ಭಾಷೆ, ಬದುಕು, ಕಸುಬು, ಕಾಯಕ ಆರಾಧನೆ ಆಚರಣೆ ಎಲ್ಲವೂ ಆಗಿ ನಮ್ಮ ನಿತ್ಯದ ಬದುಕಿನ ಜೊತೆಗೆ ಬೆರೆತಿರುವ ನಾಡನುಡಿಯನ್ನು ಸರಿಯಾಗಿ ಅರ್ಥ ಮಾಡಿಕೊಳ್ಳುವ ಮೂಲಕ ಕನ್ನಡವನ್ನು ಕನ್ನಡವಾಗಿ ಉಳಿಸಿಕೊಳ್ಳುವ ಗಟ್ಟಿಯಾದ ಮನಸ್ಥಿತಿ ನಮ್ಮದಾಗಲಿ ಎಂದು ಕರ್ನಾಟಕ ಸಾಹಿತ್ಯ ಅಕಾಡೆಮಿಯ ಚಕೋರ ಸಾಹಿತ್ಯ ವಿಚಾರ ವೇದಿಕೆಯ ಉಡುಪಿ ಜಿಲ್ಲಾ ಸಂಚಾಲಕ ರಾಮಾಂಜಿಯವರು ಹಾರೈಸಿದರು. ಅವರು ಹಿರಿಯಡಕ ಸರ್ಕಾರಿ ಪ್ರಥಮದರ್ಜೆ ಕಾಲೇಜಿನಲ್ಲಿ ಆಯೋಜಿತವಾದ ನಾಡಹಬ್ಬ ಕನ್ನಡ ರಾಜ್ಯೋತ್ಸವದ ಧ್ವಜಾರೋಹಣ ನೆರವೇರಿಸಿ ಮಾತನಾಡಿದರು.

ಕಾರ್ಯಕ್ರಮದ ಅಧ್ಯಕ್ಷತೆ ವಹಿಸಿ ಮಾತನಾಡಿದ ಪ್ರಾಂಶುಪಾಲ ಡಾ. ಜಯಪ್ರಕಾಶ್ ಶೆಟ್ಟಿ ಹೆಚ್, ‘ಕನ್ನಡದ ಹೆಗಲ ಮೇಲೆ ಕುಳಿತು ಸವಾರಿ ನಡೆಸುವ ಭಾಷೆಗಳ ಕುರಿತು ಎಚ್ಚರ ವಹಿಸುವ ಮೂಲಕ ಕನ್ನಡ ರಾಷ್ಟ್ರೀಯತೆಯನ್ನು ಜತನವಾಗಿ ಕಾಪಾಡಿಕೊಳ್ಳಬೇಕಾದ ಹೊಣೆ ನಮ್ಮದು’ ಎಂದರು. ಕನ್ನಡ ವಿಭಾಗ ಮುಖ್ಯಸ್ತರು ಹಾಗೂ ವಿದ್ಯಾರ್ಥಿ ಕ್ಷೇಮಪಾಲನಾಧಿಕಾರಿ ಡಾ. ಸೌಮ್ಯಲತಾ ಪಿ. ಸ್ವಾಗತಿಸಿ, ರಾಜ್ಯಶಾಸ್ತ್ರ ವಿಭಾಗ ಮುಖ್ಯಸ್ಥೆ ಅಪರ್ಣ ಕೆ ಯು ವಂದಿಸಿದ ಈ ಕಾರ್ಯಕ್ರಮವನ್ನು ರಾ.ಸೇ.ಯೋ. ಮತ್ತು ಯೂತ್ ರೆಡ್ ಕ್ರಾಸ್ ಕಾರ್ಯಕ್ರಮಾಧಿಕಾರಿ ನಂದೀಶ್ಕುಮಾರ್ ಕೆ.ಸಿ. ನಿರೂಪಿಸಿದರು. ಐಕ್ಯುಎಸಿ ಸಂಚಾಲಕ ಡಾ. ಲಿತಿನ್ ಬಿ ಎಂ. ವಿದ್ಯಾರ್ಥಿ ನಾಯಕ ಈರಬಸು ಹಾಗೂ ಇತರ ಬೋಧಕ, ಬೋಧಕೇತರರು ಮತ್ತು ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





