ಹುಬ್ಬಳ್ಳಿಯ ಕೇಶ್ವಾಪುರದ ನಾಗೇಶ ಶರ್ಮಾ ಅವರಿಗೆ ವಾಟ್ಸ್ಆ್ಯಪ್ ವಿಡಿಯೊ ಕರೆ ಮಾಡಿದ ವಂಚಕರು, ಮುಂಬೈ ಪೊಲೀಸರ ಹೆಸರಲ್ಲಿ ಡಿಜಿಟಲ್ ಅರೆಸ್ಟ್ ಮಾಡಿರುವುದಾಗಿ ಬೆದರಿಸಿ, ₹1.07 ಕೋಟಿ ವರ್ಗಾಯಿಸಿಕೊಂಡು ವಂಚಿಸಿದ್ದಾರೆ.
ವಿಶ್ವಾಸ ಹಾಗೂ ಮತ್ತೊಬ್ಬ ವ್ಯಕ್ತಿ ನಾಗೇಶ ಅವರಿಗೆ ವಾಟ್ಸ್ಆ್ಯಪ್ ವಿಡಿಯೊ ಕರೆ ಮಾಡಿ, “ಮುಂಬೈನಲ್ಲಿರುವ ಕೆನರಾ ಬ್ಯಾಂಕ್ನಲ್ಲಿ ₹2 ಕೋಟಿ ವ್ಯವಹಾರ ನಡೆಸಲು ಒ ಎಂ ಅಬ್ದುಲ್ ಸಲಾಮ್ ಅವರಿಂದ ₹20 ಲಕ್ಷ ಪಡೆದುಕೊಂಡಿರುವ ಕುರಿತು ಲೋಕಬಾ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ. ಡಿಜಿಟಲ್ ಅರೆಸ್ಟ್ ಮೂಲಕ ತನಿಖೆ ನಡೆಸಲಾಗುತ್ತಿದ್ದು, ಹಣ ಪಾವತಿಸಬೇಕಾಗುತ್ತದೆ’ ಎಂದು ಬೆದರಿಸಿ ಹಣ ವರ್ಗಾಯಿಸಿಕೊಂಡು ವಂಚಿಸಿರುವುದಾಗಿ ದೂರಿನಲ್ಲಿ ತಿಳಿಸಿದ್ದು, ಹುಬ್ಬಳ್ಳಿ ಸೈಬರ್ ಕ್ರೈಂ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.
ಹುಬ್ಬಳ್ಳಿ ತಾಲೂಕಿನ ಗಾಮಗಟ್ಟಿಯ ದೇಸಾಯಿ ನಗರದ ಅಕ್ಷತಾ ಅವರಾದಿ ಅವರು ಇನ್ಸ್ಟಾಗ್ರಾಂ ಖಾತೆಯಲ್ಲಿನ ವರ್ಕ್ ಫ್ರಂ ಹೋಮ್ ಜಾಹೀರಾತು ನೋಡಿ, ವಂಚಕರ ಜಾಲಕ್ಕೆ ಸಿಲುಕಿ ₹19.49 ಲಕ್ಷ ಆನ್ಲೈನ್ನಲ್ಲಿ ಕಳೆದುಕೊಂಡಿದ್ದಾರೆ.
