ಎರಡನೇ ಮದುವೆಯಾಗಲು ಹೆಣ್ಣು ತೋರಿಸುವ ನೆಪದಲ್ಲಿ ಹನಿಟ್ರ್ಯಾಪ್ ನಡೆಸಿದ ಬಂಟ್ವಾಳ ಮೂಲದ ತಂಡವೊಂದು ಆತನಿಂದ 45 ಲಕ್ಷ ರೂಪಾಯಿಗೂ ಅಧಿಕ ಹಣ ಸುಲಿಗೆ ಮಾಡಿದ ಬಗ್ಗೆ, ಏಳು ಜನರ ವಿರುದ್ಧ ವಿಟ್ಲ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಅಲ್ಲದೆ ಸಂತ್ರಸ್ತನಿಗೆ ಆರೋಪಿಗಳಿಂದ ನಿರಂತರ ಬೆದರಿಕೆ ಕರೆ ಬಂದಿದ್ದು, ಈ ಬಗ್ಗೆಯೂ ಗಲ್ಫ್ ಉದ್ಯಮಿ ಕೇರಳದ ತಾವರಕಡನ್ ಮೂಲದ ಮಹಮ್ಮದ್ ಅಶ್ರಫ್ ಬಂಟ್ವಾಳ ನಗರ ಪೊಲೀಸ್ ಠಾಣೆಗೆ ದೂರು ನೀಡಿದ್ದಾರೆ.
ರಿಯಾಝ್, ಮುಸ್ತಫಾ ಬಂದರ್, ಸಫಿಯಾ ಮಾಣಿ, ಸರಪುದ್ದೀನ್, ವಿಟ್ಲ ಹಸೈನಾರ್ ವಿರುದ್ಧ ಸಂತ್ರಸ್ತ ದೂರು ನೀಡಿದ್ದಾರೆ.
ಸಂತ್ರಸ್ತ ನೀಡಿರುವ ದೂರಿನಲ್ಲಿ, “ನನ್ನ ಫೋನ್ ನಂಬರ್ಗೆ ಬೇರೆ ಬೇರೆ ವ್ಯಕ್ತಿಗಳು ಕರೆ ಮಾಡಿ, ʼಈ ಪ್ರಕರಣದಿಂದ ಆರೋಪಿಗಳನ್ನು ಕೈಬಿಡಬೇಕು, ನಿಮ್ಮನ್ನು ನಾವು ಹೊರಗಡೆ ನೋಡಿಕೊಳ್ಳುತ್ತೇವೆ, ಆರೋಪಿಗಳನ್ನು ಕೈ ಬಿಡಿ ಅವರು ಮುಗ್ಧರುʼ ಎನ್ನುವಂತಹ ಬೆದರಿಕೆ ಕರೆಗಳು ಬರುತ್ತಿವೆ” ಎಂದು ಉಲ್ಲೇಖಿಸಿದ್ದಾರೆ.

ಈ ಸುದ್ದಿ ಓದಿದ್ದೀರಾ? ಗುಬ್ಬಿ | ಅರ್ಥಪೂರ್ಣ ಕನ್ನಡ ರಾಜ್ಯೋತ್ಸವ ಆಚರಣೆಗೆ ತಾಲ್ಲೂಕು ಆಡಳಿತ ಸಜ್ಜು
“ಸೇಫಿಯಾ ಮಾಣಿ ಎಂಬ ಆರೋಪಿ ಈ ರೀತಿ ಕರೆ ಮಾಡಿ, ʼಕೇಸ್ ವಾಪಸ್ ಪಡೆಯದಿದ್ದರೆ ವೀಡಿಯೋ, ಫೋಟೋ ಅವರ ಜಮಾತಿಗೆ ಅವರ ಪತ್ನಿ ಸಂಬಂಧಿಕರಿಗೆ ನೀಡುತ್ತೇನೆʼ ಎಂದು ಬೆದರಿಸಿದ್ದು, ಬಳಿಕ ನನ್ನ ಸಹೋದರನಿಗೆ ಕರೆ ಮಾಡಿ ಕಳುಹಿಸಿದ್ದಾರೆ. ಅದಕ್ಕೆ ಸಂಬಂಧಿಸಿದಂತೆ ನನ್ನ ಸಹೋದರ ಕೇರಳದಲ್ಲಿ ದೂರು ನೀಡಿದ್ದು, ನನಗೆ ಈ ಮೇಲಿನ ನಂಬರ್ನಿಂದ ಬೆದರಿಕೆ ಕರೆ ಬರುತ್ತಿದ್ದು, ಅವರ ಮೇಲೆ ಕಾನೂನು ಕ್ರಮ ಕೈಗೊಳ್ಳಬೇಕು ಮತ್ತು ರಕ್ಷಣೆ ನೀಡಬೇಕು” ಎಂದು ದೂರಿನಲ್ಲಿ ತಿಳಿಸಿದ್ದಾರೆ.





