ಹಾವೇರಿ ಜಿಲ್ಲೆ ಹಾನಗಲ್ ತಾಲೂಕಿನ ಸರ್ಕಾರಿ ಮತ್ತು ಖಾಸಗಿ ಸರ್ವೆ ನಂಬರ್ ಜಮೀನುಗಳಲ್ಲಿ ಮಾಲಿಕತ್ವ ಇಲ್ಲದೇ 30ವರ್ಷಗಳಿಂದ ವಾಸಿಸುತ್ತಿರುವ 13ಸಾವಿರಕ್ಕೂ ಹೆಚ್ಚು ಕುಟುಂಬಗಳಿಗೆ ಹಕ್ಕುಪತ್ರ ನೀಡುವ ಗುರಿಯಿದೆ ಎಂದು ಶಾಸಕ ಶ್ರೀನಿವಾಸ ಮಾನೆ ಹೇಳಿದ್ದಾರೆ.
ಹಾನಗಲ್ ತಾಲೂಕಿನ ಶಾಡಗುಪ್ಪಿ ಸೇರಿದಂತೆ ಹಲವೆಡೆ ಶಾಸಕ ಶ್ರೀನಿವಾಸ ಮಾನೆ ಗುರುವಾರ (ಜ.4) ಗ್ರಾಮ ಸಂಚಾರ ಕೈಗೊಂಡು ಗ್ರಾಮಸ್ಥರ ಸಮಸ್ಯೆಗಳನ್ನು ಆಲಿಸಿದರು. ಈ ವೇಳೆ ಮಾತನಾಡಿದ ಅವರು, ಸಂಕಲ್ಪ ಮಾಡಿದ್ದು, ಈಗಾಗಲೇ ಹೊಸ ಕಂದಾಯ ಗ್ರಾಮ, ಉಪ ಗ್ರಾಮಗಳನ್ನು ಸೃಷ್ಟಿಸಲಾಗುತ್ತಿದೆ. ವರ್ಷದ ಒಳಗೆ ಈ ಪ್ರಕ್ರಿಯೆ ಪೂರ್ಣಗೊಳಿಸುವ ಗುರಿ ಹೊಂದಿದ್ದೇವೆ ಎಂದು ಹೇಳಿದರು.
ಕಂದಾಯ ಹಾಗೂ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ರಾಜ್ ಇಲಾಖೆಯ ಅಧಿಕಾರಿಗಳನ್ನು ಒಳಗೊಂಡ ತಂಡ ರಚಿಸಿ ಸರ್ವೆ ಕೈಗೊಳ್ಳಲಾಗಿದೆ. ರಸ್ತೆ ಇಲ್ಲದೇ, ಅಗತ್ಯ ಸೌಲಭ್ಯಗಳೂ ಇಲ್ಲದೇ ಸರ್ಕಾರಿ ಮತ್ತು ಖಾಸಗಿ ಸರ್ವೆ ನಂಬರ್ ಜಮೀನುಗಳಲ್ಲಿ ಸಾವಿರಾರು ಕುಟುಂಬಗಳು ವಾಸಿಸುತ್ತಿವೆ. ಹಕ್ಕುಪತ್ರ ಇಲ್ಲದೇ ಸರ್ಕಾರದ ಸೌಲಭ್ಯ, ಬ್ಯಾಂಕಿನ ಸಾಲ ಸೇರಿದಂತೆ ಇನ್ನಿತರ ಎಲ್ಲ ರೀತಿಯ ನೆರವಿನಿಂದ ವಂಚಿತವಾಗಿವೆ ಎಂದು ಅವರು ಹೇಳಿದರು.
ತಾಲೂಕಿನ ಪ್ರತಿಯೊಂದು ಗ್ರಾಮಗಳಲ್ಲಿ ಇಂಥ ಕುಟುಂಬಗಳ ಸಂಪೂರ್ಣ ವಿವರ ಸಂಗ್ರಹಿಸಲಾಗಿದೆ. ಹಂತ ಹಂತವಾಗಿ ಪ್ರತಿ ಕುಟುಂಬಗಳಿಗೂ ಹಕ್ಕುಪತ್ರ ವಿತರಿಸುವ ಉದ್ದೇಶ ಹೊಂದಿದ್ದೇವೆ ಎಂದರು.
ತಾಲೂಕಿನಲ್ಲಿ ಹತ್ತಾರು ವರ್ಷಗಳಿಂದ ಬಗೆಹರಿಯದ ಸಾರ್ವಜನಿಕ ಸಮಸ್ಯೆಗಳನ್ನು ಬಗೆಹರಿಸಲು ಗಮನ ನೀಡಲಾಗುತ್ತಿದೆ. ಪ್ರತೀ ಗ್ರಾಮಗಳಿಗೆ ನಿಯಮಿತವಾಗಿ ಭೇಟಿ ನೀಡಿ, ಸಾರ್ವಜನಿಕರೊಂದಿಗೆ ಸಂಪರ್ಕದಲ್ಲಿದ್ದು ಸಮಸ್ಯೆ ಅರಿಯುವ ಪ್ರಯತ್ನ ನಡೆಸಲಾಗುತ್ತಿದೆ ಎಂದರು.
ಈ ವೇಳೆ ಬ್ಲಾಕ್ ಕಾಂಗ್ರೆಸ್ ಅಧ್ಯಕ್ಷ ಮಂಜು ಗೊರಣ್ಣನವರ, ಜಿಲ್ಲಾ ಪಂಚಾಯಿತಿ ಮಾಜಿ ಸದಸ್ಯ ಕೊಟ್ರಪ್ಪ ಕುದರಿಸಿದ್ದನವರ, ಮುಖಂಡರಾದ ಪ್ರಕಾಶ ಓಲೇಕಾರ, ರಾಜಶೇಖರ ಮಲಗುಂದ, ಶ್ರೀಧರ ಮಲಗುಂದ, ಮೂಕಣ್ಣ ತಳವಾರ, ಶಿವರುದ್ರಪ್ಪ ಕಲ್ಲಣ್ಣನವರ, ಗುಡ್ಡಪ್ಪ ಹರಿಜನ, ಇಂದ್ರಪ್ಪ ಮಕರವಳ್ಳಿ, ರಮೇಶ ಸಾವಕ್ಕನವರ, ಮಂಜಪ್ಪ ಓಲೇಕಾರ, ನಾರಾಯಣಪ್ಪ ಜಾಲಗಾರ, ಶಿವಣ್ಣ ಬಾರ್ಕಿ, ಮೂಕಪ್ಪ ಬಾರ್ಕಿ, ಪರಸಪ್ಪ ಕಾಣೇರ ಸೇರಿದಂತೆ ಹಲವರು ಇದ್ದರು.




