- ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನೀಲಪ್ಪ ಎಂಬುವವರ ಮೇಲೆ ಹಲ್ಲೆ
- ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲು, ಇಬ್ಬರು ಆರೋಪಿಗಳ ಬಂಧನ
ಆಕ್ರಮ ಮರಳು ಸಾಗಾಣಿಕೆ ತಡೆಯಲು ಹೋದ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನೀಲಪ್ಪ ಎಂಬುವವರ ಮೇಲೆ ಮಾರಣಾಂತಿಕ ಹಲ್ಲೆ ನಡೆದಿದೆ. ಗಂಭೀರವಾಗಿ ಗಾಯಗೊಂಡ ಅಧಿಕಾರಿಯನ್ನು ರಾಯಚೂರು ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.
ಮಾನ್ವಿ ತಾಲ್ಲೂಕಿನ ಮದ್ಲಾಪೂರು ಕ್ರಾಸ್ ಬಳಿ ಘಟನೆ ಜರುಗಿದ್ದ ಹಲ್ಲೆ ಮಾಡಿದ ಆರೋಪಿಗಳಾದ ಗೋವಿನದೊಡ್ಡಿಯ ಶಿವು ಮಹಾದೇವಪ್ಪ, ವೆಂಕಟೇಶ ಮಹಾದೇವಪ್ಪ, ರಂಗನಾಥ ಶಿವಣ್ಣ, ಶಿವರಾಜ ನರಸಪ್ಪ, ಗಿರಿ ಕರಡಿಗುಡ್ಡ, ಶ್ರೀಕಾಂತ ವಡ್ಡರ್ ಸೇರಿದಂತೆ ಇತರರ ವಿರುದ್ದ ಮಾನ್ವಿ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದ್ದು, ಈ ಪೈಕಿ ರಂಗನಾಥ ಯರಗುಡ್ಡ ಮತ್ತು ಶಿವರಾಜ ಮಾನ್ವಿ ಎಂಬ ಆರೋಪಿಗಳನ್ನು ಬಂಧಿಸಲಾಗಿದೆ. ಇನ್ನುಳಿದ ಆರೋಪಿಗಳ ಬಂಧನಕ್ಕೆ ಪೊಲೀಸರು ಬಲೆ ಬೀಸಿದ್ದಾರೆ.
ಏನಿದು ಘಟನೆ :
ಅಕ್ರಮ ಮರಳು ಸಾಗಾಣಿಕೆ ತಡೆಯಲು ಹೋದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ನೀಲಪ್ಪ ಮೇಲೆ ಮದ್ಲಾಪೂರು ಕ್ರಾಸ್ ಬಳಿ ಅಕ್ರಮ ಮರಳು ಸಾಗಾಣಿಕೆದಾರರು ದಾಳಿ ಮಾಡಿ ಮಾರಣಾಂತಿಕವಾಗಿ ಹಲ್ಲೆ ನಡೆಸಿದ ಘಟನೆ ಬುಧವಾರ ನಡೆದಿತ್ತು.
ಮಾನ್ವಿ ತಾಲೂಕಿನ ತುಂಗಭದ್ರಾ ನದಿ ತೀರದ ಯಡಿವಾಳ, ಚೀಕಲಪರ್ವಿ, ಮದ್ಲಾಪುರ ಇನ್ನಿತರ ಗ್ರಾಮಗಳಲ್ಲಿ ರಾಯಲ್ಟಿ ಪಡೆದು ಮರಳು ಸಾಗಣೆ ಮಾಡುವ ವ್ಯವಸ್ಥೆ ಇದ್ದರೂ ಸಹ ಕೆಲವು ಮರಳು ದಂಧೆಕೋರರು ಬುರಾನಪುರ, ಬುದ್ದಿನ್ನಿ, ರಂಗದಾಳ, ಯಡಿವಾಳ, ಚೀಕಲಪರ್ವಿ, ಮದ್ಲಾಪುರ ಹಾಗೂ ಇತರ ಕಡೆ ಅಕ್ರಮವಾಗಿ ಸಂಗ್ರಹ ಮಾಡಿದ ಮರಳನ್ನು ರಾಯಲ್ಟಿ ಇಲ್ಲದೇ ಟಿಪ್ಪರ್ ಮತ್ತು ಟ್ರ್ಯಾಕ್ಟರ್ಗಳ ಮೂಲಕ ಹಗಲು-ರಾತ್ರಿ ಅಕ್ರಮವಾಗಿ ಸಾಗಣೆ ಮಾಡುತ್ತಿರುವ ಮಾಹಿತಿ ಪಡೆದ ಗಣಿ ಮತ್ತು ಭೂ ವಿಜ್ಞಾನ ಇಲಾಖೆ ಅಧಿಕಾರಿ ಮಂಜುನಾಥ ನೇತ್ರತ್ವದಲ್ಲಿ ಬುಧವಾರ ಸಾಯಂಕಾಲ ಇಲಾಖೆಯ ನಾಲೈದು ಜನ ಸಿಬ್ಬಂದಿ ಮಾನ್ವಿಗೆ ಆಗಮಿಸಿದ್ದರು.
