ಅವಳಿ ನಗರದಲ್ಲಿ ಅನುಮತಿ ಪಡೆಯದೆ ನಡೆಸುತ್ತಿರುವ ಆ್ಯಪ್ ಕಾರ್ಯಾಚರಣೆ ಆಧಾರಿತ ಆಟೊ, ಟ್ಯಾಕ್ಸಿ, ಬೈಕ್ಗಳ ವಿರುದ್ಧ ಕ್ರಮಕೈಗೊಳ್ಳಬೇಕು ಎಂದು ಒತ್ತಾಯಿಸಿ ಉತ್ತರ ಕರ್ನಾಟಕ ಆಟೋ ರಿಕ್ಷಾ ಚಾಲಕರ ಸಂಘದಿಂದ ಸೋಮವಾರ ಗಬ್ಬೂರು ಆರ್ಟಿಒ ಕಚೇರಿಗೆ ಮುಂದೆ ಪ್ರತಿಭಟನೆ ನಡೆಸಿದರು.
ಈ ಬಗ್ಗೆ ಸಂಘದ ಅಧ್ಯಕ್ಷ ಶೇಖರಯ್ಯ ಮಠಪತಿ ಮಾತನಾಡಿ, ಈಗಾಗಲೇ ಶಕ್ತಿ ಯೋಜನೆ, ಇಂಧನ ಬೆಲೆ ಏರಿಕೆ ಮತ್ತಿತರ ಕಾರಣಗಳಿಂದಾಗಿ ಜೀವನ ನಿರ್ವಹಣೆ ಕಷ್ಟವಾಗಿದೆ. ಮಕ್ಕಳ ಶಾಲೆ ಶುಲ್ಕ ಭರಿಸಲಾಗುತ್ತಿಲ್ಲ. ಸಾಲದ ಕಂತು ತುಂಬಲಾಗುತ್ತಿಲ್ಲ. ಇಂಥ ಸಂದರ್ಭಗಳಲ್ಲಿ ಓಲಾ, ಉಬರ್, ರಾಪಿಡೊ, ನಮ್ಮ ಯಾತ್ರಿ ಮುಂತಾದ ಆ್ಯಪ್ಗಳ ಮೂಲಕ ಕೆಲವರು ಅನಧಿಕೃತವಾಗಿ ಕಾರ್ಯಾಚರಣೆ ನಡೆಸುತ್ತಿದ್ದಾರೆ. ಕಾನೂನು ಪ್ರಕಾರ ಅವಕಾಶ ಇದ್ದರೆ ಆ್ಯಪ್ ಆಧಾರಿತ ಸೇವೆಗಳಿಗೆ ಅಧಿಕಾರಿಗಳು ಅನುಮತಿ ನೀಡಲಿ. ಅವಳಿ ನಗರದಲ್ಲಿ 20 ಸಾವಿರಕ್ಕೂ ಹೆಚ್ಚು ಆಟೋಗಳು ಕಾರ್ಯಾಚರಣೆ ನಡೆಸುತ್ತಿವೆ ಎಂದರು.
ಮನವಿ ಸ್ವೀಕರಿಸಿದ ಆರ್ಟಿಓ ಶ್ರೀಕಾಂತ ಬಡಿಗೇರ, ಪರಿಶೀಲಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದರು.





