ರಸ್ತೆಗಳು ಯಾವುದೇ ರಾಷ್ಟ್ರದ ಅಭಿವೃದ್ಧಿಗೆ ಬೆನ್ನೆಲುಬಿನಂತಿವೆ. ಉತ್ತಮ ರಸ್ತೆ ಸಂಪರ್ಕವು ಕೇವಲ ಜನರ ಸಂಪರ್ಕಕ್ಕೆ ಮಾತ್ರವಲ್ಲದೆ, ಆರ್ಥಿಕ, ಸಾಮಾಜಿಕ ಮತ್ತು ಸಾಂಸ್ಕೃತಿಕ ಅಭಿವೃದ್ಧಿಗೂ ಸಹ ಸಹಾಯವಾಗುತ್ತದೆ. ಆದ್ದರಿಂದ, ಉತ್ತಮ ಗುಣಮಟ್ಟದ ರಸ್ತೆಗಳ ನಿರ್ಮಾಣವು ಸಾರ್ವಜನಿಕರ ಹಿತದ ದೃಷ್ಟಿಯಿಂದ ಬಹುಮುಖ್ಯವಾದುದು.
ಗ್ರಾಮೀಣ ಭಾಗಗಳಲ್ಲಿ ಇಂದು ಸಹ ಕೆಲವೊಂದು ಸ್ಥಳಗಳಿಗೆ ಸರಿಯಾದ ರಸ್ತೆ ಸಂಪರ್ಕವಿಲ್ಲ. ಮಳೆಗಾಲದಲ್ಲಿ ಹತ್ತಿರದ ನಗರಕ್ಕೆ ಹೋಗುವುದೇ ಒಂದು ಸವಾಲಾಗಿ ಪರಿಣಮಿಸುತ್ತದೆ. ಇದರಿಂದಾಗಿ ವಿದ್ಯಾರ್ಥಿಗಳ ಶಿಕ್ಷಣ, ರೋಗಿಗಳ ಚಿಕಿತ್ಸೆಗೆ, ಹಾಗೂ ರೈತರಿಗೆ, ಜನಸಾಮಾನ್ಯರ ದಿನನಿತ್ಯದ ಚಟುವಟಿಕೆಗಳ ಮೇಲೆ ಪರಿಣಾಮ ಬೀರುತ್ತವೆ.

ಇದೇ ರೀತಿಯ ಸಮಸ್ಯೆ ಉಡುಪಿ ಜಿಲ್ಲೆಯ ಹೆಬ್ರಿ ತಾಲೂಕಿನ ಕೊಲ್ಲೂರು ಧರ್ಮಸ್ಥಳ ರಾಜ್ಯ ಹೆದ್ದಾರಿ ಕುಚೂರು ಕಂಚರ್ಕಳ ಎಂಬಲ್ಲಿ ಕಿರು ಸೇತುವೆ ಹಲವು ವರ್ಷಗಳಿಂದ ಶಿಥಿಲಗೊಂಡಿದ್ದು ಹಾಗೂ ಮಳೆಗಾಲದಲ್ಲಿ ಇಲ್ಲಿ ಸಂಪರ್ಕ ಕಡಿತಗೊಳ್ಳುವುದು. ಇದರಿಂದ ಈ ಬಗ್ಗೆ ಸಾರ್ವಜನಿಕರು ಕಳೆದ ಹಲವು ವರ್ಷಗಳಿಂದ ಸರಕಾರಕ್ಕೆ ನೂತನ ಸೇತುವೆ ನಿರ್ಮಾಣಕ್ಕೆ ಬೇಡಿಕೆಯನ್ನು ಇಟ್ಟಿದ್ದು. ಈ ಬಾರಿ ಸರಕಾರ ನೂತನ ಸೇತುವೆಗೆ ಸುಮಾರು ಎರಡು ಕೋಟಿ ರೂಪಾಯಿ ಅನುದಾನ ಬಿಡುಗಡೆ ಮಾಡಿತ್ತು. ಆದರೆ ಅಧಿಕಾರಿಗಳು ಈ ಬಗ್ಗೆ ನಿರ್ಲಕ್ಷ ವಹಿಸಿದ್ದರ ಪರಿಣಾಮ ಮಳೆಗಾಲದಲ್ಲಿ ಕಾಮಗಾರಿ ಕೈಗೊತ್ತುಕೊಂಡಿದ್ದರಿಂದ ಈಗ ಹೆಬ್ರಿಯಿಂದ ಸುಮಾರು 10 ಗ್ರಾಮಗಳ ಸಂಪೂರ್ಣ ಸಂಪರ್ಕ ಕಡಿತಗೊಂಡಿದೆ ಇದರಿಂದ ಗ್ರಾಮಸ್ಥರು ಹೆಬ್ರಿ ಮುಖ್ಯ ರಸ್ತೆಯಲ್ಲಿ ಪ್ರತಿಭಟನೆ ನಡೆಸಿ ಆಕ್ರೋಶ ವ್ಯಕ್ತಪಡಿಸಿದರು.
