ಮೈಸೂರು ಜಿಲ್ಲೆ, ಹೆಗ್ಗಡದೇವನಕೋಟೆ ತಾಲ್ಲೂಕು ಕಚೇರಿ ಮುಂಭಾಗದಲ್ಲಿ ರೈತಪರ ಸಂಘಟನೆಗಳು, ದಲಿತ ಸಂಘಟನೆಗಳು, ಆದಿವಾಸಿ, ಕನ್ನಡಪರ ಸಂಘಟನೆಗಳು, ಪರಿಸರವಾದಿಗಳು, ಕೆ ಆರ್ ಎಸ್ ಪಕ್ಷ ಹಾಗೂ ಸಾರ್ವಜನಿಕರು ನಡೆಸುತಿದ್ದ ‘ಕಬಿನಿ ಉಳಿಸಿ, ಅರಣ್ಯ ರಕ್ಷಿಸಿ’ ಅನಿರ್ದಿಷ್ಟಾವಧಿ ಧರಣಿಗೆ ಜಿಲ್ಲಾಧಿಕಾರಿ ಜಿ. ಲಕ್ಷ್ಮಿಕಾಂತ್ ರೆಡ್ಡಿಯವರು ದೂರವಾಣಿ ಕರೆಯ ಮೂಲಕ ಸ್ಪಂದಿಸಿ, ಬೇಡಿಕೆ ಈಡೇರಿಸಲು ಕಾಲಾವಕಾಶ ಕೋರಿರುವುದಾಗಿ ಈದಿನ.ಕಾಮ್ ಗೆ ರೈತ ಮುಖಂಡರಾದ ಮಂಜು ಕಿರಣ್ ಮಾಹಿತಿ ತಿಳಿಸಿದ್ದಾರೆ.
ಜಿಲ್ಲಾಧಿಕಾರಿಯವರು ಪ್ರತಿಭಟನೆ ನಿರತರಲ್ಲಿ ಮಾತನಾಡಿ, ಕಬಿನಿ ಉಳಿಸುವ, ಅರಣ್ಯ ರಕ್ಷಿಸುವ ನಿಟ್ಟಿನಲ್ಲಿ ತಂಡ ನಿಯೋಜನೆ ಮಾಡಿ, ವರದಿ ಪಡೆದು ಕ್ರಮ ಕೈಗೊಳ್ಳುವುದಾಗಿ ತಿಳಿಸಿ; ಕಾಲಾವಕಾಶ ನೀಡಬೇಕೆಂದು ಕೇಳಿದ ಹಿನ್ನಲೆಯಲ್ಲಿ, ಪ್ರತಿಭಟನಾ ನಿರತರು ಒಕ್ಕೋರಲಿನಿಂದ ಒಪ್ಪಿ ಸಮಯದೊಳಗೆ ಸ್ಪಂದಿಸುವಂತೆ, ಇಲ್ಲವಾದಲ್ಲಿ ಮುಂದಿನ ತಿಂಗಳ (ಫೆಬ್ರವರಿ)ಲ್ಲಿ ಜಿಲ್ಲಾಧಿಕಾರಿ ಕಚೇರಿ ಮುಂಭಾಗದಲ್ಲಿ ಅನಿರ್ದಿಷ್ಟಾವಧಿ ಪ್ರತಿಭಟನೆ ನಡೆಸುವುದಾಗಿ ಎಚ್ಚರಿಸಿ, ತಾತ್ಕಾಲಿಕವಾಗಿ ಧರಣಿ ಹಿಂತೆಗೆದುಕೊಂಡಿದ್ದಾರೆ.
