ಮೈಸೂರು ಜಿಲ್ಲೆ, ಹುಣಸೂರು ತಾಲ್ಲೂಕು ಕಟ್ಟೆಮಳಲವಾಡಿ ಮಾರುಕಟ್ಟೆಯಲ್ಲಿ ತಂಬಾಕು ಬೆಳೆಗಾರರ ಸಭೆ ನಡೆದು, ಉತ್ತಮ ಬೆಲೆ ನೀಡುವಂತೆ, ಸಂಬಂಧಪಟ್ಟವರ ಭೇಟಿಗೆ ನಿಯೋಗದ ಅನುವ ಮಾಡುವಂತೆ ಕರ್ನಾಟಕ ರಾಜ್ಯ ರೈತ ಸಂಘದ ಮುಖಂಡರು ಆಗ್ರಹಿಸಿದ್ದಾರೆ.
ಕಳೆದ ತಿಂಗಳು ಪಿರಿಯಾಪಟ್ಟಣದ ಕಗ್ಗುಂಡಿ ತಂಬಾಕು ಹರಾಜು ಮಾರುಕಟ್ಟೆಯಲ್ಲಿ, ತಂಬಾಕು ಬೆಳೆಗಾರರ ಸಮಸ್ಯೆಗಳ ಬಗ್ಗೆ, ಕರ್ನಾಟಕದ ತಂಬಾಕಿಗೆ ಉತ್ತಮವಾದ ಬೆಲೆ ಸಿಗದ ಕಾರಣ ರಾಜ್ಯ ಮತ್ತು ಕೇಂದ್ರ ಸರ್ಕಾರಕ್ಕೆ ಮನವರಿಕೆ ಮಾಡಲು ಮೈಸೂರು ಮತ್ತು ಕೊಡಗು ಜಿಲ್ಲೆಯ ಸಂಸತ್ ಸದಸ್ಯ ಯದುವೀರ್ ಕೃಷ್ಣರಾಜ ಒಡೆಯರ್, ತಂಬಾಕು ಮಂಡಳಿಯ ನಿರ್ದೇಶಕ ಶ್ರೀನಿವಾಸ್, ಮಂಡಳಿಯ ಅಧಿಕಾರಿಗಳು ಹಾಗೂ ರೈತ ಸಂಘದ ರಾಜ್ಯಾಧ್ಯಕ್ಷರಾದ ಬಡಗಲಪುರ ನಾಗೇಂದ್ರ ಸೇರಿದಂತೆ ಎಲ್ಲಾ ಪ್ಲಾಟ್ ಫಾರಂನ ರೈತ ಮುಖಂಡರುಗಳು ಭಾಗವಹಿಸಿ ಚರ್ಚಿಸಿ, ಮುಂದಿನ ದಿನಗಳಲ್ಲಿ ಉತ್ತಮ ಬೆಲೆ ಕೊಡುವುದಾಗಿ ಭರವಸೆ ನೀಡಿದ್ದರು.
ಆದರೆ, ಇದುವರೆಗೆ ಉತ್ತಮ ಬೆಲೆ ಸಿಗದ ಕಾರಣ ಎಲ್ಲಾ ಪ್ಲಾಟ್ ಫಾರಂನ ಮುಖಂಡರುಗಳು ಹಾಗೂ ನೂತನ ಕ್ರಾಪ್ ಸದಸ್ಯರುಗಳು ಸೇರಿ ಚರ್ಚಿಸಿ ತಂಬಾಕಿಗೆ, ಉತ್ತಮ ಬೆಲೆ ಸಿಗಲು ಹೋರಾಟವನ್ನು ರೂಪಿಸಲು ನಿರ್ಣಯ ಕೈಗೊಳ್ಳಲಾಯಿತು. ಈ ನಿರ್ಣಯ ಪತ್ರವನ್ನು ಮೈಸೂರು ಪ್ರಾದೇಶಿಕ ವ್ಯವಸ್ಥಾಪಕ ವೇಣುಗೋಪಾಲ್ ಅವರ ಮೂಲಕ ನಿರ್ದೇಶಕರಿಗೆ ಹಾಗೂ ಇಡಿ ಅವರಿಗೆ ರವಾನಿಸುವಂತೆ ಮನವಿ ಪತ್ರ ಸಲ್ಲಿಸಿದರು.
