ಸಾಮಾಜಿಕ ಕೇಡುಗಳಿಗೆ ಸಾಹಿತ್ಯವೇ ಮದ್ದು ಎಂಬ ನಂಬಿಕೆಯಿಂದ ಜಿ.ಎಸ್.ಎಸ್. ಅವರು ತಮ್ಮ ಕಾವ್ಯ ಮತ್ತು ಬದುಕಿನ ಮೂಲಕ ಸಾಮಾನ್ಯ ಜನರ ಸಂಕಟಗಳ ಮೂಲಗಳನ್ನು ಸ್ಪಷ್ಟವಾಗಿ ವ್ಯಕ್ತಪಡಿಸಿದ ಜೀವಪರ ಮನಸ್ಸಿನ ಕವಿ ಎಂದು ಚಿತ್ರದುರ್ಗ ಸರ್ಕಾರಿ ವಿಜ್ಞಾನ ಕಾಲೇಜಿನ ಕನ್ನಡ ವಿಭಾಗದ ಮುಖ್ಯಸ್ಥ ಡಾ. ಪ್ರವೀಣ ಕುಮಾರ್ ಎಸ್ ಹೇಳಿದರು.
ಅವರು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಕರ್ನಾಟಕ ಸಾಹಿತ್ಯ ಅಕಾಡೆಮಿಯ ಉಡುಪಿ ಜಿಲ್ಲಾ ಚಕೋರ ವೇದಿಕೆ ವತಿಯಿಂದ ಆಯೋಜಿಸಿದ್ದ ‘ಜಿ.ಎಸ್.ಎಸ್. ಸಾಹಿತ್ಯದ ವೈಚಾರಿಕ ನೆಲೆಗಳು’ ವಿಷಯದ ವಿಶೇಷ ಉಪನ್ಯಾಸ ಕಾರ್ಯಕ್ರಮದಲ್ಲಿ ಮಾತನಾಡಿದರು.
ಪ್ರಾಸ್ತಾವಿಕವಾಗಿ ಮಾತನಾಡಿದ ಕನ್ನಡ ವಿಭಾಗದ ಮುಖ್ಯಸ್ಥೆ ಡಾ. ಸೌಮ್ಯಲತಾ ಪಿ. ಅವರು ಸಾಹಿತ್ಯ ಅಕಾಡೆಮಿಯ ಚಕೋರ ವೇದಿಕೆಯ ಉದ್ದೇಶ ಹಾಗೂ ಜಿ.ಎಸ್.ಎಸ್. ಸಾಹಿತ್ಯದ ಆಶಯಗಳನ್ನು ಪರಿಚಯಿಸಿದರು.
ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿದ್ದ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್ ಅವರು ಜಿ.ಎಸ್.ಎಸ್. ಅವರ ಸಾಹಿತ್ಯ ಹಾಗೂ ಸಂಘಟನಾತ್ಮಕ ಸಾಮರ್ಥ್ಯ ಕನ್ನಡ ಸಾಹಿತ್ಯಕ್ಕೆ ನೀಡಿದ ದೇಣಿಗೆ ಅನನ್ಯವಾದುದು ಎಂದು ಹೇಳಿದರು.
ದ್ವಿತೀಯ ಎಂ.ಎ. ವಿದ್ಯಾರ್ಥಿನಿ ಸುರಕ್ಷಾ ಸ್ವಾಗತಿಸಿದರು. ಪ್ರಥಮ ಎಂ.ಎ. ವಿದ್ಯಾರ್ಥಿನಿ ಶ್ರಾವ್ಯ ಕಾರ್ಯಕ್ರಮವನ್ನು ನಿರೂಪಿಸಿದ್ದು, ಸ್ಪರ್ಶಾ ವಂದಿಸಿದರು.





