ವಿದ್ಯಾರ್ಥಿಗಳು ಮಕ್ಕಳ ಹಕ್ಕುಗಳ ಬಗ್ಗೆ ತಿಳಿದುಕೊಂಡು ಕಾನೂನು ರೀತಿಯಲ್ಲಿ ತಮಗೆ ದೊರೆಯುವ ಅನುಕೂಲಗಳನ್ನು ಪಡೆದುಕೊಳ್ಳಲು ಮುಂದಾಗಬೇಕು ಎಂದು ಜಿಲ್ಲಾ ಮಕ್ಕಳ ರಕ್ಷಣಾ ಘಟಕದ ಮೇಲ್ವಿಚಾರಕಿ ಪಲ್ಲವಿ ಕರೆ ನೀಡಿದರು.
ಪಟ್ಟಣದ ಹೊರವಲಯದ ಶ್ರೀ ಚಿದಂಬರಾಶ್ರಮ ಶಾಲೆಯಲ್ಲಿ ಜಿಲ್ಲಾಡಳಿತ ಜಿಲ್ಲಾ ಪಂಚಾಯತ್, ಮಹಿಳಾ ಮತ್ತು ಮಕ್ಕಳ ಅಭಿವೃದ್ಧಿ ಇಲಾಖೆ, ಮಹಿಳಾ ಸಬಲೀಕರಣ ಘಟಕ ಹಾಗೂ ಮಕ್ಕಳ ರಕ್ಷಣಾ ಘಟಕ, ಚಿದಂಬರ ಸೇವಾ ಸದನ ಪ್ರೌಢಶಾಲೆ ಇವರುಗಳ ಸಹಯೋಗದಲ್ಲಿ ದತ್ತು ಮಾಸಚರಣೆ ಕಾರ್ಯಕ್ರಮದಲ್ಲಿ ಮಾತನಾಡಿದರು.
ಹೆಣ್ಣು ಮಕ್ಕಳು ದುಷ್ಪರಿಣಾಮಗಳಿಗೆ ಮಾರು ಹೋಗದೆ ಉತ್ತಮ ಮಾರ್ಗದಲ್ಲಿ ಸಾಗಿ ತಮ್ಮ ವಿದ್ಯಾರ್ಥಿ ಜೀವನದಲ್ಲಿ ಉತ್ತಮ ವಿದ್ಯಾಭ್ಯಾಸ ಮಾಡುವ ಕಡೆ ಗಮನಹರಿಸಬೇಕು ಎಂದ ಅವರು ವೇಗದ ಜಗತ್ತಿನಲ್ಲಿ ಮಕ್ಕಳು ಬಹುಬೇಗ ಹಾದಿ ತಪ್ಪುವ ಅವಕಾಶ ಹೆಚ್ಚಿದೆ. ಜೊತೆಗೆ ಹದಿಹರೆಯದ ವಯಸ್ಸಿನಲ್ಲಿ ಸಮಾಜಘಾತುಕ ಕೆಲಸಗಳಿಗೆ ಸಿಲುಕುತ್ತಾರೆ. ಈ ಹಿನ್ನಲೆ ಮಕ್ಕಳಿಗೆ ಕಾನೂನು ಮತ್ತು ಹಕ್ಕುಗಳ ಬಗ್ಗೆ ಜಾಗೃತಿ ಮೂಡಿಸುವ ಅಗತ್ಯವಿದೆ ಎಂದರು.
ಮಹಿಳಾ ಸಬಲೀಕರಣ ಘಟಕದ ಜಿಲ್ಲಾ ಮಿಷನ್ ಸಂಯೋಜಕ ಎಚ್.ಜಿ.ಶಶಿಧರ್ ಮಾತನಾಡಿ ವಿದ್ಯಾರ್ಥಿಗಳು ಮೊಬೈಲ್, ಟಿವಿ ಇವುಗಳಿಂದ ದೂರವಿದ್ದು ನಿರಂತರ ಅಭ್ಯಾಸದಲ್ಲಿ ತೊಡಗಿದಾಗ ಮಾತ್ರ ವಿದ್ಯಾರ್ಥಿಗಳು ಜೀವನದಲ್ಲಿ ಯಶಸ್ಸು ಕಾಣಲು ಸಾಧ್ಯವಾಗುತ್ತದೆ.
ವಿದ್ಯಾರ್ಥಿ ಜೀವನದಲ್ಲಿ ನಿಗದಿತ ವೇಳಾಪಟ್ಟಿಯನ್ನು ಸಿದ್ಧಪಡಿಸಿಕೊಂಡು ಅಭ್ಯಾಸ ಮಾಡಿದರೆ ಪರೀಕ್ಷೆಗಳಲ್ಲಿ ಉತ್ತಮ ಅಂಕ ಗಳಿಸಲು ಸಾಧ್ಯವಾಗುತ್ತದೆ. ಈ ಜೊತೆಗೆ ಬದುಕಿನ ಮೌಲ್ಯ ತಿಳಿದು ಜೀವನದ ಪಾಠವನ್ನು ಸಹ ಕಲಿಯಬೇಕು ಎಂದು ತಿಳಿಸಿದರು.
ಇದೇ ಸಂದರ್ಭದಲ್ಲಿ ಮಕ್ಕಳ ಸಹಾಯವಾಣಿ 1098, ಮಕ್ಕಳ ಹಕ್ಕುಗಳು, ಬಾಲಕಾರ್ಮಿಕ ನಿಷೇಧ ಕಾಯ್ದೆ ವಿಷಯಗಳ ಬಗ್ಗೆ ಮಾಹಿತಿ ನೀಡಿದರು.
ಕಾರ್ಯಕ್ರಮದಲ್ಲಿ ಚಿದಂಬರಾಶ್ರಮ ಶಾಲೆಯ ಮುಖ್ಯೋಪಾಧ್ಯಾಯ ಎ.ಬಿ.ಜಗದೀಶ್, ಸಶಿಕ್ಷಕಿಯರಾದ ಪದ್ಮ , ರಶ್ಮಿ, ಸಹನಾ,ಶಶಿಕಲ ಹಾಗೂ ಆಡಳಿತ ವರ್ಗ ಮತ್ತು ವಿದ್ಯಾರ್ಥಿಗಳು ಇತರರು ಇದ್ದರು.





