ನಮ್ಮ ದೇಶದ ಸಂವಿಧಾನ ಕೇವಲ ಜಾತಿ, ಧರ್ಮಕ್ಕೆ ಮಾತ್ರ ಸೀಮಿತವಾಗಿಲ್ಲ. ಅದು ಸರ್ವರ ಏಳಿಗೆಗೆ ರಚಿಸಿದ ಪ್ರತಿ ಭಾರತೀಯನ ಘನತೆ ಎಂದು ಶಾಸಕ ವಿಜಯಾನಂದ ಕಾಶಪ್ಪನವರ್ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಹುನಗುಂದ ತಾಲ್ಲೂಕು ಆಡಳಿತ, ತಾಲ್ಲೂಕು ಪಂಚಾಯಿತಿ, ಪುರಸಭೆ ಹಾಗೂ ಸಮಾಜ ಕಲ್ಯಾಣ ಇಲಾಖೆ ಸಹಯೋಗದಲ್ಲಿ ಪಟ್ಟಣದ ಗುರುಭವನದಲ್ಲಿ ನಡೆದ ಸಂವಿಧಾನ ದಿನಾಚರಣೆ ಕಾರ್ಯಕ್ರಮ ಉದ್ಘಾಟಿಸಿ ಅವರು ಮಾತನಾಡಿದರು.
“ದೇಶವನ್ನು ಒಡೆದು ಆಳಬೇಕು ಎನ್ನುವುದು ಮನುವಾದಿಗಳ ಉದ್ದೇಶ. ಹೀಗಾಗಿ ಅವರು ಸಂವಿಧಾನ ತಿರಸ್ಕರಿಸುವ ಹಾಗೂ ಸಂವಿಧಾನದ ಪ್ರತಿಗಳನ್ನು ಸುಟ್ಟುಹಾಕುವ ಕಾರ್ಯಕ್ಕೆ ಮುಂದಾಗುತ್ತಿದ್ದಾರೆ. ಶಾಲಾ, ಕಾಲೇಜುಗಳಲ್ಲಿ ವಿದ್ಯಾರ್ಥಿಗಳಿಗೆ ಸಂವಿಧಾನದ ಪೀಠಿಕೆ ಮತ್ತು ವಿಚಾರಗಳನ್ನು ತಿಳಿಸುವ ಕಾರ್ಯ ಆಗಬೇಕು. ಹೀಗಾಗಿ ಕ್ಷೇತ್ರ ಶಿಕ್ಷಣಾಧಿಕಾರಿಗಳು ಕೂಡಲೇ ಸುತ್ತೋಲೆ ಹೊರಡಿಸಬೇಕು” ಎಂದು ಸೂಚಿಸಿದರು.
ಇದನ್ನೂ ಓದಿ: ಬಾಗಲಕೋಟೆ | ಕಬ್ಬು ಬೆಳೆಗಾರ ಜೊತೆಗಿನ ಸಂಧಾನ ಯಶಸ್ವಿ, ಪ್ರತಿ ಟನ್ ಕಬ್ಬಿಗೆ 3,300 ರೂ. ನಿಗದಿ
ಸತ್ಯಶೋಧಕ ಸಂಘದ ರಾಜ್ಯ ಘಟಕದ ಅಧ್ಯಕ್ಷ ಪರಶುರಾಮ ಮಹಾರಾಜನವರ ಮಾತನಾಡಿದರು. ತಹಶೀಲ್ದಾರ್ ಪ್ರದೀಪಕುಮಾರ ಹಿರೇಮಠ ಅವರು ಸಂವಿಧಾನದ ಪೀಠಿಕೆ ಓದಿದರು.
ಗ್ಯಾರಂಟಿ ಅನುಷ್ಠಾನ ಸಮಿತಿ ತಾಲೂಕು ಘಟಕದ ಅಧ್ಯಕ್ಷ ಮುತ್ತಣ್ಣ ಕಲಗೋಡಿ, ಕ್ಷೇತ್ರ ಶಿಕ್ಷಣಾಧಿಕಾರಿ ಜಾಸ್ಮಿನ್ ಕಿಲ್ಲೆದಾರ, ನಿವೃತ್ತ ಉಪನ್ಯಾಸ ಸಿದ್ದಲಿಂಗಪ್ಪ ಬೀಳಗಿ, ಸಮಾಜ ಕಲ್ಯಾಣ ಇಲಾಖೆ ಸಹಾಯಕ ನಿರ್ದೇಶಕ ಎಂ ಎಚ್ ಕಟ್ಟಿಮನಿ, ಮುಖಂಡರಾದ ಬಸವರಾಜ ಮಸ್ಕಿ, ಬಸವರಾಜ ಧನ್ನೂರು, ರಾಜು ಈಟಿ, ರವಿಮಸ್ತಿ ಹಾಗೂ ಇತರರು ಇದ್ದರು.





