ವಾಣಿಜ್ಯ ನಗರಿ ಹುಬ್ಬಳ್ಳಿಯು ಮೇಲ್ನೋಟಕ್ಕೆ ಬಹಳ ಸುಂದರವಾಗಿಯೇ ಕಾಣುತ್ತದೆ. ಆದರೆ ನಗರದ ಒಳಭಾಗಕ್ಕೆ ಇಣುಕಿದಾಗ ಅನೇಕ ಸಮಸ್ಯೆಗಳು ಹುಬ್ಬಳ್ಳಿಯನ್ನು ಕಾಡುತ್ತಿವೆ ಎಂಬುದು ಸ್ಪಷ್ಟವಾಗುತ್ತದೆ. ಸಾರ್ವಜನಿಕರ ಉಪಯೋಗಕ್ಕಾಗಿ ಸುಮಾರು 10 ಕೋಟಿ ಹಣ ಖರ್ಚು ಮಾಡಿ ಅಭಿವೃದ್ಧಿ ಮಾಡಿರುವ ಕೆಂಪಕೆರೆ ಉದ್ಯಾನವನದ ಕಾಮಗಾರಿಯು ನೆನೆಗುದಿಗೆ ಬಿದ್ದಿದೆ. ಕಳೆದ ನಾಲ್ಕೈದು ವರ್ಷಗಳಿಂದ ಕಾಮಗಾರಿ ಸ್ಥಗಿತಗೊಂಡಿದ್ದು, ಜನರಿಗೆ ಉಪಯೋಗವಾಗದೆ ಹಾಳುಬಿದ್ದಿದೆ. ಕಾಮಗಾರಿ ಪೂರ್ಣಗೊಂಡು ಉದ್ಘಾಟನೆ ಆಗಬೇಕಿದ್ದ ಗಾರ್ಡನ್, ನಿರ್ವಹಣೆಯ ಕೊರತೆಯಿಂದಾಗಿ ಬಹುತೇಕ ಸೊರಗಿದ್ದು, ಸ್ಥಳೀಯರ ಆಕ್ರೋಶಕ್ಕೆ ಕಾರಣವಾಗಿದೆ.
ಹುಬ್ಬಳ್ಳಿ–ಧಾರವಾಡ ಪೂರ್ವ ವಿಧಾನಸಭಾ ಕ್ಷೇತ್ರ ವ್ಯಾಪ್ತಿಯ ವಾರ್ಡ್ ಸಂಖ್ಯೆ 73ರ ವ್ಯಾಪ್ತಿಗೆ ಬರುವ ಈ ಕೆರೆಯು, ನಗರದಿಂದ ಮುಂದುವರೆದು ಕಾರವಾರ ರಸ್ತೆಯ ಎಡಭಾಗಕ್ಕೆ ಹೊಂದಿಕೊಂಡಂತಿದೆ. ಮೊದಲ ಹಂತದಲ್ಲಿ ಕೆರೆಯ ಹೂಳೆತ್ತಲಾಗಿದ್ದು, ನಂತರದಲ್ಲಿ ಕೆರೆಯ ಸುತ್ತಲೂ ಬೃಹತ್ ತಡೆಗೋಡೆ, ಸುಂದರವಾದ ಉದ್ಯಾನವನ ನಿರ್ಮಿಸಿ ಅಭಿವೃದ್ಧಿ ಮಾಡಿದ್ದಾರೆ. ಸಾರ್ವಜನಿಕರು, ಪ್ರವಾಸಿಗರಿಗಾಗಿ ಎರಡು ದೊಡ್ಡ ವೀಕ್ಷಣಾ ಬುರುಜು ಮತ್ತು ಒಂದು ಉದ್ದನೆಯ ವೀಕ್ಷಣಾ ಗೋಪುರ ನಿರ್ಮಿಸಲಾಗಿದೆ. ವಿಶ್ರಾಂತಿಗಾಗಿ ಆಸನಗಳು, ವಾಹನ ನಿಲುಗಡೆಗೆ (ಪಾರ್ಕಿಂಗ್) ವ್ಯವಸ್ಥೆಯನ್ನು ಮಾಡಲಾಗಿದೆ. ಬೃಹತ್ ಪ್ರವೇಶದ್ವಾರವು ಪ್ರವಾಸಿಗರನ್ನು ಕೈಬೀಸಿ ಕರೆಯುವಂತಿದೆ. ಇಷ್ಟೆಲ್ಲಾ ಸುಸಜ್ಜಿತ ವ್ಯವಸ್ಥೆಗಳಿಂದ ಅಭಿವೃದ್ಧಿಯಾಗಿರುವ ಉದ್ಯಾನವು ಯಾವ ಪ್ರಯೋಜನಕ್ಕೂ ಬಾರದೆ, ಕನಿಷ್ಠಪಕ್ಷ ವಾಯು ವಿಹಾರಿಗಳಿಗೂ ಉಪಯೋಗವಾಗದೆ, ಪಾದಚಾರಿ ಮಾರ್ಗವು ಕಸದ ತಿಪ್ಪೆಯಂತೆ ಎದ್ದು ಕಾಣುತ್ತಿದೆ. ಒಟ್ಟಾರೆ ಕೆರೆಯನ್ನು ಜಲಕಳೆಯೇ ಆವರಿಸಿಕೊಂಡಿದೆ.



ಇಡೀ ಉದ್ಯಾನವನದ ಸುತ್ತಲಿನ ಪ್ರದೇಶವೆಲ್ಲ ಕಸ ಕಡ್ಡಿ ಬಿದ್ದು, ಮುಳ್ಳುಕಂಟಿಗಳು ಬೆಳೆದಿವೆ. ಹಚ್ಚ ಹಸಿರಿನಿಂದ ಕಾಣಬೇಕಿದ್ದ ಆಲಂಕಾರಿಕ ಗಿಡಗಳು ನೀರಿಲ್ಲದೆ ಸೊರಗಿವೆ. ಕೆರೆ ಸುತ್ತಲೂ ಬೆಳಕಿಗಾಗಿ ಅಳವಡಿಸಿರುವ ವಿದ್ಯುತ್ ಲೈಟ್ಗಳು ಹಾಳಾಗುತ್ತಿವೆ. ಮಕ್ಕಳ ಆಟಿಕೆಗಳು ಇನ್ನೇನು ಪೂರ್ತಿಯಾಗಿ ಹಾಳಾಗುವ ಸ್ಥಿತಿಯಲ್ಲಿವೆ. ಸಾಲದೆಂಬಂತೆ ನಗರದ ವಿವಿಧ ಬಡಾವಣೆಗಳ ಕೊಳಚೆ ನೀರು ಕೂಡ ಇಲ್ಲಿಗೆ ಬಂದು ಶೇಖರಣೆಗೊಳ್ಳುತ್ತಿದ್ದು, ಕೆರೆಯ ನೀರು ಬಹುತೇಕ ಕಲುಷಿತಗೊಂಡಿದೆ. ವಾಹನ ನಿಲುಗಡೆಯ ಪ್ರದೇಶ ಮತ್ತು ಪಾದಚಾರಿ ಮಾರ್ಗಗಳಲ್ಲಿ ಎಲ್ಲೆಂದರಲ್ಲಿ ಮದ್ಯದ ಬಾಟಲಿಗಳು ಕಾಣಸಿಗುತ್ತವೆ. ಇದು ಕುಡುಕರಿಗೆ ಹೇಳಿ ಮಾಡಿಸಿದ ಜಾಗವಾಗಿದೆ ಎಂದು ಸ್ಥಳೀಯರು ಆರೋಪಿಸುತ್ತಿದ್ದಾರೆ.
