ದುರ್ಗಮ ಹಾಗೂ ಗುಡ್ಡಗಾಡು ಪ್ರದೇಶಗಳಲ್ಲಿ ಮನೆಬಾಗಿಲಲ್ಲೇ ಅರೋಗ್ಯ ಸೇವೆಗಳನ್ನು ನೀಡುವ ಉದ್ದೇಶದಿಂದ ಸ್ಥಾಪಿಸಲಾಗಿರುವ ಸಂಚಾರಿ ಆರೋಗ್ಯ ಘಟಕಗಳಿಗೆ ಆರೋಗ್ಯ ಮತ್ತು ದ.ಕ. ಜಿಲ್ಲಾ ಉಸ್ತುವಾರಿ ಸಚಿವ ದಿನೇಶ್ ಗುಂಡೂರಾವ್ ಅವರು ಚಾಲನೆ ನೀಡಿದರು.
ಶುಕ್ರವಾರ ದಕ್ಷಿಣ ಕನ್ನಡ ಜಿಲ್ಲಾಧಿಕಾರಿ ಕಚೇರಿ ಆವರಣದಲ್ಲಿ ನಡೆದ ಕಾರ್ಯಕ್ರಮದಲ್ಲಿ ಸಚಿವರು, ದಕ್ಷಿಣ ಕನ್ನಡ ಜಿಲ್ಲೆಯ 5 ಹಾಗೂ ಉಡುಪಿ ಜಿಲ್ಲೆಯ 4 ಸಂಚಾರಿ ಆರೋಗ್ಯ ಘಟಕ ವಾಹನಗಳಿಗೆ ಹಸಿರು ನಿಶಾನೆ ತೋರಿ ಚಾಲನೆ ನೀಡಿದರು.
ಈ ಸಂದರ್ಭದಲ್ಲಿ ಮಾತನಾಡಿದ ಅವರು, ರಾಜ್ಯಾದ್ಯಂತ ಒಟ್ಟು 81 ಸಂಚಾರಿ ಅರೋಗ್ಯ ಘಟಕಗಳಿಗೆ ಚಾಲನೆ ನೀಡಲಾಗಿದೆ. ಇದು ಸರಕಾರದ ಜನಪರ ಯೋಜನೆಗಳ ಭಾಗವಾಗಿದೆ. ಸಂಪರ್ಕ ರಹಿತ ಮತ್ತು ಗುಡ್ಡ ಗಾಡು ಪ್ರದೇಶಗಳಿಗೆ ಈ ಅರೋಗ್ಯ ಸೇತು ವಾಹನಗಳು ತೆರಳಿ ಆರೋಗ್ಯ ಸೇವೆ ನೀಡಲಿದೆ ಎಂದು ಹೇಳಿದರು.
ಈ ವಾಹನದಲ್ಲಿ ಒಬ್ಬ ವೈದ್ಯರು, ಒಬ್ಬರು ನರ್ಸ್ ಮತ್ತು ಒಬ್ಬ ಲ್ಯಾಬ್ ಟೆಕ್ನೀಷಿಯನ್ ಇರಲಿದ್ದಾರೆ. ಅಗತ್ಯವಿರುವ ಔಷಧಿಗಳು, ಸಲಕರಣೆಗಳು, ತುರ್ತು ಆರೋಗ್ಯ ಪರಿಸ್ಥಿತಿಯ ನಿರ್ವಹಣೆಗೆ ಜೀವನಾವಶ್ಯಕ ಔಷಧಿಗಳೊಂಧಿಗೆ ಈ ಆರೋಗ್ಯ ಸೇತು ವಾಹನವನ್ನು ಸಜ್ಜುಗೊಳಿಸಲಾಗಿದೆ ಎಂದು ಸಚಿವ ಗುಂಡೂರಾವ್ ತಿಳಿಸಿದರು.

ಸ್ಥಳೀಯರಿಗೆ ಮುಂಗಡವಾಗಿ ತಿಳಿಸಿ ಸಂಚಾರಿ ಆರೋಗ್ಯ ಸೇವೆಗಳನ್ನು ನೀಡಲಾಗುವುದು ಎಂದು ಇದೇ ವೇಳೆ ದಿನೇಶ್ ಗುಂಡೂರಾವ್ ಮಾಹಿತಿ ನೀಡಿದರು.
ಈ ಸಂದರ್ಭದಲ್ಲಿ ವಿಧಾನ ಪರಿಷತ್ ಸದಸ್ಯ ಐವನ್ ಡಿಸೋಜಾ, ದ.ಕ. ಜಿಲ್ಲಾಧಿಕಾರಿ ದರ್ಶನ್ ಎಚ್ ವಿ, ಜಿಲ್ಲಾ ಪಂಚಾಯತ್ ಸಿ ಇ ಓ ವಿನಾಯಕ್ ನರ್ವಡೆ, ಜಿಲ್ಲಾ ಆರೋಗ್ಯಧಿಕಾರಿ ಡಾ ತಿಮ್ಮಯ್ಯ, ವೆನ್ ಲಾಕ್ ಅಧೀಕ್ಷಕ ಡಾ ಶಿವಪ್ರಕಾಶ್, ಲೇಡಿಗೋಷನ್ ಅಧೀಕ್ಷಕ ಡಾ ದುರ್ಗಾ ಪ್ರಸಾದ್ ಮತ್ತಿತರರು ಇದ್ದರು.