ದಿನಾಂಕ-25-12-2025ರ ಒಳಗಾಗಿ ತಂಬಾಕಿಗೆ ಉತ್ತಮವಾದ ಬೆಲೆ ಸಿಗದಿದ್ದರೆ, ಅಂದು ಎಲ್ಲಾ ತಂಬಾಕು ಹರಾಜು ಮಾರುಕಟ್ಟೆ ಬಂದ್ ಮಾಡಬೇಕೆಂದು ತಾಕಿತು ಮಾಡಿದರು. ಸಮಸ್ಯೆ ಬಗೆಹರಿಸಲು ಸಂಬಂಧಪಟ್ಟ ಸಂಸದರು ಕೇಂದ್ರ ಸರ್ಕಾರದ ಗಮನಕ್ಕೆ ತಂದು ಉತ್ತಮ ಬೆಲೆ ಕೊಡಿಸಲು ಒತ್ತಡ ಹೇರಿ, ಕರ್ನಾಟಕ ತಂಬಾಕು ಬೆಳೆಗಾರರಿಗೆ ಉತ್ತಮ ಬೆಲೆ ಕೊಡಿಸಲು ಮುಂದಾಗಬೇಕೆಂದು ಸಭೆಯಲ್ಲಿ ನಿರ್ಣಯಿಸಿದರು. ಒಂದು ವೇಳೆ ಸಮಯಕ್ಕೆ ಸ್ಪಂದನೆ ಸಿಗದೆ ಹೋದಲ್ಲಿ, ತಂಬಾಕು ಬೆಳೆಗಾರರ ದಿನಾಂಕ-26-12-2025ರಂದು ಸಂಸದರ ಕಚೇರಿಗಳ ಮುಂದೆ ನ್ಯಾಯಕ್ಕಾಗಿ ಹೋರಾಟ ರೂಪಿಸುವುದಾಗಿ ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಮೈಸೂರು | ಪತ್ರ ಬರಹಗಾರರ ಪ್ರತಿಭಟನೆ; ಪ್ರತ್ಯೇಕ ಲಾಗಿನ್ ನೀಡಿ ಸಮಸ್ಯೆ ಪರಿಹರಿಸಿ
ಸಭೆಯಲ್ಲಿ ಜಿಲ್ಲಾಧ್ಯಕ್ಷ ಹೊಸೂರ್ ಕುಮಾರ್, ಉಪಾಧ್ಯಕ್ಷ ಪ್ರಕಾಶ್ ರಾಜೇ ಅರಸ್, ಮೊತ್ತ ಬಸವರಾಜು, ಮೊದೂರು ಶಿವಣ್ಣ, ಉಂಡವಾಡಿ ಚಂದ್ರೇಗೌಡ, ಕಟ್ಟೆ ಮಳಲವಾಡಿ ಅಶೋಕ, ಶ್ರೀಧರ, ತಾಲ್ಲೂಕು ಅಧ್ಯಕ್ಷ ಬೆಂಕಿಪುರ ಚಿಕ್ಕಣ್ಣ, ಮಹಾದೇವು, ಅಗ್ರಹಾರ ರಾಮೇಗೌಡ, ಸತೀಶ್, ಅತ್ತಿಕುಪ್ಪೆ ರಾಮಕೃಷ್ಣ, ಶಿರೂರು ಬಸವರಾಜೇಗೌಡ, ಪಿರಿಯಾಪಟ್ಟಣ ಚೆಲುವಯ್ಯ, ಬೀಜಗನಹಳ್ಳಿ ನಾಗರಾಜಪ್ಪ, ನಿಲುವಾಗಿಲು ಪ್ರಭಾಕರ್, ಸೋಮಶೇಖರ್, ಮಹೇಂದ್ರ, ನಿಂಗೇಗೌಡ, ಕರುಣಾಕರ ಸೇರಿದಂತೆ ಇನ್ನಿತರ ಮುಖಂಡರು ಇದ್ದರು.





