ನಮ್ಮ ಕಡಿ ಸೆರಿ ಖಳ್ಸ್ ಬ್ಯಾಡ್ರಿ, ನೀವೇನಾದ್ರೂ ಸರಾಯಿ ಬಂದ್ ಮಾಡ್ದಿರೀ ಅಂದ್ರೇ ನಮ್ಕಡೆ ಜನ ನಿಮ್ಮ ಫೋಟೊ ಇಟ್ಟು ಪೂಜೆ ಮಾಡ್ತಾರೆ. ನಿಮ್ಮ ಗೃಹಲಕ್ಷ್ಮಿಯ ಎರಡು ಸಾವಿರ ನಮ್ಗ್ ಬೇಕಾಗಿಲ್ಲ, ಸರಾಯಿ ಬಂದ್ ಮಾಡ್ರೀ, ಯಾರು ಸರಾಯಿ ಬಂದ್ ಮಾಡ್ತೀರಿ, ಅವ್ರು ಬಸವಣ್ಣ ಆದ್ಹಾಂಗ ಆಗ್ತೀರಿ….ಅಧ್ಯಕ್ಷರೇ…
ಬೆಳಗಾವಿ ಸುವರ್ಣ ಸೌಧದಲ್ಲಿ ನಡೆಯುತ್ತಿರುವ ಚಳಿಗಾಲ ಅಧಿವೇಶನದಲ್ಲಿ ಬಸವಕಲ್ಯಾಣ ಶಾಸಕ ಶರಣು ಸಲಗರ ಅವರು ಈ ಮೇಲಿನಂತೆ ಜವಾರಿ ಭಾಷೆಯಲ್ಲಿ ಉತ್ತರ ಕರ್ನಾಟಕದ ಸಮಸ್ಯೆಗಳ ಕುರಿತು ಮಾತಾಡಿ ಸದನದ ಗಮನ ಸೆಳೆದರು.
ʼನಿಮ್ಮ ಸರ್ಕಾರ ಇದೆ, ಸರಾಯಿ ಬಂದ್ ಮಾಡಲು ನಿಮಗೆ ಅವಕಾಶ ಇದೆ. ಪ್ರತಿ ಮನೆಯಲ್ಲೂ ಸರಾಯಿ ಕುಡಿದು ಸಾಯ್ತಾ ಇದ್ದಾರೆ. ಕ್ಯಾನ್ಸರ್ ಸೇರಿದಂತೆ ಇತರೆ ಕಾಯಿಲೆಗಳಿಗೆ ತುತ್ತಾಗುತ್ತಿದ್ದಾರೆ. ನಮ್ಮ ಕ್ಷೇತ್ರದ ಗ್ರಾಮಗಳಿಗೆ ಹೋದ್ರೆ ಜನ ನನಗೆ ಉಗುಳುತ್ತಿದ್ದಾರೆ. ಈ ರಾಜ್ಯದಲ್ಲಿ ಸರಾಯಿ ಬಂದ್ ಮಾಡಿದ್ರೆ ಸ್ವತಃ ನಾನೇ ನನ್ನ ಜಗಲಿ ಮೇಲೆ ಸಿಎಂ ಸಿದ್ರಾಮಯ್ಯನವರ ಫೋಟೊ ಇಟ್ಟು ಪೂಜೆ ಮಾಡ್ತೀನಿʼ ಎಂದರು.
ʼಈ ರಾಜ್ಯದಲ್ಲಿ ಸರಾಯಿ ಬಂದ್ ಮಾಡ್ಬೇಕು. ವ್ಯಸನ ಮುಕ್ತ ಉತ್ತರ ಕರ್ನಾಟಕ, ಕಲ್ಯಾಣ ಕರ್ನಾಟಕ ಮಾಡಿಕೊಡಿ. ಮನೆ-ಮನೆಗೂ ಸರಾಯಿ ತಂದು ಮಾರಾಟ ಮಾಡ್ತಾ ಇದ್ದಾರೆ. ʼಊರಾಗ ಸಣ್ಣ-ಸಣ್ಣ ಮಕ್ಕಳು ಸರಾಯಿ ಕುಡಿದು ಸಾಯ್ತಾ ಇದ್ದಾರೆʼ ಅಂತ ಹಳ್ಳಿಗಿ ಹೋದ್ರೆ ಹೆಣ್ಮಕ್ಳು ನನ್ನ ಸುತ್ತ ನಿಂತು ಶಾಪ ಹಾಕ್ತಾ ಇದ್ದಾರೆ. ಅವರ ಶಾಪ ಪಡೆದ ನಾವು ಮತ್ತೆ ಹ್ಯಾಂಗೆ ಹೋಗಿ ಓಟ್ ಕೇಳ್ಬೇಕುʼ ಎಂದರು.