ಮೈಸೂರು ಜಿಲ್ಲೆಯ ಕಬಿನಿ ಹಿನ್ನೀರಿನ ಪ್ರದೇಶಗಳಲ್ಲಿ ತಲೆ ಎತ್ತಿರುವ 28 ಅಕ್ರಮ ರೆಸಾರ್ಟ್, ಹೋಟೆಲ್ ಹಾಗು ವಾಣಿಜ್ಯ ಕಟ್ಟಡಗಳನ್ನು ತೆರವುಗೊಳಿಸಬೇಕು. ಅಕ್ರಮ ರೆಸಾರ್ಟ್ ಗಳಿಂದಾಗಿ ವನ್ಯಜೀವಿಗಳಿಗೆ ತೊಂದರೆಯಾಗುತ್ತಿದ್ದು ಮಾನವ-ವನ್ಯಜೀವಿ ಸಂಘರ್ಷ ಏರ್ಪಟ್ಟಿದೆ. ಇದರಿಂದಾಗಿ, ಪ್ರಾಣಿಗಳು ಗ್ರಾಮದ ಕಡೆಗೆ ವಲಸೆ ಬರುತಿದ್ದು ಅಲ್ಲಲ್ಲಿ ಸಾವು ನೋವುಗಳು ಸಂಭವಿಸುತ್ತಿವೆ. ಇತ್ತೀಚಿಗೆ ಹುಲಿ ದಾಳಿಗೆ ನಾಲ್ವರು ಮೃತಪಟ್ಟಿದ್ದಾರೆ. ಜಾನುವಾರುಗಳು ಸಹ ಬಲಿಯಾಗಿವೆ. ಇದನ್ನೆಲ್ಲಾ ತಡೆಯುವ ನಿಟ್ಟಿನಲ್ಲಿ ಕ್ರಮವಹಿಸಬೇಕು.

ಸರ್ಕಾರ ಸಫಾರಿ ನಿಷೇಧಿಸಿದ್ದರು ಕಬಿನಿ ಹಿನ್ನೀರಿನಲ್ಲಿ ಕೆಲವು ಖಾಸಗಿ ರೆಸಾರ್ಟ್ ಗಳು ಅಕ್ರಮವಾಗಿ ಬೋಟ್ ಸಫಾರಿ ನಡೆಸುತ್ತಿವೆ, ಕೂಡಲೇ ಕ್ರಮ ವಹಿಸಬೇಕು. ಪರಿಸರ ಸೂಕ್ಷ್ಮ ವಲಯಗಳಲ್ಲಿ ಅಕ್ರಮ ಕಟ್ಟಡಗಳ ನಿರ್ಮಾಣಕ್ಕೆ ಅರಣ್ಯ ಇಲಾಖೆ, ಕಂದಾಯ ಇಲಾಖೆ, ನೀರಾವರಿ ಇಲಾಖೆಗಳು ಸಹಕರಿಸ ಕೂಡದು. ಅಂತಹ ಅಧಿಕಾರಿಗಳು ಕಂಡುಬಂದಲ್ಲಿ ಕೂಡಲೇ ಅಮಾನತ್ತುಗೊಳಿಸಬೇಕು ಎಂದು ಆಗ್ರಹಿಸಿದರು.
ಸ್ಥಳಕ್ಕೆ ಭೇಟಿ ನೀಡಿ ಮನವಿ ಸ್ವೀಕರಿಸಿದ ತಹಶೀಲ್ದಾರ್ ಶ್ರೀನಿವಾಸ್, ಪ್ರತಿಭಟನೆ ನಿರತರ ಅಹವಾಲು ಆಲಿಸಿ, ಸಂಬಂಧಪಟ್ಟವರಿಗೆ ಕಳುಹಿಸಿಕೊಡುವುದಾಗಿ ತಿಳಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಮೈಸೂರು-ಕುಶಾಲನಗರ ರೈಲು ಯೋಜನೆ ರದ್ದು; ಬಹುದಿನದ ಕನಸು ಭಗ್ನ
ಪ್ರತಿಭಟನೆಯಲ್ಲಿ ಸಾಮೂಹಿಕ ನಾಯಕತ್ವದಲ್ಲಿ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರಾದ ಹೊನ್ನೂರು ಪ್ರಕಾಶ್, ಮಂಜು ಕಿರಣ್, ವಕೀಲರಾದ ವಿ. ರವಿಕುಮಾರ್, ಶಿವಲಿಂಗು, ಹಳ್ಳಿಕೆರೆಹುಂಡಿ ಭಾಗ್ಯರಾಜ್, ಡಿ.ಪಿ.ಕೆ. ಪರಮೇಶ್, ಜೆ.ಎ. ಶಿವು ಸೇರಿದಂತೆ ಹಲವರು ಇದ್ದರು.