ಈ ದಿನ.ಕಾಮ್ ಜೊತೆ ಮಾತನಾಡಿದ ಸಾಮಾಜಿಕ ಹೋರಾಟಗಾರ ಶ್ರೀಕಾಂತ್ ಕುಚೂರು ಕಳೆದ 9 ತಿಂಗಳ ಹಿಂದೆ ಈ ಬಗ್ಗೆ ಸಂಬಂಧಪಟ್ಟ ಅಧಿಕಾರಿಗಳ ಗಮನಕ್ಕೆ ತಂದಿದ್ದೇವೆ. ಮಳೆಗಾಲ ಪ್ರಾರಂಭದ ಮೊದಲೇ ಕಾಮಗಾರಿ ನಡೆಸಿ ಎಂದು ಸಹ ಹೇಳಿದ್ದೇವೆ. ಆದರೆ ಅಧಿಕಾರಿಗಳ ನಿರ್ಲಕ್ಷಿತನದಿಂದ ಇಂದು ಸಾರ್ವಜನಿಕರು ಹಾಗೂ ವಿದ್ಯಾರ್ಥಿಗಳು ಗ್ರಾಮಸ್ಥರು ಹೆಬ್ರಿಯ ಸಂಪರ್ಕವಿಲ್ಲದೆ ಬಹಳ ತೊಂದರೆ ಅನುಭವಿಸುತ್ತಿದ್ದಾರೆ ಆದಷ್ಟು ಬೇಗ ಇದಕ್ಕೊಂದು ಶಾಶ್ವತ ಪರಿಹಾರ ಮಾಡಬೇಕು ಇಲ್ಲದಿದ್ದರೆ ಮುಂದಿನ ದಿನಗಳಲ್ಲಿ ಇನ್ನಷ್ಟು ಗ್ರಾಮಸ್ಥರನ್ನು ಸೇರಿಸಿಕೊಂಡು ತಾಲೂಕಿ ಕಛೇರಿ ಮುಂಭಾಗದಲ್ಲಿ ಪ್ರತಿಭಟನೆ ನಡೆಸುತ್ತೇವೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈದಿನ.ಕಾಮ್ ಜೊತೆ ಮಾತನಾಡಿದ ಆಟೋ ಚಾಲಕ ರಂಜಿತ್, ಗ್ರಾಮದ ಗ್ರಾಮಸ್ಥರು ಹೆಬ್ರಿಗೆ ಬರಬೇಕಾದರೆ ಸುಮಾರು 10 – 12 ಕಿಲೋಮೀಟರ್ ಸುತ್ತಿ ಬಳಸಿ ಹೆಬ್ರಿಗೆ ಬರಬೇಕಾದ ಪರಿಸ್ಥಿತಿ ಉಂಟಾಗಿದೆ. ವೃದ್ಧರು, ವಿದ್ಯಾರ್ಥಿಗಳು, ರೋಗಿಗಳ ಗೋಳು ಕೇಳೋರಿಲ್ಲ ಎಂದು ಆಕ್ರೋಶ ವ್ಯಕ್ತಪಡಿಸಿದರು.