“ಕಳೆದ ನಾಲ್ಕೈದು ವರ್ಷಗಳಿಂದ ಈ ಉದ್ಯಾನವನ್ನು ನೋಡುತ್ತಿದ್ದೇವೆ. ಅಂದಿನಿಂದಲೂ ಗಾರ್ಡನ್ನಿನ ಮುಖ್ಯ ದ್ವಾರಕ್ಕೆ ಹಾಕಿರುವ ಬೀಗ ಹಾಗೆಯೇ ಇದೆ. ಮಹಾನಗರ ಪಾಲಿಕೆಯ ನಿರ್ಲಕ್ಷ್ಯದಿಂದಾಗಿ ಕಾಮಗಾರಿಯೂ ನೆನೆಗುದಿಗೆ ಬಿದ್ದಿದೆ. ಸ್ಥಳೀಯ ಕಾರ್ಪೊರೇಟರ್ ಆಗಲಿ ಅಥವಾ ಸಂಬಂಧಪಟ್ಟ ಅಧಿಕಾರಿಗಳಾಗಲಿ ಈ ಕುರಿತು ಮುತುವರ್ಜಿವಹಿಸಿ ಉದ್ಘಾಟನೆ ಅಥವಾ ಸಾರ್ವಜನಿಕರ ವಾಯು ವಿಹಾರಕ್ಕಾದರೂ ಅನುಕೂಲ ಮಾಡಿಕೊಡಬೇಕು. ಜನರ ದುಡ್ಡಿನಿಂದ ಅಭಿವೃದ್ಧಿ ಹೊಂದಿದ ಈ ಉದ್ಯಾನವು ಜನರಿಗೆ ಉಪಯೋಗವಾಗಬೇಕು. ಹೀಗೇಯೆ ಹಾಳು ಮಾಡುತ್ತಾ ಹೋದರೆ ಏನು ಸಿಗುತ್ತದೆ?” ಎಂದರು ಸ್ಥಳೀಯರೊಬ್ಬರು.

ಈ ಕುರಿತು ಈದಿನ.ಕಾಂ ಜೊತೆಗೆ ಹುಬ್ಬಳ್ಳಿ ಧಾರವಾಡ ಮಹಾನಗರ ಪಾಲಿಕೆ ಸದಸ್ಯೆ ಶೀಲಾ ಮಂಜುನಾಥ ಕಾಟಕರ್ ಮಾತನಾಡಿ, “ಕೆಂಪಕೆರೆ ಉದ್ಯಾನವನ್ನು ಅಭಿವೃದ್ಧಿ ಮಾಡಬೇಕು ಎಂದು ಈಗಾಗಲೇ ಮೇಯರ್ ಜೊತೆಗೆ ಮಾತನಾಡಲಾಗಿದ್ದು, ಶೀಘ್ರದಲ್ಲಿ ಇಂಪ್ರೂಮೆಂಟ್ ಮಾಡುತ್ತೇವೆ” ಎಂದರು.
ಈಗಾಗಲೇ ಉದ್ಯಾನವನ್ನು ಉದ್ಘಾಟಿಸಿ, ನಿರ್ವಹಣೆಗೆ ಟೆಂಡರ್ ಕರೆಯುವವರೆಗೆ ಪಾಲಿಕೆಯೇ ನಿರ್ವಹಿಸಬೇಕು ಎಂದು ಸ್ಥಳೀಯ ಶಾಸಕರು ಸೂಚಿಸಿದ್ದಾರೆ.
ಈ ಕೆಂಪಕೆರೆ ಉದ್ಯಾನವನ್ನು ಪ್ರವಾಸೋದ್ಯಮ ಇಲಾಖೆಯ ₹5 ಕೋಟಿ, ಹುಬ್ಬಳ್ಳಿ–ಧಾರವಾಡ ಮಹಾನಗರ ಪಾಲಿಕೆಯ ₹1.50 ಕೋಟಿ ಮತ್ತು ಹುಬ್ಬಳ್ಳಿ ಧಾರವಾಡ ನಗರಾಭಿವೃದ್ಧಿ ಪ್ರಾಧಿಕಾರದ ₹3.50 ಕೋಟಿ ಅನುದಾನದಲ್ಲಿ ಅಭಿವೃದ್ಧಿಗೆ ಯೋಜಿಸಲಾಗಿದೆ.