ಖಚಿತ ಮಾಹಿತಿ ಮೇರೆಗೆ ಯಡಿವಾಳ ರಸ್ತೆ ಬದಿ ಅಕ್ರಮವಾಗಿ ಸಂಗ್ರಹಿಸಿದ ಮರಳನ್ನು ತುಂಬುವಾಗ ಪೋಲಿಸ್ ಅಧಿಕಾರಿಗಳ ನೇತೃತ್ವದ ತಂಡ ದಾಳಿ ನಡೆಸಿ ಟಿಪ್ಪರ್ ಮತ್ತು ಜೆಸಿಬಿಯನ್ನು ವಶಕ್ಕೆ ಪಡೆದ ಅಧಿಕಾರಿ ನೀಲಪ್ಪ ಜೊತೆಗೆ ಪೊಲೀಸ್ ಠಾಣೆಗೆ ಕಳಿಸುತ್ತಿರುವಾಗ ಮದ್ಲಾಪುರ ಕ್ರಾಸ್ ಬಳಿ ಅಡ್ಡಬಂದ ಶಿವು ಮತ್ತು ಜೆಸಿಬಿ ಚಾಲಕ ಮತ್ತು ಆತನ ಸಹಚರರು ಸೇರಿ ಗಣಿ ಮತ್ತು ಭೂವಿಜ್ಞಾನ ಇಲಾಖೆ ಅಧಿಕಾರಿ ನೀಲಪ್ಪ ಇವರ ಮೇಲೆ ಗಂಭೀರವಾಗಿ ಹಲ್ಲೆ ಮಾಡಿದ್ದಾರೆ ಎಂದು ಪೊಲೀಸರು ತಿಳಿಸಿದ್ದಾರೆ.
ಚೀಕಲಪರ್ವಿಯಲ್ಲಿ ಅಕ್ರಮ ಮರಳು ಸಾಗಣೆ ಸಂಬಂಧಪಟ್ಟಂತೆ ಮಂಗಳವಾರ ರಾತ್ರಿ ಪೊಲೀಸ್ ಇನ್ಸ್ಪೆಕ್ಟರ್ ವೀರಭದ್ರಯ್ಯ ಹಿರೇಮಠ ನೇತ್ರತ್ವದಲ್ಲಿ ದಾಳಿ ನಡೆಸಿ ಮರಳು ತುಂಬಿದ ಮೂರು ಟಿಪ್ಪರ್ಗಳನ್ನು ವಶಕ್ಕೆ ಪಡೆದು ಪ್ರಕರಣ ದಾಖಲಿಸಿದ್ದಾರೆ. ಪೊಲೀಸ್ ದಾಳಿಯಾದ 24 ಗಂಟೆಯೊಳಗಾಗಿ ಬುಧವಾರ ಸಾಯಂಕಾಲ ಅಕ್ರಮ ಮರಳು ಸಾಗಣೆ ತಡೆಯಲು ಹೋದ ಗಣಿ ಇಲಾಖೆಯ ನೌಕರನ ಮೇಲೆ ಅಕ್ರಮ ಮರಳು ದಂಧೆಕೋರರು ಹಲ್ಲೆ ಮಾಡಲಾಗಿದೆ.
ನೌಕರ ನೀಲಪ್ಪ ಇವರಿಗೆ ಕಬ್ಬಿಣದ ರಾಡ್ನಿಂದ ತಲೆಗೆ ಹೊಡೆದ ಪರಿಣಾಮ ಗಂಭೀರ ಗಾಯಗೊಂಡು ತಲೆಯಿಂದ ರಕ್ತಸ್ರಾವ ಕಂಡು ಬಂದ ಹಿನ್ನೆಲೆಯಲ್ಲಿ ಅಧಿಕಾರಿಯನ್ನು ಹೆಚ್ಚಿನ ಚಿಕಿತ್ಸೆಗಾಗಿ ರಾಯಚೂರಿನ ಭಂಡಾರಿ ಖಾಸಗಿ ಆಸ್ಪತ್ರೆಗೆ ದಾಖಲಿಸಿದ್ದಾರೆ.