ʼನಮ್ಮ ಭಾಗದಲ್ಲಿ ಹಿಂದೆಂದೂ ಕಾಣದಂತೆ ಹೆಚ್ಚಿನ ಮಳೆಯಿಂದಾಗಿ ರೈತರು ಅಪಾರ ಪ್ರಮಾಣದಲ್ಲಿ ಬೆಳೆ ಕಳೆದುಕೊಂಡು ಸಂಕಷ್ಟಕ್ಕೆ ಸಿಲುಕಿದ್ದಾರೆ. ಪ್ರವಾಹದಿಂದ ಜಮೀನಿನಲ್ಲಿನ ಫಲವತ್ತಾದ ಮಣ್ಣು ಕೊಚ್ಚಿಕೊಂಡು ಹೋಗಿದೆ. ಅತಿವೃಷ್ಟಿಯಿಂದ ಆರ್ಥಿಕ ತೊಂದರೆಗೆ ಒಳಗಾದ ರೈತ ಆತ್ಮಹತ್ಯೆಗೆ ಶರಣಾಗಬೇಕಾದ ಪರಿಸ್ಥಿತಿ ಬಂದೊದಗಿದೆʼ ಎಂದರು.
ʼರೈತರ ಪರಿಹಾರಕ್ಕೆ ಒತ್ತಾಯಿಸಿ ನನ್ನ ಕ್ಷೇತ್ರದಲ್ಲಿ ಅರೆಬೆತ್ತಲೆ ಪ್ರತಿಭಟನೆ ನಡೆಸಿ ಚಾಟಿ ಏಟು ತಿಂದು ಸರ್ಕಾರವನ್ನು ಎಚ್ಚರಿಸಿದೆ. ಆದರೆ, ರಾಜ್ಯ ಸರ್ಕಾರ ಇನ್ನೂ ರೈತರಿಗೆ ಸಮಪರ್ಕ ಪರಿಹಾರ ನೀಡಲಿಲ್ಲ. ಪಕ್ಕದ ಮಹಾರಾಷ್ಟ್ರ ಸರ್ಕಾರ ಅಲ್ಲಿನ ರೈತರಿಗೆ ಕೈತುಂಬಾ ಪರಿಹಾರ ಹಣ ನೀಡಿದೆ. ರೈತರ ಸಂಕಟಗಳಿಗೆ ಸ್ಪಂದಿಸದೆ ಈ ರೀತಿ ಅನ್ಯಾಯ ಎಸಗುವ ರಾಜ್ಯ ಸರ್ಕಾರ ಯಾಕೆ ಇರಬೇಕುʼ ಎಂದು ಪ್ರಶ್ನಿಸಿದರು.
ಇದನ್ನೂ ಓದಿ : ಔರಾದ್ ಸೀಮೆಯ ಕನ್ನಡ | ಈ ಚಳಿಗಿ ಅಂಜಿ ಮಂದಿ ಮನ್ಯಾಗಿಂದ್ ಹೊರಗ ಬರಲಾಕ್ ಅಂಜ್ಲಾತರ್!
ʼನಮ್ಮ ಭಾಗದಲ್ಲಿ ಗಾಂಜಾ, ಅಫೀಮಾ ಸೇರಿದಂತೆ ಇತರೆ ವ್ಯಸನಗಳಿಗೆ ಬಲಿಯಾಗಿ ಅಪ್ರಾಪ್ತ ವಯಸ್ಸಿನ ಮಕ್ಕಳು ಸಾವಿಗೀಡಾಗುತ್ತಿದ್ದಾರೆ. ಬೆಂಗಳೂರು, ಮೈಸೂರು, ಮಂಗಳೂರು ಭಾಗದಲ್ಲಿ ಪ್ರತಿಯೊಬ್ಬ ಬೈಕ್ ಸವಾರರು ಹೆಲ್ಮೆಟ್ ಧರಿಸಿ ಓಡಾಡುತ್ತಾರೆ. ಆದರೆ, ನಮ್ಮ ಭಾಗದಲ್ಲಿ ಹೆಲ್ಮೆಟ್ ಧರಿಸಿದವರ ಫೋಟೊ ತೆಗೆಯೋಣ ಅಂದ್ರೂ ಒಬ್ಬರೂ ಸಿಗಲ್ಲ. ಹೀಗಾಗಿ ಅನೇಕ ಅಪಘಾತ ಸಂಭವಿಸಿ ಯುವಕರು ಸಾವನ್ನಪ್ಪುತ್ತಿದ್ದಾರೆʼ ಎಂದು ತಿಳಿಸಿದರು.
ʼಹೆಲ್ಮೆಟ್ ಹಾಕಿಲ್ಲ ಅಂದ್ರೂ ಯಾರೂ ಕೇಳೋರಿಲ್ಲ. ನನ್ನ ಜಿಲ್ಲೆಯ ಎಸ್ಪಿ, ಡಿಸಿ ಅವರಿಗೆ ಆದೇಶ ಹೊರಡಿಸಿ ಹೆಲ್ಮೆಟ್ ಧರಿಸುವುದು ಕಡ್ಡಾಯ ಮಾಡಬೇಕುʼ ಎಂದು ಶಾಸಕ ಸಲಗರ ಅವರು ಗೃಹಮಂತ್ರಿ ಜಿ.ಪರಮೇಶ್ವರ ಅವರನ್ನು ಕೋರಿದರು.





