“ಯಾವುದೇ ಪ್ರತಿಭಟನೆಯನ್ನು ಫ್ರೀಡಂ ಪಾರ್ಕ್ನಲ್ಲಿ ಮಾಡಬೇಕು ಎಂದು ಹೈಕೋರ್ಟ್ ಆದೇಶ ಹೊರಡಿಸಿದೆ. ಹಾಗಿದ್ದಾಗ ಇವರಿಗೆ(ಆರ್ಎಸ್ಎಸ್) ಹೇಗೆ ಅವಕಾಶ ಕೊಡಲಾಯಿತು ಎಂದು ಪಿಐಎಲ್ ಸಲ್ಲಿಸಲಿದ್ದೇವೆ. ಆರ್ಎಸ್ಎಸ್ ಹೆಸರಲ್ಲಿ ನೂರಾರು ಎಕರೆ ಜಾಗ ತೆಗೆದುಕೊಂಡಿದ್ದಾರೆ. ಸಂಘ ನೋಂದಣಿಯಾಗದೆ ಹೇಗೆ ಜಾಗ ಕೊಟ್ಟರು” ಎಂದು ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟದ ಪ್ರಧಾನ ಸಂಚಾಲಕ ಕೆ ಎಂ ರಾಮಚಂದ್ರಪ್ಪ ಪ್ರಶ್ನಿಸಿದರು.
ಕರ್ನಾಟಕ ಶೋಷಿತ ಸಮುದಾಯಗಳ ಮಹಾ ಒಕ್ಕೂಟ ಹಾಗೂ ಕರ್ನಾಟಕ ರಾಜ್ಯ ಹಿಂದುಳಿದ ಜಾತಿಗಳ ಒಕ್ಕೂಟದ ವತಿಯಿಂದ ಬೆಂಗಳೂರು ನಗರದ ಮೌರ್ಯ ಹೋಟೆಲ್ನಲ್ಲಿ ನಡೆಸಿದ ಪತ್ರಿಕಾಗೋಷ್ಠಿಯಲ್ಲಿ ರಾಷ್ಟ್ರೀಯ ಸ್ವಯಂ ಸೇವಕ ಸಂಘಟನೆ(RSS) ಅವರು ಇಡೀ ದೇಶದಲ್ಲಿ ನಡೆಸುತ್ತಿರುವ ಉಪಟಳ ಮತ್ತು ಧಾರ್ಮಿಕ ಮತಾಂದತೆಯನ್ನು ಒಕ್ಕೊರಲಿನಿಂದ ಖಂಡಿಸಿದರು.
ಇದನ್ನು ಓದಿದ್ದೀರಾ? ಈ ದಿನ ಸಂಪಾದಕೀಯ | ಕೆಂಪುಕೋಟೆಯಲ್ಲಿ ನಿಂತು ಮೋದಿ ಆರ್ಎಸ್ಎಸ್ಅನ್ನು ಹೊಗಳುವ ದರ್ದು ಏನು?
“ಮಾಧ್ಯಮಗಳು ಸತ್ಯವನ್ನು ಬಿತ್ತರಿಸಬೇಕು. ಸತ್ಯದ ಮೂಲಕ ಸಮಾಜವನ್ನು ಎಚ್ಚರಿಸುವ ಕೆಲಸ ಆಗಬೇಕು. ಮುಂದಿನ ದಿನದಲ್ಲಿ ನಾವು ಸರ್ಕಾರದ ನಿಲುವಿಗೆ ಬದ್ಧವಾಗಿದ್ದು, ಹೆಚ್ಚಿನ ಹೋರಾಟಗಳನ್ನು ಮಾಡುವವರಿದ್ದೀವಿ” ಎಂದು ಹಿರಿಯ ಹೋರಾಟಗಾರರಾದ ಮಾವಳ್ಳಿ ಶಂಕರ್ ಹೇಳಿದರು.
“ರಾಜ್ಯದೊಳಗಡೆ ಆರ್ಎಸ್ಎಸ್ ಪಥಸಂಚಲನದ ಮೂಲಕ ಉದ್ದೇಶ ಪೂರ್ವಕವಾಗಿ ಗೊಂದಲಗಳನ್ನು ಸೃಷ್ಟಿ ಮಾಡಿದೆ. ಆರ್ಎಸ್ಎಸ್ ಪರಂಪರೆ ಸುಳ್ಳು ಹೇಳುವ ಪರಂಪರೆ. ರಾಷ್ಟ್ರಧ್ವಜ, ರಾಷ್ಟ್ರಗೀತೆ, ಸಂವಿಧಾನವನ್ನು ಒಪ್ಪಿಲ್ಲದವರು ಹೇಗೆ ದೇಶಪ್ರೇಮಿಗಳಾಗುತ್ತಾರೆ. ಈ ದೇಶದಲ್ಲಿ ಆರು ಸಾವಿರಕ್ಕೂ ಹೆಚ್ಚು ಜಾತಿಗಳಿದ್ದರೂ, ಬ್ರಾಹ್ಮಣ ಸಮುದಾಯ ಬಿಟ್ಟು ಬೇರೆ ಯಾರೂ ಸರಸಂಘಚಾಲಕರು ಸಿಗಲಿಲ್ಲವೇ” ಎಂದು ವಕೀಲ ಅನಂತ್ ನಾಯ್ಕ್ ಪ್ರಶ್ನಿಸಿದರು.
“ಸರ್ಕಾರದಿಂದ ಯಾವುದಾದರೂ ಭೂಮಿಯನ್ನು ಅಥವಾ ಅನುದಾನವನ್ನು ತೆಗೆದುಕೊಂಡಿದ್ದರೆ, ಎಲ್ಲವೂ ತನಿಖೆ ಮಾಡಬೇಕು. ರಾಜ್ಯದ ಯಾವುದೇ ಮೂಲೆಯಲ್ಲಿ ಆರ್ಎಸ್ಎಸ್ ಚಟುವಟಿಕೆ ನಡೆದರೆ, ಪರವಾನಗಿ ಪಡೆದಿರಬೇಕು” ಎಂದು ಆಗ್ರಹಿಸಿದರು.
ಹಿರಿಯ ಲೇಖಕಿ ಡಾ. ಬಿ ಟಿ ಲಲಿತಾ ನಾಯಕ್ ಮಾತನಾಡಿ, “ಕತ್ತೆ, ಕುದುರೆ, ಸಂಘಟನೆಗಳು, ಮನುಷ್ಯರಿಗೂ ವಯಸ್ಸಾಗುತ್ತದೆ. ಆದರೆ ಆರ್ಎಸ್ಎಸ್ಗೆ ಆಗಿರುವ ವಯಸ್ಸು ಜನಪರವಲ್ಲ. ಆರ್ಎಸ್ಎಸ್ ಒಂದು ವಿಷವೃಕ್ಷ ಎಂದು ಎ ಕೆ ಸುಬ್ಬಯ್ಯನವರು ಈ ಹಿಂದೆಯೇ ಬರೆದಿದ್ದರು” ಎಂದು ನೆನಪಿಸಿಕೊಂಡರು.





