ಹಾಸನ ಜಿಲ್ಲೆ, ಬೇಲೂರು ತಾಲ್ಲೂಕು ಹಳೇಬೀಡಿನ ಶ್ರೀಕ್ಷೇತ್ರ ಪುಷ್ಪಗಿರಿಯಲ್ಲಿ ನಡೆಯುತ್ತಿರುವ ‘ಪದ್ಮಶ್ರೀ ಸುಭಾಷ್ ಪಾಳೇಕರ್ ಕೃಷಿ ಪದ್ಧತಿ ಕಾರ್ಯಾಗಾರದಲ್ಲಿ ಜಿಲ್ಲಾಧಿಕಾರಿ ಲತಾಕುಮಾರಿ ಮಾತನಾಡಿ, ‘ಕೃಷಿ ಕೇವಲ ಓದಲ್ಲ, ಅದುವೇ ಅನುಭವಗಳ ಬುತ್ತಿ’ ಎಂದು ಅವಲೋಕಿಸಿದರು.
“ದೇಶದಲ್ಲಿ ಬಹುಪಾಲು ಕೃಷಿಕರಿದ್ದು, ಕೃಷಿ ಪ್ರಧಾನ ಸಮಾಜವಾಗಿದೆ. ಕೃಷಿ ಸಂಸ್ಕಾರ ಕುಟುಂಬಗಳ ಹಿನ್ನಲೆಯಲ್ಲಿ ಬರುವಂತದ್ದು. ಕೃಷಿ ತನ್ನದೇ ಆದ ಸಂಸ್ಕಾರ ಹೊಂದಿದೆ. ಓದಿನಲ್ಲಿ ಅಷ್ಟೇ ಅಲ್ಲಾ, ಅನುಭವದ ಅಗತ್ಯತೆ ಬಹಳ ಮುಖ್ಯ. ಹಿರಿಯರು ಕೃಷಿಗಾಗಿ ಕಂಡುಕೊಂಡ ಮಾರ್ಗಗಳು ಬಹು ಉಪಯುಕ್ತವಾದದ್ದು. ಕೃಷಿಗೆ ಹೆಚ್ಚು ಒತ್ತು ನೀಡುವುದು ಇಂದಿನ ಅಗತ್ಯತೆಯಲ್ಲಿ ಪ್ರಾಮುಖ್ಯತೆ ಪಡೆದಿದೆ. ಹಾಗೆಯೇ, ಅಗತ್ಯತೆಯ ಕುರಿತಾಗಿಯೂ ಅರಿಯುವ ಕೆಲಸ ಆಗಬೇಕಿದೆ”.
ಕೃಷಿಗೆ ಹಲವಾರು ಸವಾಲುಗಳಿವೆ. ಅದರಲ್ಲೂ ಮಾರುಕಟ್ಟೆಯ ಕೊರತೆ ಹೆಚ್ಚಾಗಿ ಕಂಡುಬರುತ್ತದೆ. ಇನ್ನಿಲ್ಲದ ದಲ್ಲಾಳಿಗಳ ಹಾವಳಿ ಹೆಚ್ಚಿದೆ. ಬೆಳೆದ ರೈತರಿಗೆ, ಕೊಂಡುಕೊಂಡ ಗ್ರಾಹಕರಿಗೆ ಲಾಭವಿಲ್ಲ. ಕುಳಿತಲ್ಲಿಯೇ ಶ್ರಮ ಪಡದೆ ದುಪ್ಪಟ್ಟು ಲಾಭ ಮಾಡಿಕೊಳ್ಳುವ ಪರಿಸ್ಥಿತಿಯು ರೈತರನ್ನು ಸಾಕಷ್ಟು ರೀತಿಯಲ್ಲಿ ಬಾಧಿಸುತ್ತಿದೆ. ಆದಾಯ ಕಾಣಲು ಪರೆದಾಡಬೇಕಾದ ಪರಿಸ್ಥಿತಿ. ತಕ್ಷಣದ ಮಾರುಕಟ್ಟೆ, ಖರೀದಿ ಕೇಂದ್ರ ಇಲ್ಲದಿರುವುದನ್ನೇ ಬಂಡವಾಳ ಮಾಡಿಕೊಂಡು, ರೈತರನ್ನು ದುರ್ಬಳಕೆ ಮಾಡಿಕೊಂಡು ಇಷ್ಟ ಬಂದ ಬೆಲೆಗೆ ಕೊಳ್ಳುವುದರಿಂದ ಸಂಕಷ್ಟಕ್ಕೆ ಗುರಿಯಾಗುತ್ತಿದ್ದಾರೆ.

