ರಿಫಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಉಡುಪಿ ಘಟಕದ ವತಿಯಿಂದ ಇಪ್ತಾರ್ ಗೆಟ್ ಟುಗೆದರ್ ಕಾರ್ಯಕ್ರಮವು ಉಡುಪಿಯ ಮದರ್ ಆಫ್ ಸಾರೋಸ್ ಚರ್ಚ್ ನ ಡಾನ್ ಬಾಸ್ಕೋ ಸಭಾಂಗಣದಲ್ಲಿ ನಡೆಯಿತು.
ಮುಖ್ಯ ಅತಿಥಿಯಾಗಿ ಆಗಮಿಸಿ ಮಾತನಾಡಿದ ಮಲ್ಪೆ ಅಬೂಬಕ್ಕರ್ ಮಸೀದಿಯ ಗುರುಗಳಾದ ಮೌಲಾನ ಇಮ್ರಾನುಲ್ಲಾ ಖಾನ್ ಮನ್ಸೂರಿ, ಇಸ್ಲಾಮಿನಲ್ಲಿ ವ್ಯಾಪಾರಕ್ಕೆ ಅತ್ಯಂತ ಮಹತ್ವದ ಸ್ಥಾನವಿದೆ. ಇಸ್ಲಾಂ ಧರ್ಮವು ಸತ್ಯನಿಷ್ಠ, ನೈತಿಕ ಮತ್ತು ಪ್ರಾಮಾಣಿಕ ವ್ಯಾಪಾರವನ್ನು ಉತ್ತೇಜಿಸುತ್ತದೆ ಎಂದು ಹೇಳಿದರು.

ಮುಂದುವರೆದು ಮಾತನಾಡಿದ ಅವರು, ಪ್ರವಾದಿ ಮುಹಮ್ಮದ್ (ಸ) ಅವರು ಸ್ವತಃ ವ್ಯಾಪಾರಿಯಾಗಿದ್ದು, ತಮ್ಮ ಜೀವನದಲ್ಲಿ ಪ್ರಾಮಾಣಿಕತೆ ಮತ್ತು ನಂಬಿಕೆಯನ್ನು ಆದರ್ಶವಾಗಿ ತೋರಿಸಿದರು.
ವ್ಯಾಪಾರದಲ್ಲಿ ಮೋಸ, ತೂಕ-ಅಳತೆಯಲ್ಲಿ ಕಪಟ, ಸುಳ್ಳು ಪ್ರಮಾಣಿಕೆ ಮತ್ತು ಅಕ್ರಮ ಲಾಭ ಇಸ್ಲಾಂನಲ್ಲಿ ಕಠಿಣವಾಗಿ ನಿಷೇಧಿಸಲಾಗಿದೆ ಎಂದು ಹೇಳಿದರು.
ಇಸ್ಲಾಮಿನ ದೃಷ್ಟಿಯಲ್ಲಿ ವ್ಯಾಪಾರವು ಕೇವಲ ಲಾಭ ಗಳಿಸುವ ಸಾಧನವಲ್ಲ, ಅದು ಸಮಾಜದಲ್ಲಿ ನ್ಯಾಯ, ಸಮಾನತೆ ಮತ್ತು ಪರಸ್ಪರ ವಿಶ್ವಾಸವನ್ನು ಬೆಳೆಸುವ ಮಾರ್ಗವಾಗಿದೆ. ವ್ಯಾಪಾರಿಗಳು ಸಮಾಜದ ಆರ್ಥಿಕ ವ್ಯವಸ್ಥೆಯ ಕಂಬಗಳಾಗಿದ್ದು, ಅವರು ನೈತಿಕತೆ ಕಾಪಾಡಿದಾಗ ಮಾತ್ರ ಸಮೃದ್ಧಿ ಸಾಧ್ಯವೆಂದು ಹೇಳಿದರು.
ಕಾರ್ಯಕ್ರಮದ ಅಧ್ಯಕ್ಷತೆಯನ್ನು ರಿಫಾ ಚೇಂಬರ್ ಆಫ್ ಕಾಮರ್ಸ್ ಆಂಡ್ ಇಂಡಸ್ಟ್ರಿ ಉಡುಪಿ ಘಟಕದ ಅಧ್ಯಕ್ಷರಾದ ಆಸೀಫ್ ಇಕ್ಬಾಲ್ ವಹಿಸಿದ್ದರು. ಜಹೀರ್ ಮಣಿಪಾಲ್ ರಿಫಾದ ಕಾರ್ಯ ಚಟುವಟಿಕೆಯ ಬಗ್ಗೆ ವಿವರಿಸಿದರು. ಇಸಾಕ್ ಕಿದಿಯೂರು ಕುರ್ ಆನ್ ಪಠಿಸಿದರು. ಜಲೀಲ್ ಕಾರ್ಯಕ್ರಮ ನಿರೂಪಿಸಿ ಧನ್ಯವಾದವಿತ್ತರು.





