ಆಧ್ಯಾತ್ಮಿಕ ಸತ್ವವನ್ನು ಸಾಮಾಜಿಕ ಸತ್ಯದೊಂದಿಗೆ ಕಸಿ ಮಾಡಿಕೊಳ್ಳುವ ಮೂಲಕ ಧರ್ಮಗಳ ಕೇಡಾದ ಪುರೋಹಿತಶಾಹಿಯನ್ನು ದೂರವಿಟ್ಟು, ದೀನ–ದಮನಿತರ ಬದುಕನ್ನು ಹಸನಾಗಿಸುವ ಜೀವಪರ ಸಮಾನತೆ ಮತ್ತು ಸಾಮರಸ್ಯದ ಧಾರ್ಮಿಕತೆಯನ್ನು ವಿವೇಕಾನಂದರು ತಿಳಿಹೇಳಿದರು ಎಂದು ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್. ಹೇಳಿದರು.
ಅವರು ಹಿರಿಯಡಕದ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ ಐಕ್ಯೂಎಸಿ ಹಾಗೂ ರಾಷ್ಟ್ರೀಯ ಸೇವಾ ಯೋಜನೆ (ಎನ್ಎಸ್ಎಸ್) ಘಟಕಗಳ ಸಂಯುಕ್ತ ಆಶ್ರಯದಲ್ಲಿ ಆಯೋಜಿಸಲಾದ ವಿವೇಕಾನಂದ ಜಯಂತಿ ಕಾರ್ಯಕ್ರಮದಲ್ಲಿ ವಿವೇಕಾನಂದರ ಭಾವಚಿತ್ರಕ್ಕೆ ಮಾಲಾರ್ಪಣೆ ಮಾಡಿ ಮಾತನಾಡಿದರು.

ವಿವೇಕಾನಂದರ ಬದುಕು ಮತ್ತು ಅವರ ಬರಹಗಳು ಯುವಸಮುದಾಯಕ್ಕೆ ದಾರಿದೀಪವಾಗಿದ್ದು, ಅವರ ಚಿಂತನೆಯನ್ನು ಯುವಕರು ಸ್ವತಃ ಓದಿ ಅರಿತುಕೊಳ್ಳುವ ಅಗತ್ಯವಿದೆ ಎಂದು ಅವರು ಹೇಳಿದರು.
ಕಾರ್ಯಕ್ರಮದಲ್ಲಿ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ., ಎನ್ಎಸ್ಎಸ್ ಯೋಜನಾಧಿಕಾರಿ ನಂದೀಶ್ ಕುಮಾರ್ ಕೆ.ಸಿ., ಕನ್ನಡ ಉಪನ್ಯಾಸಕಿ ರೇವತಿ ಹಾಗೂ ಗ್ರಂಥಪಾಲಕಿ ಶೈಲಾ ಉಪಸ್ಥಿತರಿದ್ದರು.