ಸವಾಲುಗಳ ನಡುವೆ, ಕೃಷಿ ವಿಧಾನಗಳಲ್ಲಿ ಬದಲಾವಣೆ ಕಂಡುಕೊಂಡು, ಬೇರೆಯದ್ದೇ ರೂಪದಲ್ಲಿ ಆದಾಯ ಮಾಡುವ ಮಟ್ಟಿಗೆ ರೈತರು ಮುಂದಾಗಬೇಕಿದೆ. ಸ್ವಂತ ಮಾರುಕಟ್ಟೆ ಸೃಷ್ಟಿಸಿ ನೇರ ಮಾರಾಟದ ಮೂಲಕ ಹೆಚ್ಚಿನ ಗಳಿಕೆಗೆ ಮುಂದಾಗಬೇಕು. ಇದರ ಜೊತೆಗೆ ಮಣ್ಣಿನ ಫಲವತ್ತತೆ ಕಡೆಗೆ ಗಮನ ಹರಿಸಿ, ರಾಸಾಯನಿಕ ಮುಕ್ತ ಕೃಷಿ ಕಂಡುಕೊಳ್ಳಲು ಮುಂದಾಗಬೇಕು.
ವಿಶಮುಕ್ತ ಆಹಾರದ ಕಡೆಗೆ ಗಮನ ಹರಿಸಿದಾಗ ಮಾರುಕಟ್ಟೆ, ಗ್ರಾಹಕರು ತೆರೆದುಕೊಳ್ಳುತ್ತಾರೆ. ಎಲ್ಲದಕ್ಕೂ ರಾಸಾಯನಿಕ, ಗೊಬ್ಬರವೇ ಆಧಾರವಲ್ಲ. ಇದನ್ನ ಹಿರಿಯರ ಅನುಭವದ ಮಾದರಿಯಲ್ಲಿ ಅರಿತು, ಅಳವಡಿಸಿಕೊಳ್ಳಬೇಕು. ಇದರ ಜೊತೆಗೆ ‘ಪ್ರಕೃತಿ ಉಳಿಯಬೇಕು, ಪ್ರಕೃತಿಯನ್ನು ಬೆಳೆಸಬೇಕು’. ಮುಖ್ಯವಾಗಿ ರೈತರ ಸಾವನ್ನು ತಡೆಯುವ ನಿಟ್ಟಿನಲ್ಲಿ ಕೆಲಸ ಮಾಡಬೇಕಿದೆ. ಇದಕ್ಕಾಗಿ ಜನರೊಟ್ಟಿಗೆ ಕೆಲಸ ಮಾಡಬೇಕಿದೆ ಎಂದು ಕರೆ ನೀಡಿದರು.

ಹಿರಿಯ ರೈತ ಮಹಿಳಾ ಮುಖಂಡರಾದ ಅನುಸೂಯಮ್ಮ ಮಾತನಾಡಿ, “ಶೂನ್ಯ ಬಂಡವಾಳದಿಂದ ಲಾಭಗಳಿಸುವ ಬಗ್ಗೆ ಅರಿವು ಮೂಡಿಸುವ ಅಧ್ಯಯನ ಶಿಬಿರಗಳು ಇದೇ ಮಾದರಿಯಲ್ಲಿ ಹೆಚ್ಚು ನಡೆಯಬೇಕಿದೆ. ಪ್ರಸ್ತುತ ಸಂದರ್ಭದಲ್ಲಿ ಅಪಾಯದ ಮುನ್ಸೂಚನೆಯಲ್ಲಿ ನಾವಿದ್ದೇವೆ. ಸರ್ಕಾರಗಳು ‘ಬೀಜ ಕಾಯ್ದೆ-2025’ರ ಹೆಸರಿನಲ್ಲಿ ಕಾನೂನಾತ್ಮಕವಾಗಿ ಜಾರಿ ಮಾಡಲು ಹೊರಟಿವೆ. ಇದನ್ನ ಎಲ್ಲರೂ ಒಗ್ಗೂಡಿ ವಿರೋಧಿಸುವುದರ ಮೂಲಕ ತಡೆಯಬೇಕಿದೆ”.
ಈ ಸುದ್ದಿ ಓದಿದ್ದೀರಾ? ರೈತರ ಜೀವನ ಸುಧಾರಿಸುವಲ್ಲಿ ಸರ್ಕಾರಗಳು ವಿಫಲವಾಗಿವೆ: ಪ್ರೊ ರವಿವರ್ಮ ಕುಮಾರ್
ಇಂತಹ ಕಾಯ್ದೆಗಳು ಜಾರಿಯಾದಲ್ಲಿ ರೈತರ ಪಾರಂಪರಿಕ ಕೃಷಿಗೆ ದಕ್ಕೆ ಬರಲಿದೆ. ಸ್ವತಃ ಬೀಜ ತಯಾರಿ ಮಾಡಿಕೊಳ್ಳಲು ಆಗದ ಪರಿಸ್ಥಿತಿ ನಿರ್ಮಾಣವಾಗಲಿದೆ. ಇದರಿಂದಾಗಿ ಸ್ವಾವಲಂಬಿ ಜೀವನ ಕಳೆದುಕೊಳ್ಳುವ ಅಪಾಯವಿದೆ. ಜೊತೆಗೆ ದೇಶಿ ಬೀಜಗಳು ನಶಿಸಿ ಹೋಗಿ ರೈತ ಪರಾವಲಂಬಿಯಾಗುವ ಲಕ್ಷಣಗಳು ಗೋಚರಿಸುತ್ತಿವೆ. ಇಂತಹದಕ್ಕೆ ಅವಕಾಶ ಮಾಡಿಕೊಡಬಾರದು.
ಕಾರ್ಯಾಗಾರದ ಲೈವ್ ವೀಕ್ಷಿಸಿ: https://www.youtube.com/live/ILRJGTaZ744?si=mT-hAlZy5cmaQHw5

ಈಗಾಗಲೇ ರೈತ ವಿರೋಧಿ ಕಾಯ್ದೆಗಳನ್ನು ತಂದು ಇಕ್ಕಟ್ಟಿಗೆ ಸಿಲುಕಿಸಿದ್ದಾರೆ. ಇನ್ನ ಬೀಜ ಕಾಯ್ದೆ ತಂದು ರೈತ ಸಮುದಾಯದ ಪಾರಂಪರಿಕ ಅಸ್ಮಿತೆಗೆ ಕೊಡಲಿಪೆಟ್ಟು ಬೀಳಲಿದೆ. ರೈತ ಸಂಸ್ಕೃತಿ ಉಳಿಯಬೇಕು ಎಂದರೆ ‘ಬೀಜ ಕಾಯ್ದೆ-2025’ ಜಾರಿಗೆ ಬರಕೂಡದು ಎಂದು ಎಚ್ಚರಿಸಿದರು.





