ಶಾಲೆಗಳಲ್ಲಿ ಹೆಚ್ಚಾಗಿ ಮಹಿಳಾ ಶಿಕ್ಷಕರಿದ್ದರೆ, ಅವರು ವಿದ್ಯಾರ್ಥಿಗಳಿಗೆ ಪ್ರೀತಿ, ವಾತ್ಸಲ್ಯ, ಮಮತೆಯಿಂದ ಬೋಧಿಸುತ್ತಾರೆ ಅದನ್ನು ವಿದ್ಯಾರ್ಥಿಗಳು ಗ್ರಹಿಸುವ ಮೂಲಕ ಪರೀಕ್ಷೆಯಲ್ಲಿ ಅಧಿಕ ಅಂಕ ಸಂಪಾದಿಸುತ್ತಾರೆ. ಮಹಿಳಾ ಶಿಕ್ಷಕರಿಂದ ವಿದ್ಯಾರ್ಥಿಗಳ ಶೈಕ್ಷಣಿಕ ಸಾಧನೆಗೆ ಅನುಕೂಲ ಎಂದು ನಿವೃತ್ತ ಶಿಕ್ಷಕ ಗಂಗಯ್ಯ ಮಹಾಂತಯ್ಯ ಹಿರೇಮಠ ಹೇಳಿದರು.
ಬಾಗಲಕೋಟೆ ಜಿಲ್ಲೆಯ ಇಳಕಲ್ನ ಬಸವೇಶ್ವರ ಶಿಕ್ಷಣ ಸಮಿತಿಯವರು ನಡೆಸುತ್ತಿರುವ ಬಸವೇಶ್ವರ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ಹೊಸ ವರ್ಷದ ಆಚರಣೆ ಅಂಗವಾಗಿ ಆಯುರ್ವೇದ ವೈದ್ಯ ದಿ. ಸೋಮನಾಥ ಹಂಚಾಟೆ ಅವರ ಸ್ಮರಣಾರ್ಥ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿತ್ತು. ಕಳೆದ 22 ವರ್ಷಗಳಿಂದಲೂ ಡಾ. ಮಹೇಶ ಹಂಚಾಟೆ ಹಾಗೂ ಅವರ ಕುಟುಂಬ ಪರಿವಾರದವರು ವಿದ್ಯಾರ್ಥಿಗಳಿಗೆ ಉಚಿತವಾಗಿ ಕೊಡ ಮಾಡುವ ದೋಸೆ, ಕೇಕ್, ನೋಟ್ ಪುಸ್ತಕ ಮತ್ತು ಪೆನ್ನುಗಳನ್ನು ವಿತರಿಸಿ ಅವರು ಮಾತನಾಡಿದರು.
ಬಸವೇಶ್ವರ ಶಿಕ್ಷಣ ಸಮಿತಿಯ ಕಾರ್ಯದರ್ಶಿ ರಾಜೇಶ್ವರ ಎಂ. ಹಂಚಾಟೆ ಮಾತನಾಡಿ, “ಹೊಸ ವರ್ಷವನ್ನು ಜೀವನದಲ್ಲಿ ಒಂದೇ ದಿನಕ್ಕೆ ಸೀಮಿತಗೊಳಿಸದೆ, ವರ್ಷದುದ್ದಕ್ಕೂ ಹರ್ಷವನ್ನು ಆಚರಿಸಿಕೊಂಡು ಬನ್ನಿ” ಎಂದರು.
ಇದನ್ನೂ ಓದಿ: ಬಾಗಲಕೋಟೆ | ವಿಬಿ ಜಿ ರಾಮ್ ಜಿ ಅಂಗೀಕಾರ: ಕೇಂದ್ರದ ವಿರುದ್ಧ ಡಿ.22ರಂದು ಬೃಹತ್ ಪ್ರತಿಭಟನೆ
ಕಾರ್ಯಕ್ರಮದಲ್ಲಿ ನಿವೃತ್ತ ಶಿಕ್ಷಕ ಎಂ ಎಸ್ ಅಂಗಡಿ, ಸಮಿತಿ ಕಾರ್ಯಾಧ್ಯಕ್ಷ ಮಲ್ಲಿಕಾರ್ಜುನ ಅಗ್ನಿ, ಡಾ. ಮಹೇಶ ಹಂಚಾಟೆ, ಮಹಾಂತೇಶ ಗೊರಜನಾಳ, ಗುರುನಗೌಡ ಗೌಡರ, ಸಮಾಜ ಸೇವಕ ರಮೇಶ ಹಂಚಾಟೆ, ಆರೋಗ್ಯ ಇಲಾಖೆಯ ನಿವೃತ್ತ ನೌಕರ ನಾರಣಪ್ಪ ಅಂಬೋರೆ, ಶಾಲೆಯ ಮುಖ್ಯಗುರು ಸಿದ್ದು ಕೊಪ್ಪದ, ವಿದ್ಯಾರ್ಥಿ ಪ್ರತಿನಿಧಿ ಪ್ರವೀಣ ಮಧುರಕರ ಹಾಗೂ ವಿದ್ಯಾರ್ಥಿಗಳು ಉಪಸ್ಥಿತರಿದ್ದರು.





