ಹುಬ್ಬಳ್ಳಿಯ ಗೋಕುಲ್ ರಸ್ತೆಯಲ್ಲಿರುವ ಸಮೃದ್ಧಿ ಕ್ರೆಡಿಟ್ ಕೋ-ಆಪರೇಟಿವ್ ಸೊಸೈಟಿ ಲಿಮಿಟೆಡ್ ಸೇಲ್ಸ್ ಹೆಡ್ ಮತ್ತು ಮ್ಯಾನೇಜರ್’ಗಳಿಗೆ ಗದಗ್ ಬೆಟಗೇರಿ ಮೂಲದ ಮಂಜುನಾಥ ಹದ್ದಣ್ಣವರ ಎಂಬಾತನು ಸೊಸೈಟಿಯ ವಿರುದ್ಧ ಸುಳ್ಳು ಆರೋಪ ಮಾಡಿ, ಬೆದರಿಸಿ RTI ಹೆಸರಿನಲ್ಲಿ 1.5 ಕೋಟಿ ರೂ ಬೇಡಿಕೆ ಇಟ್ಟಿದ್ದರು ಎಂಬ ಹಿನ್ನೆಲೆಯಲ್ಲಿ ಐವರು ಆರೋಪಿಗಳನ್ನು ಬಂಧಿಸಿದ್ದಾರೆ.
ಸಮೃದ್ಧಿ ಕೋ–ಆಪರೇಟಿವ್ ಸೊಸೈಟಿ ವತಿಯಿಂದ ನೀಡಲಾದ ದೂರು ಆಧರಿಸಿ ಪೊಲೀಸರು ಟ್ರ್ಯಾಪ್ ಹೂಡಿ, ಹಣ ಪಡೆಯುವ ವೇಳೆಯೇ ಆರೋಪಿಗಳನ್ನು ರೆಡ್ ಹ್ಯಾಂಡ್ ಆಗಿ ಬಂಧಿಸಿದ್ದಾರೆ. ಹಣಕ್ಕೆ ಬೇಡಿಕೆ ಇಟ್ಟು, ಅಡ್ವಾನ್ಸ್ ಹಣ ಪಡೆಯುತ್ತಿದ್ದ ವೇಳೆ ಆರೋಪಿಗಳು ಪೊಲೀಸರ ಬಲೆಗೆ ಸಿಕ್ಕಿಬಿದ್ದಿದ್ದಾರೆ. ಆರೋಪಿಗಳು ವಿವಿಧ ಸಂಘಟನೆಗಳ ಹೆಸರಿನಲ್ಲಿ ತಮ್ಮ ಪ್ರಭಾವವನ್ನು ತೋರಿಸಿಕೊಂಡು, “ನಿಮ್ಮ ಬ್ಯಾಂಕ್ನಲ್ಲಿ ಅವ್ಯವಹಾರ ನಡೆದಿದೆ, ಮಾಧ್ಯಮದಲ್ಲಿ ನಿಮ್ಮ ಬಗ್ಗೆ ಕೆಟ್ಟ ಪ್ರಚಾರ ಮಾಡುತ್ತೇವೆ, ನಮಗೆ ದೊಡ್ಡ ವ್ಯಕ್ತಿಗಳು ಗೊತ್ತಿದ್ದಾರೆ” ಎಂದು ಬೆದರಿಕೆ ಹಾಕಿ ಹಣಕ್ಕೆ ಬೇಡಿಕೆ ಇಟ್ಟಿದ್ದಾರೆ ಎನ್ನಲಾಗಿದೆ.
ಪ್ರಕರಣಕ್ಕೆ ಸಂಬಂಧಪಟ್ಟಂತೆ ಪ್ರಮುಖ ಆರೋಪಿ ಮಂಜುನಾಥ್ ಹದ್ದಣ್ಣವರ್ ಸೇರಿದಂತೆ ಮುಂಡಗೋಡ ಮೂಲದ ವೀರೇಶ್ ಕುಮಾರ್ ಲಿಂಗದಾಳ, ಮಹದೇಶ್ವರ ಲಿಂಗದಾಳ, ಮಹಾಬಲೇಶ್ವರ ಶಿರೂರ್, ಶಿವಪ್ಪ ಬೊಮ್ಮನಹಳ್ಳಿ ಒಟ್ಟು ಐವರು ಆರೋಪಿಗಳನ್ನು ಬಂದಿಸಿದ್ದು, ಬಂಧಿತರಿಂದ 1.70 ಲಕ್ಷ ರೂಗಳನ್ನು ವಶಪಡಿಸಿಕೊಂಡಿದ್ದಾರೆ. ಮತ್ತು ಆರೋಪಿಗಳನ್ನು ನ್ಯಾಯಾಲಯಕ್ಕೆ ಹಾಜರಪಡಿಸಲಾಗಿರುತ್ತದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ. ಈ ಮೊದಲು ಹುಬ್ಬಳ್ಳಿಯ ಉಪನಗರ ಪೊಲೀಸ್ ಠಾಣೆಯಲ್ಲಿಯೂ ಇದೇ ರೀತಿಯ ಪ್ರಕರಣ ದಾಖಲಾಗಿತ್ತು. ಇದೀಗ ಮತ್ತೆ ಬ್ಲಾಕ್ಮೇಲ್ ಯತ್ನ ನಡೆಸುತ್ತಿದ್ದ ಹಿನ್ನೆಲೆಯಲ್ಲಿ ಬ್ಯಾಂಕ್ ಸಿಬ್ಬಂದಿ ಸಾಕ್ಷಿ ಸಮೇತ ಪೊಲೀಸರಿಗೆ ದೂರು ನೀಡಿದ್ದರು.
ಇದನ್ನೂ ಓದಿ ಹುಬ್ಬಳ್ಳಿ | ರಕ್ತದ ಮಡುವಿನಲ್ಲಿ ವೃದ್ಧೆಯ ಶವ ಪತ್ತೆ; ಮಗನಿಂದ ಕೊಲೆಯಾಗಿರುವ ಶಂಕೆ
ಈ ಕುರಿತು ಗೋಕುಲ್ ರೋಡ್ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಕಮಿಷನರ್ ಎನ್. ಶಶಿಕುಮಾರ ಅವರು ಮಾತನಾಡಿ – “ಆರೋಪಿಗಳು ಬೇರೆ ಬೇರೆ ಸಂಘಟನೆಗಳ ಹೆಸರಿನಲ್ಲಿ ಸುಲಿಗೆ ಮಾಡಲು ಪ್ರಯತ್ನಿಸುತ್ತಿದ್ದರು. ಸಾಕ್ಷ್ಯಾಧಾರಗಳ ಮೇರೆಗೆ ರೆಡ್ ಹ್ಯಾಂಡ್ ಆಗಿ ಬಂಧಿಸಿ ಕಾನೂನು ಕ್ರಮ ಕೈಗೊಳ್ಳಲಾಗಿದೆ” ಎಂದು ಹೇಳಿದರು.





