಿಭಟನೆಯಲ್ಲಿ ಮನರೇಗಾ ಕಾರ್ಮಿಕರು ಮಾಲತೇಶ ಕಮ್ಮಟಗಿ, ಚೆನ್ನಬಸಪ್ಪ ಹೊಂಬಳಿ, ನಾಗರಾಜ್ ಬಿದರಿ, ಮಲ್ಲಿಕಾರ್ಜುನ ಬಳ್ಳಾರಿ ಸೇರಿದಂತೆ ಮನರೇಗಾ ಮಹಿಳಾ ಕಾರ್ಮಿಕರು ಪ್ರತಿಭಟನೆಯಲ್ಲಿ ಪಾಲ್ಗೊಂಡಿದ್ದರು.