ಈ ಸುದ್ದಿ ಓದಿದ್ದೀರಾ? ಕೆಲವರು ರಾಜಕೀಯ ಪಕ್ಷಗಳಿಗೆ ತುತ್ತೂರಿ ಊದುತ್ತಿರುವುದರಿಂದ ಕನ್ನಡ ಸಾಹಿತ್ಯಕ್ಕೆ ಅಪಾಯ: ಎಚ್ ಎಂ ವೆಂಕಟೇಶ್
ಜಾಹೀರಾತು ವೀಕ್ಷಿಸಿದ ಕೂಡಲೇ ಅಕ್ಷತಾ ಅವರ ವಾಟ್ಸ್ಆ್ಯಪ್ ನಂಬರ್ಗೆ ಕೋಡ್ ನಂಬರ್ ಕಳುಹಿಸಿದ ವಂಚಕರು, ಸೂಪರ್ ಗ್ರೂಪ್ ಹೆಸರಿನ ವಾಟ್ಸ್ಆ್ಯಪ್ ಗ್ರೂಪ್ಗೆ ಅವರ ನಂಬರ್ ಸೇರಿಸಿದ್ದಾರೆ. ನಂತರ ಅವರಿಗೆ ವಿವಿಧ ಟಾಸ್ಕ್ ನೀಡಿ, ಹಣ ಹೂಡಿಕೆ ಮಾಡಿದರೆ ಹೆಚ್ಚಿನ ಲಾಭ ನೀಡುವುದಾಗಿ ನಂಬಿಸಿದ್ದಾರೆ. ವಿವಿಧ ಬ್ಯಾಂಕ್ ಖಾತೆಗಳಿಂದ ಆರ್ಟಿಜಿಎಸ್, ಫೋನ್ ಪೇ ಮೂಲಕ ಹಣ ವರ್ಗಾಯಿಸಿಕೊಂಡು ವಂಚಿಸಿದ್ದಾರೆಂದು ದೂರಿನಲ್ಲಿ ತಿಳಿಸಲಾಗಿದೆ.
“ಯಾರಾದರೂ ವಾಟ್ಸ್ಆ್ಯಪ್ ಅಥವಾ ವಿಡಿಯೊ ಕರೆ ಮೂಲಕ ಪೊಲೀಸರ ಹೆಸರಿನಲ್ಲಿ ಬೆದರಿಸಿದರೆ, ಹಣ ವರ್ಗಾಯಿಸಬಾರದು. ತಕ್ಷಣವೇ ಹತ್ತಿರದ ಸೈಬರ್ ಕ್ರೈಂ ಠಾಣೆ ಸಂಪರ್ಕಿಸಿ ದೂರು ನೀಡಬೇಕು” ಎಂದು ಪೊಲೀಸರು ಸಲಹೆ ನೀಡಿದ್ದಾರೆ.
ಕರ್ನಾಟಕದಲ್ಲಿ ಕಳೆದ 5 ವರ್ಷಗಳಲ್ಲಿ ₹590 ಕೋಟಿಗೂ ಅಧಿಕ ಮೊತ್ತದ ಸೈಬರ್ ವಂಚನೆ ಪ್ರಕರಣಗಳು ದಾಖಲಾಗಿವೆ. ಬೆಂಗಳೂರಿನಲ್ಲಿ ಕಳೆದ ತಿಂಗಳಲ್ಲೇ ʼಡಿಜಿಟಲ್ ಅರೆಸ್ಟ್ʼ ಹೆಸರಿನಲ್ಲಿ ನಕಲಿ ಕಾಲ್ ಸೆಂಟರ್ ಕಾರ್ಯ ನಿರ್ವಹಿಸುತ್ತಿದ್ದ ಪ್ರಕರಣ ಪತ್ತೆಯಾಗಿದ್ದು, 16 ಮಂದಿಯನ್ನು ಪೊಲೀಸರು ಬಂಧಿಸಿದ್ದರು. ರಾಜ್ಯದ ವಿವಿಧ ಜಿಲ್ಲೆಗಳಲ್ಲಿ ʼಟ್ರಂಪ್ ಆ್ಯಪ್ʼ, ʼವರ್ಕ್ ಫ್ರಂ ಹೋಮ್ʼ ಮತ್ತು ʼಇನ್ವೆಸ್ಟ್ಮೆಂಟ್ ಟಾಸ್ಕ್ʼ ಶೈಲಿಯ ವಂಚನೆಗಳಿಂದ ಹಣ ಕಳೆದುಕೊಳ್ಳುವವರ ಸಂಖ್ಯೆ ಹೆಚ್ಚಾಗುತ್ತಿದೆ.





