ಹಾವೇರಿ ಜಿಲ್ಲೆಯ ಹಾನಗಲ್ಲ ತಾಲೂಕಿನ ಆಲದಕಟ್ಟಿ, ಹನುಮಾಪುರ, ದೇವರ ಹೊಸಪೇಟ್, ಹಾಗೂ ಗೋಟಗೋಡಿ ಪ್ಲಾಟ್ನಲ್ಲಿ ರೋಶನಿ ಸಮಾಜ ಸೇವಾ ಸಂಸ್ಥೆ ಇವರ ವತಿಯಿಂದ ಹಿರಿಯ ನಾಗರಿಕರ ಆರೋಗ್ಯ ತಪಾಸಣಾ ಶಿಬಿರ ಹಮ್ಮಿಕೊಳ್ಳಲಾಗಿತ್ತು.
ಶಿಬಿರದಲ್ಲಿ ಶಿವಕ್ಕ ಸಿನ್ನಾಳ ಮಾತನಾಡಿ, “ಹಿರಿಯ ನಾಗರಿಕರಲ್ಲಿ ಕೆಲವೊಮ್ಮೆ ದೈಹಿಕವಾಗಿ, ಮಾನಸಿಕವಾಗಿ ಆರೋಗ್ಯದಲ್ಲಿ ಏರುಪೇರು ಆಗುವುದು ಸಹಜ. ಹೀಗೆ ಉಂಟಾದಾಗ ಹಿರಿಯರ ಸಂಘದ ಸದಸ್ಯರು ಮನೆ ಭೇಟಿ ಮಾಡಿ ದೈರ್ಯ ತುಂಬುವುದು ಮನಸ್ಸಿಗೆ ಬಹಳಷ್ಟು ಆನಂದವನ್ನುಂಟು ಮಾಡುತ್ತದೆ” ಎಂದು ಹೇಳಿದರು.
“ಕಾಲ ಕಾಲಕ್ಕೆ ನಮ್ಮ ಸಂಸ್ಥೆಯ ವತಿಯಿಂದ ಆರೋಗ್ಯದ ಬಗ್ಗೆ ಜಾಗೃತಿ ಕಾರ್ಯಕ್ರಮ ಹಮ್ಮಿಕೊಂಡು ಮಾಹಿತಿ ನೀಡುತ್ತೇವೆ. ಜೊತೆಗೆ ಸಿರಿ ದಾನ್ಯಗಳಿಂದ ಕೂಡಿದ ಪೌಷ್ಟಿಕ ಆಹಾರ ವಿತರಣೆ ಮಾಡುತ್ತಿರುವುದು ಆರೋಗ್ಯ ಸಧಾರಿಸಿಕೊಳ್ಳಲು ಸಹಾಯವಾಗುತ್ತಿದೆ” ಎಂದು ಹೇಳಿದರು.
ರೋಶನಿ ಸಂಸ್ಥೆಯ ಮಹಿಳಾ ಸಬಲಿಕರಣದ ಸಂಯೋಜಕ ದೀಗಪ್ಪ ಮಾತನಾಡಿ, “ಗ್ರಾಮದಲ್ಲಿ ಆಸಕ್ತಿ ಇರುವ ಹಿರಿಯ ನಾಗರಿಕರನ್ನು ಸೇರಿಸಿ ಸಂಘ ರಚಿಸಿ. ಪ್ರತಿ ತಿಂಗಳಿಗೊಮ್ಮೆ ಸಭೆ ಮಾಡಿ ಅವರ ಕುಂದು ಕೊರತೆಗಳ ಬಗ್ಗೆ ಚರ್ಚಿಸಲಾಗುವುದು. ಕೆಲವರು ದೈಹಿಕವಾಗಿ ಮತ್ತು ಮೌನಸಿಕ ಒತ್ತಡಗಳಿಂದ ಇರುವವರನ್ನು ವಯಕ್ತಿಕ ಭೇಟಿ ಮತ್ತು ಆಪ್ತ ಸಮಾಲೋಚನೆ ಮೂಲಕ ಸೂಕ್ತ ಸಲಹೆ ನೀಡಿಬೇಕಿರುತ್ತದೆ. ಆಗ ಈ ಸಮಸ್ಯೆಯಿಂದ ಹೊರಗೆ ಬರುವಂತೆ ಮಾಡಲು ಸಾಧ್ಯ. ಕಾಲಕಾಲಕ್ಕೆ ಅವಶ್ಯವಿರುವ ಆರೋಗ್ಯ ತಪಾಷಣೆ ಮಾಡಿಸಿ” ಎಂದು ಹೇಳಿದರು.
ಕಾರ್ಯಕ್ರಮದಲ್ಲಿ ಆದರ್ಶ ತಾಲೂಕು ಮಹಿಳಾ ಒಕ್ಕೂಟದ ಖಜಾಂಚಿ ಚೈತ್ರಾ ಹನುಮಂತನವರ, ಸಿಬ್ಬಂದಿ ಸುಮಂಗಲಾ ಬಡಿಗೇರ ನರ್ಸಗಳಾದ ಸುಧಿನಾ ಹರಿಜನ, ಭಾಗ್ಯಾ ಗೋಲ್ಲರ ಹಾಗೂ ಗ್ರಾಮಸ್ಥರು ಉಪಸ್ಥಿತರಿದ್ದರು.