ಇದನ್ನೂ ಓದಿ: ಧಾರವಾಡ | ಅ. 27ಕ್ಕೆ ಪರಿಸರ ಸಮೂಹ ಗೀತೆ, ನಿಬಂಧ, ಚಿತ್ರಕಲಾ ಸ್ಪರ್ಧೆ

ಕೆಂಪಕೆರೆ ಉದ್ಯಾನವನವು ಜನರ ವಿಶ್ರಾಂತಿಗಾಗಿ ರೂಪುಗೊಂಡಿದ್ದರೂ, ಇಂದು ನಿರ್ಲಕ್ಷ್ಯ ಮತ್ತು ನಿರ್ವಹಣೆಯ ಕೊರತೆಯಿಂದ ಹಾಳಾಗುತ್ತಿದೆ. ಹಲವು ಕೋಟಿ ರೂಪಾಯಿ ತೆರಿಗೆದಾರರ ಹಣ ವ್ಯರ್ಥವಾಗಿ ಹಾಳು ಬಿದ್ದಂತಾಗಿದೆ. ಒಂದು ಕಾಲದಲ್ಲಿ ಆಕರ್ಷಕವಾಗಿ ಕಾಣುತ್ತಿದ್ದ ಕೆರೆ ಹಾಗೂ ಅದರ ಸುತ್ತಲಿನ ಹಸಿರು ಪ್ರದೇಶ ಈಗ ಕಸದ ತಿಪ್ಪೆಯಾಗಿ, ದುರ್ವಾಸನೆಯ ಕೇಂದ್ರವಾಗಿ ಮಾರ್ಪಟ್ಟಿದೆ. ಸಾರ್ವಜನಿಕರ ಹಕ್ಕಿನ ಸೌಲಭ್ಯಗಳು ಅಧಿಕಾರಿಗಳ ನಿರ್ಲಕ್ಷ್ಯಕ್ಕೆ ಬಲಿಯಾದಂತಾಗಿದೆ. ಸ್ಥಳೀಯರ ಅಸಮಾಧಾನ ಹೆಚ್ಚುತ್ತಿದ್ದು, ಶೀಘ್ರ ಕ್ರಮ ಕೈಗೊಳ್ಳದಿದ್ದರೆ ಪರಿಸರ ಹಾನಿಯೂ ಅನಿವಾರ್ಯ. ಅಭಿವೃದ್ಧಿಗೆ ಖರ್ಚಾದ ಹಣದ ಉದ್ದೇಶ ಸಾರ್ಥಕವಾಗಬೇಕಾದರೆ, ಪಾಲಿಕೆ ಮತ್ತು ಪ್ರವಾಸೋದ್ಯಮ ಇಲಾಖೆ ಸಮನ್ವಯದಿಂದ ಶಾಶ್ವತ ನಿರ್ವಹಣಾ ಯೋಜನೆ ರೂಪಿಸಬೇಕು. ಉದ್ಘಾಟನೆಗೂ ಮುನ್ನ ಸೌಕರ್ಯಗಳ ದುರಸ್ತಿ ಮತ್ತು ಶುದ್ಧೀಕರಣ ನಡೆಯಬೇಕಾಗಿದೆ. ನಾಗರಿಕರು ಸಹ ಬದ್ಧವಾಗಿ ಈ ಆಸ್ತಿಯ ಸಂರಕ್ಷಣೆಗೆ ಮುಂದಾಗಬೇಕಿದೆ. ಕೆಂಪಕೆರೆ ಪುನರುಜ್ಜೀವನಗೊಂಡು ನಿಜವಾದ ʼನಗರದ ಉಸಿರು ತಾಣʼ ಆಗಿ ರೂಪಾಂತರಗೊಳ್ಳುವ ದಿನವನ್ನು ಜನತೆ ಕಾತರದಿಂದ ಕಾಯುತ್ತಿದ್ದಾರೆ.