ಈ ಬಗ್ಗೆ ಮಾಧ್ಯಮದ ಜೊತೆ ಮಾತನಾಡಿದ ಸಹಾಯಕ ಇಂಜಿನಿಯರ್ ಮಿಥುನ್, ಮಳೆ ಹಿಡಿದಿರುವುದಿಂದ ಕಾಮಗಾರಿ ನಿಧಾನವಾಗಿ ನಡೆಯುತ್ತಿದ್ದಿದೆ ಮಳೆ ನಿಂತ ಕೂಡಲೆ ಸೇತುವೆ ರಸ್ತೆಯ ಕಾಮಗಾರಿ ಮುಗಿಸುತ್ತೇವೆ ಹದಿನೈದು ಇಪ್ಪತ್ತು ದಿನದಲ್ಲಿ ಕಾಮಗಾರಿ ಮುಗಿಯುತ್ತದೆ ಗ್ರಾಮಸ್ಥರಿಗೆ ಅನುಕೂಲಕ್ಕಾಗಿ ಬದಲಿ ರಸ್ತೆಯನ್ನು ಮಾಡಲಾಗಿದೆ ಮಳೆ ಇರುವುದರಿಂದ ಮಣ್ಣಿನ ರಸ್ತೆ ಹಾಳಾಗಿದೆ ಒಂದೆರಡು ದಿನದಲ್ಲಿ ಅದನ್ನು ಸಹ ಸರಿಮಾಡಿ ಗ್ರಾಮಸ್ಥರಿಗೆ ಅನುಕೂಲ ಮಾಡಿಕೊಡುತ್ತೇವೆ ಎಂದು ಹೇಳಿದರು.
ಒಟ್ಟಿನಲ್ಲಿ ಮಳೆ ಹಿಡಿಯುವ ಮುನ್ನವೇ ಕಾಮಗಾರಿಯನ್ನು ಪೂರ್ಣಗಳಿಸಿದ್ದರೆ ಬದಲಿ ಮಾರ್ಗದ ಅವಶ್ಯಕತೆಯೇ ಬೀಳುತ್ತಿರಲಿಲ್ಲ ಗ್ರಾಮಸ್ಥರು, ಪ್ರವಾಸಿಗರಿಗೆ ಸಮಸ್ಯೆಯೇ ಎದುರಾಗುತ್ತಿರಲಿಲ್ಲ, ಗ್ರಾಮಸ್ಥರು ಇನ್ನೂ ಹೆಚ್ಚು ಸಮಸ್ಯೆಯನ್ನು ಅನುಭವಿಸುವ ಮುನ್ನ ಕಾಮಗಾರಿಯನ್ನು ಪೂರ್ತಿಗೊಳಿಸಿ ಜನಸಾಮಾನ್ಯರಿಗೆ ಅನುಕೂಲ ಮಾಡಿಕೊಡಬೇಕಾಗಿದೆ. ಸಂಬಂಧಪಟ್ಟವರು ಕೂಡಲೇ ಇತ್ತ ಗಮನಿಸಬೇಕಾಗಿದೆ.




ಶಾರೂಕ್ ತೀರ್ಥಹಳ್ಳಿ
ಮೂಲತಃ ತೀರ್ಥಹಳ್ಳಿಯವರಾದ ಇವರು ಪ್ರಸ್ತುತ ಈದಿನ. ಕಾಮ್ ಉಡುಪಿ ಜಿಲ್ಲಾ ವರದಿಗಾರರಾಗಿ ಮತ್ತು ಕರಾವಳಿ ಮಲೆನಾಡು ಭಾಗದ ವಲಯ ಸಂಯೋಜಕರಾಗಿ ಕಾರ್ಯ ನಿರ್ವಹಿಸುತ್ತಿದ್ದಾರೆ. 2017 ರಿಂದ ಪತ್ರಿಕೋದ್ಯಮದಲ್ಲಿ ತೊಡಗಿಸಿಕೊಂಡ ಇವರು ದಿನ ಪತ್ರಿಕೆ, ವಾರ ಪತ್ರಿಕೆ, ನ್ಯೂಸ್ ವೆಬ್ ಪೋರ್ಟಲ್ ನಲ್ಲಿ ಕಾರ್ಯನಿರ್ವಹಸಿದ್ದಾರೆ.




