ಉತ್ತರ ಕನ್ನಡ ಜಿಲ್ಲೆಯ ಹೊನ್ನಾವರದಲ್ಲಿ ಬಸ್ ಹತ್ತುವಾಗ ಪ್ರಯಾಣಿಕರೊಬ್ಬರ ಚಿನ್ನಾಭರಣ ಹಾಗೂ ನಗದನ್ನು ಕಳವು ಮಾಡಿದ್ದ ಮಹಿಳೆಯನ್ನು ಹೊನ್ನಾವರ ಪೊಲೀಸರು ಬಂಧಿಸುವಲ್ಲಿ ಯಶಸ್ವಿಯಾಗಿದ್ದಾರೆ. ಬಂಧಿತೆಯಿಂದ ₹1,01,050 ಮೌಲ್ಯದ ಚಿನ್ನಾಭರಣ ಮತ್ತು ನಗದು ಹಣವನ್ನು ವಶಪಡಿಸಿಕೊಂಡಿದ್ದಾರೆ.
ಹಳದಿಪುರದ ನಿವಾಸಿ ಬನಾಪ್ಪ ಶಾರೀಕ್ ಶೇಖ್ ಅವರು ಅ. 4ರಂದು ಮಧ್ಯಾಹ್ನ 2:30ರ ಸುಮಾರಿಗೆ ಹೊನ್ನಾವರದ ಶರಾವತಿ ಸರ್ಕಲ್ನಲ್ಲಿ ಹಳದಿಪುರಕ್ಕೆ ತೆರಳಲು ಬಸ್ ಹತ್ತುತ್ತಿದ್ದಾಗ ಕಳ್ಳತನ ನಡೆದಿದೆ. ಬಸ್ ಹತ್ತುವ ವೇಳೆ ಅವರ ಬ್ಯಾಗಿನ ಜಿಪ್ ತೆರೆದು ಅದರೊಳಗಿನ ಚಿಕ್ಕ ಪರ್ಸ್ ಕಳವುಗೊಂಡಿತ್ತು. ಆ ಪರ್ಸ್ನಲ್ಲಿ ₹80,000 ಮೌಲ್ಯದ ಬಂಗಾರದ ಚೈನ್, ₹8,000 ಮೌಲ್ಯದ ಬಂಗಾರದ ಕಿವಿಯೋಲೆ ಹಾಗೂ ₹8,000 ನಗದು ಸೇರಿ ಒಟ್ಟು ₹96,000 ಮೌಲ್ಯದ ಸ್ವತ್ತು ಇತ್ತು. ಈ ಕುರಿತು ಬನಾಪ್ಪ ಅವರು ನೀಡಿದ ದೂರಿನ ಮೇರೆಗೆ ಹೊನ್ನಾವರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿತ್ತು.
ಈ ಸುದ್ದಿ ಓದಿದ್ದೀರಾ? ಅಭಿವೃದ್ಧಿ ಹೆಸರಿನಲ್ಲಿ ಪಶ್ಚಿಮ ಘಟ್ಟಕ್ಕೆ ಕೊಡಲಿ ಪೆಟ್ಟು; 3.5 ಲಕ್ಷ ಮರಗಳ ಮಾರಣಹೋಮಕ್ಕೆ ಸಿದ್ಧತೆ
ಕಳವು ಪ್ರಕರಣದ ತನಿಖೆಗಾಗಿ ಉತ್ತರ ಕನ್ನಡ ಜಿಲ್ಲಾ ಪೊಲೀಸ್ ಇಲಾಖೆ ವಿಶೇಷ ತಂಡವನ್ನು ರಚಿಸಿತ್ತು. ತನಿಖೆ ಮುಂದುವರಿಸಿದ ವೇಳೆ ಅ.5ರಂದು ಪೊಲೀಸರಿಗೆ ಸಿಕ್ಕ ಖಚಿತ ಮಾಹಿತಿ ಆಧಾರದ ಮೇಲೆ ಕುಮಟಾ ತಾಲೂಕು ಮಿರ್ಜಾನ್ನ ತಾರಿಬಾಗಿಲು ನಿವಾಸಿ ದೀಪಾ ಬೊಮ್ಮಯ್ಯ ಅಂಬಿಗ ಅವರನ್ನು ವಶಕ್ಕೆ ಪಡೆದು ವಿಚಾರಣೆ ನಡೆಸಲಾಯಿತು. ವಿಚಾರಣೆ ವೇಳೆ ಆರೋಪಿತೆ ಕಳವು ಮಾಡಿರುವುದಾಗಿ ಒಪ್ಪಿಕೊಂಡಿದ್ದಾರೆ. ಪೊಲೀಸರು ಆಕೆಯಿಂದ ಕಳವು ಮಾಡಿದ್ದ ಚಿನ್ನಾಭರಣ ಹಾಗೂ ನಗದು ಸೇರಿ ₹1,01,050 ಮೌಲ್ಯದ ಸ್ವತ್ತುಗಳನ್ನು ವಶಪಡಿಸಿಕೊಂಡಿದ್ದಾರೆ. ಆರೋಪಿತೆಯನ್ನು ನ್ಯಾಯಾಲಯಕ್ಕೆ ಹಾಜರುಪಡಿಸಲಾಗಿದ್ದು, ನ್ಯಾಯಾಲಯವು ಆಕೆಗೆ ನ್ಯಾಯಾಂಗ ಬಂಧನ ವಿಧಿಸಿದೆ.





