“ಸುಸ್ಥಿರ ಅಭಿವೃದ್ಧಿಯು ಜಗತ್ತಿಗೆ ಅತ್ಯಂತ ಅಗತ್ಯವಾಗಿದೆ. ಮಾನವನು ಪರಿಸರದ ಶಿಶುವಾಗಿದ್ದು, ಪರಿಸರದ ಆಶ್ರಯದಲ್ಲೇ ಬೆಳೆಯಬೇಕಿದೆ. ಹಾಗಾಗಿ ಪರಿಸರವನ್ನು ಉಳಿಸಿ ಬೆಳೆಸುವ ಮಹತ್ತರ ಕೆಲಸವನ್ನು ಪ್ರತಿಯೋರ್ವರೂ ಅತ್ಯಂತ ಮುತುವರ್ಜಿವಹಿಸಿ ಮಾಡಬೇಕಿದೆ. ಅದರಲ್ಲೂ ಯುವ ಸಮುದಾಯ ಪರಿಸರ ಸಂರಕ್ಷಣೆಗೆ ಕಂಕಣಬದ್ದರಾಗಬೇಕು ಎಂದು ಜಿಲ್ಲಾ ಮಾನಸಿಕ ಆರೋಗ್ಯ ತಜ್ಞೆ ಡಾ. ಶೃತಿ ಕರೆ ನೀಡಿದರು.
ಹಾವೇರಿ ಜಿಲ್ಲೆಯ ಹಾವೇರಿ ತಾಲ್ಲೂಕಿನ ಕಬ್ಬೂರು ಗ್ರಾಮದ ಸರಕಾರಿ ಪಿಯು ಕಾಲೇಜ್ ನಲ್ಲಿ ಬುಧವಾರ ಆಯೋಜಿಸಿದ್ದ ಇಕೋ ಕ್ಲಬ್ ಕಾರ್ಯಕ್ರಮದಲ್ಲಿ ಮುಖ್ಯ ಅತಿಥಿಗಳಾಗಿ ಪಾಲ್ಗೊಂಡು ಮಾತನಾಡಿದರು.
“ಪರಿಸರ ಸಂರಕ್ಷಣೆಯ ಹೊಣೆಗಾರಿಕೆಯನ್ನು ನಾವು ಮರೆತರೆ ಇಡೀ ಜೀವ ಸಂಕುಲವು ವಿನಾಶದಂಚಿಗೆ ತಲುಪುವ ಆತಂಕ ಇದೆ” ಎಂದು ಕಳವಳ ವ್ಯಕ್ತಪಡಿಸಿದರು.
“ವಿದ್ಯಾರ್ಥಿ-ಯುವಜನರು ಪರಿಸರ ನಾಶದಿಂದ ಭವಿಷ್ಯದಲ್ಲಿ ಎದುರಾಗಬಹುದಾದ ಸಮಸ್ಯೆಯ ಗಂಭೀರತೆಯನ್ನು ಅರಿತುಕೊಂಡು ಜನ ಸಮುದಾಯದಲ್ಲಿ ಜಾಗೃತಿ ಮೂಡಿಸಲು ಮುಂದಾಗಬೇಕು” ಎಂದರು.
“ವಿದ್ಯಾರ್ಥಿಗಳು ಬೌದ್ಧಿಕವಾಗಿ ಹಾಗೂ ದೈಹಿಕವಾಗಿ ಸುಸ್ಥಿಯಲ್ಲಿದ್ದಾಗ ಆರೋಗ್ಯವು ಚನ್ನಾಗಿರುತ್ತದೆ. ವಿದ್ಯಾರ್ಥಿ ಜೀವನವು ಜೀವನದ ಅತ್ಯಂತ ಪ್ರಮುಖ ಘಟ್ಟವಾಗಿದ್ದು ಭವಿಷ್ಯದಲ್ಲಿ ಬದುಕನ್ನು ಉತ್ತಮವಾಗಿ ರೂಪಿಸಿಕೊಳ್ಳಬೇಕೆಂದರೆ, ಆಸಕ್ತಿವಹಿಸಿ ಅಧ್ಯಯನ ಮಾಡಿ ಜ್ಞಾನ ಸಂಪಾದಿಸಿದರೆ ಪರೀಕ್ಷೆಯಲ್ಲಿ ಹೆಚ್ಚಿನ ಅಂಕಗಳಿಸಲು ಹಾಗೂ ಬದುಕು ಕಟ್ಟಿಕೊಳ್ಳಲು ಸಹಕಾರಿಯಾಗುತ್ತದೆ” ಎಂದರು.
