ಭಕ್ತರ ಪಾಲಿನ ಶ್ರದ್ಧಾ ಕೇಂದ್ರ, ಪ್ರಸಿದ್ಧ ಧಾರ್ಮಿಕ ಕ್ಷೇತ್ರವಾದ ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರ ತಾಲ್ಲೂಕಿನ ಇಡಗುಂಜಿ ಮಹಾಗಣಪತಿ ದೇವಸ್ಥಾನ ಈಗ ಅರ್ಚಕರ ಜಗಳದ ವೈರಲ್ ವಿಡಿಯೋ ದಿಂದ ಸುದ್ದಿಯಲ್ಲಿಯಿದೆ.
ದೇವಸ್ಥಾನದ ಪವಿತ್ರ ಗರ್ಭಗುಡಿಯ ಮುಂದೆಯೇ ದಕ್ಷಿಣೆ (ಹರಿವಾಣ) ಹಣಕ್ಕಾಗಿ ಅರ್ಚಕರಿಬ್ಬರು ಕಿತ್ತಾಡಿಕೊಂಡಿರುವ ಆಘಾತಕಾರಿ ದೃಶ್ಯಗಳು ಈಗ ಇಡೀ ರಾಜ್ಯದ ಗಮನ ಸೆಳೆದಿವೆ.
ಘಟನೆಯ ವಿವರ: ದೇವಸ್ಥಾನದ ಅರ್ಚಕರುಗಳಾದ ನರಸಿಂಹ ಭಟ್ ಮತ್ತು ರಮಾನಂದ ಭಟ್ ಎಂಬುವವರ ನಡುವೆ ಈ ಸಂಘರ್ಷ ನಡೆದಿದೆ. ಭಕ್ತರು ಹರಿವಾಣಕ್ಕೆ ಹಾಕುವ ಕಾಣಿಕೆ ಹಣದ ಹಂಚಿಕೆ ವಿಚಾರವಾಗಿ ಇಬ್ಬರ ನಡುವೆ ಮಾತಿನ ಚಕಮಕಿ ನಡೆದಿದ್ದು, ಅದು ವಿಕೋಪಕ್ಕೆ ತಿರುಗಿ ಪರಸ್ಪರ ತಳ್ಳಾಡಿಕೊಳ್ಳುವ ಹಂತಕ್ಕೆ ತಲುಪಿದೆ.
ಭಕ್ತರು ದೈವದರ್ಶನ ಪಡೆಯುತ್ತಿರುವಾಗಲೇ ಅರ್ಚಕರು ಸಾರ್ವಜನಿಕವಾಗಿ ಇಂತಹ ವರ್ತನೆ ತೋರಿರುವುದು ಭಕ್ತ ವಲಯದಲ್ಲಿ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ಈ ಸಂಘರ್ಷ ಇಂದು ನಿನ್ನೆಯದಲ್ಲ. ಇಡಗುಂಜಿ ದೇವಸ್ಥಾನದ ಪೂಜಾ ಹಕ್ಕು ಹಾಗೂ ಆಡಳಿತಾತ್ಮಕ ಅಧಿಕಾರಕ್ಕಾಗಿ ಅರ್ಚಕರ ಕುಟುಂಬಗಳ ನಡುವೆ ದಶಕಗಳಿಂದಲೂ ಕಾನೂನು ಸಮರ ನಡೆಯುತ್ತಿದೆ. ನ್ಯಾಯಾಲಯದಲ್ಲಿ ಈ ಕುರಿತು ದಾವೆಗಳು ಹೂಡಲ್ಪಟ್ಟಿದ್ದು, ಕುಟುಂಬದ ಒಳಗಿನ ಆಂತರಿಕ ಕಲಹ ಈಗ ದೇವಸ್ಥಾನದ ಘನತೆಗೆ ಧಕ್ಕೆ ತರುತ್ತಿದೆ.
ಈ ಸುದ್ದಿ ಓದಿದ್ದೀರಾ? ಉತ್ತರ ಕನ್ನಡ | ಅಪರಾಧ ಮುಕ್ತ ಜಿಲ್ಲೆಯತ್ತ ಹೆಜ್ಜೆ; ಕಾನೂನು ಬಾಹಿರ ಚಟುವಟಿಕೆಗಳಿಗೆ ಬಿತ್ತು ಕಡಿವಾಣ!
ಕಾಣಿಕೆ ಹಣದ ಮೇಲಿನ ಹಪಾಹಪಿಯೇ ಈ ಎಲ್ಲಾ ಕಹಿ ಘಟನೆಗಳಿಗೆ ಮೂಲ ಕಾರಣ ಎಂದು ಹೇಳಲಾಗುತ್ತಿದೆ. ಕೆಲವು ದಿನಗಳ ಹಿಂದೆ ನಡೆದಿದ್ದ ಈ ಘಟನೆಯ ದೃಶ್ಯಗಳನ್ನು ಭಕ್ತರೊಬ್ಬರು ಚಿತ್ರೀಕರಿಸಿದ್ದು, ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವಿಡಿಯೋ ಭಾರಿ ವೈರಲ್ ಆಗಿದೆ.
ಮಂಕಿ ಪೊಲೀಸ್ ಠಾಣಾ ವ್ಯಾಪ್ತಿಯಲ್ಲಿ ಈ ಘಟನೆ ಸಂಭವಿಸಿದ್ದು, ಪವಿತ್ರ ಕ್ಷೇತ್ರದಲ್ಲಿ ನಡೆದ ಈ ‘ಅಪವಿತ್ರ’ ವರ್ತನೆಯ ಬಗ್ಗೆ ಭಕ್ತರು ಬೇಸರ ವ್ಯಕ್ತಪಡಿಸುತ್ತಿದ್ದಾರೆ. “ದೇವರಿಗೆ ನೀಡುವ ಕಾಣಿಕೆಗಾಗಿ ದೇವರ ಸೇವಕರೇ ಹೀಗೆ ಬೀದಿಯಲ್ಲಿ ಜಗಳವಾಡುತ್ತಿರುವುದು ದುರದೃಷ್ಟಕರ” ಎಂಬ ಮಾತುಗಳು ಸಾರ್ವಜನಿಕ ವಲಯದಲ್ಲಿ ಕೇಳಿಬರುತ್ತಿವೆ.