ಪ್ತಾಸ್ತಾವಿಕವಾಗಿ ಇಕೋ ಕ್ಲಬ್ ಸಂಚಾಲಕ ಗುರುಪಾದಪ್ಪ ವಾಲ್ಮೀಕಿ ಮಾತನಾಡಿ, “ವಾಯು ಮಾಲಿನ್ಯ, ಜಲ ಮಾಲಿನ್ಯ ಹಾಗೂ ಶಬ್ದ ಮಾಲಿನ್ಯಗಳಿಂದಾಗಿ ಪರಿಸರವು ಹಾಳಾಗುತ್ತಿದೆ. ಆದ್ದರಿಂದ ವಿದ್ಯಾರ್ಥಿ ದೆಸೆಯಿಂದಲೆ ಪರಿಸರ ಮಾಲಿನ್ಯ ತಡೆಗಟ್ಟಲು ಅಗತ್ಯ ಕ್ರಮಗಳನ್ನು ಅನುಸರಿಸಬೇಕು” ಎಂದು ವಿದ್ಯಾರ್ಥಿಗಳಿಗೆ ಕಿವಿಮಾತು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ವಹಿಸಿದ್ದ ಪ್ರಾಚಾರ್ಯರು ಹೇಮಂತ ಗಂಟೇರ ಮಾತನಾಡಿ, “ಪರಿಸರ ನಾಶದಿಂದಾಗಿ ಜಾಗತಿಕವಾಗಿ ತಾಪಮಾನ ಹೆಚ್ಚಾಗುತ್ತಿದೆಯಲ್ಲದೇ ಸಕಲ ಜೀವ ರಾಶಿಗೆ ರಕ್ಷಾಕವಚವಾಗಿರುವ ಓಜೋನ್ ಪದರವು ಕೂಡ ಹಾಳಾಗುತ್ತಿದ್ದು ಗಂಭೀರ ಅಪಾಯವು ಕಾದಿದೆ, ಇದನ್ನು ಅರಿತುಕೊಂಡು ನಾವೆಲ್ಲರೂ ಪರಿಸರ ಸಂರಕ್ಷಣೆಗೆ ಮುಂದಾಗಬೇಕು” ಎಂದರು.
ವೇದಿಕೆಯಲ್ಲಿ ಆಂಗ್ಲಭಾಷಾ ಉಪನ್ಯಾಸಕರಾದ ಅಶೋಕ ಬಿ. ಕಹಾರ, ಕೆ. ಕವಿತಾ, ಮಧುಮತಿ ಉಪಸ್ಥಿತರಿದ್ದರು. ಕಾಲೇಜಿನ ವಿದ್ಯಾರ್ಥಿಗಳು ಹಾಗೂ ಸಿಬ್ಬಂದಿ ವರ್ಗ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು. ಕಾರ್ಯಕ್ರಮದ ಆರಂಭದಲ್ಲಿ ಕಾವ್ಯಾ ರಿತ್ತಿ ಹಾಗೂ ಸಂಗಡಿಗರು ಪ್ರಾರ್ಥಿಸಿದರು. ರಮೇಶ ನೆಗಳೂರು ಸ್ವಾಗತಿಸಿದರು. ಸವಿತಾ ಹುಣಸಿಮರದ ಕಾರ್ಯಕ್ರಮವನ್ನು ನಿರ್ವಹಿಸಿ ವಂದಿಸಿದರು.





