ಉತ್ತರ ಕನ್ನಡ ಜಿಲ್ಲೆಯ ಮುಂಡಗೋಡ ತಾಲೂಕಿನಲ್ಲಿ ಮತ್ತೆ ಅಕ್ರಮ ಬಡ್ಡಿ ದಂಧೆಯ ಪ್ರಕರಣ ಬೆಳಕಿಗೆ ಬಂದಿದ್ದು, ಮೀಟರ್ ಬಡ್ಡಿದಂಧೆ ಪುನಃ ಪ್ರಾರಂಭವಾಗಿದೆ ಎಂಬ ಅನುಮಾನ ಮೂಡುತ್ತಿದೆ. ಇಂದು ನಡೆದ ಪ್ರಕರಣ ಸ್ಥಳೀಯರಲ್ಲಿ ಅಧಿಕಾರಿಗಳ ನಿರ್ಲಕ್ಷ್ಯತನದ ಮೇಲೆ ತೀವ್ರ ಅಸಮಾಧಾನ ವ್ಯಕ್ತವಾಗುವಂತೆ ಮಾಡುತ್ತಿದೆ.
ಘಟನೆ ವಿವರ : ಮುಂಡಗೋಡ ತಾಲೂಕಿನ ಚವಡಳ್ಳಿ ಗ್ರಾಮದ ವಿದ್ಯಾಧರ ಮಾದಾಪುರ ಎಂಬುವವರು ಜಮೀರ್ ಅಹ್ಮದ್ ದರ್ಗಾವಾಲೆ ಎನ್ನುವವರಿಂದ 2024ರ ಜುಲೈ 24ರಂದು ₹50,000 ಸಾಲ ಪಡೆದಿದ್ದರು. ಸಾಲಕ್ಕೆ ಮಿತಿಮೀರಿದ ಬಡ್ಡಿ ವಿಧಿಸಿ ವಾರಕ್ಕೆ ₹3,000 ಹಣ ವಸೂಲಿ ಮಾಡಲಾಗುತ್ತಿತ್ತು ಎಂದು ದೂರಿನಲ್ಲಿ ಹೇಳಲಾಗಿದೆ. ಈ ಹಿಂದೆ ಅಕ್ರಮ ಬಡ್ಡಿ ವ್ಯವಹಾರ ನಡೆಸಿದ್ದಕ್ಕಾಗಿ ಜೈಲು ಅನುಭವಿಸಿದ ಜಮೀರ್ ಅಹ್ಮದ್ ದರ್ಗಾವಾಲೆ, ಬಿಡುಗಡೆಯಾದ ಬಳಿಕ ಬಂದು ಮತ್ತೆ ಅದೇ ಕೃತ್ಯವನ್ನು ಮುಂದುವರೆಸಿರುವುದು ಈ ಪ್ರಕರಣದಲ್ಲಿ ಬಯಲಾಗಿದೆ.
ತನ್ನ ಸಹಚರರಿಂದ ವಿದ್ಯಾಧರ ಅವರನ್ನು ತನ್ನ ಆಫೀಸಿಗೆ ಕರೆಯಿಸಿ ʼನೀನು 1 ಲಕ್ಷ ರೂ. ಸಾಲ ಪಡೆದಿದ್ದೀಯಾʼ ಎಂದು ಹೇಳಿ ಅನೇಕ ಬಾರಿ ಅವರನ್ನು ಹೆದರಿಸಿ ಅನೇಕ ಪತ್ರಗಳಿಗೆ ಸಹಿ ಮಾಡಿಸಿಕೊಂಡಿರುವುದಾಗಿ ದೂರಿನಲ್ಲಿ ಉಲ್ಲೇಖಿಸಲಾಗಿದೆ. ಇದರಿಂದ ಹಿಂಸಿಸಲ್ಪಟ್ಟ ವಿದ್ಯಾಧರ ಕೂಡಲೇ ₹70,000 ನೀಡಿರುತ್ತಾರೆ. ಇಷ್ಟಕ್ಕೇ ಸುಮ್ಮನಾಗದ ಅವರು ಮತ್ತೆ ₹30,000 ನೀಡುವಂತೆ ಪೀಡಿಸುತ್ತಿದ್ದರು. ಅಲ್ಲದೆ,ಕೊಡದಿದ್ದರೆ ಜೀವ ತೆಗೆಯುವುದಾಗಿ ಬೆದರಿಕೆ ನೀಡುತ್ತಿದ್ದಾರೆಂದು ವಿದ್ಯಾಧರ ಅವರು 2025ರ ಸೆಪ್ಟೆಂಬರ್ 20ರಂದು ಮುಂಡಗೋಡ ಪೊಲೀಸ್ ಠಾಣೆಯಲ್ಲಿ ದೂರು ದಾಖಲಸಿದ್ದಾರೆ.
ಜಿಲ್ಲೆಯಲ್ಲಿ ಬಡ್ಡಿದಂಧೆಯ ಹಾವಳಿ ಒಂದು ಸಮಯದಲ್ಲಿ ಮೀತಿಮೀರಿದ್ದಾಗ ಹಿಂದಿನ ಎಸ್ಪಿ ಎಂ ನಾರಾಯಣ ಅವರು ಮೀಟರ್ ಬಡ್ಡಿದಂಧೆಕೋರರ ಮೇಲೆ ಸರಿಯಾದ ರೀತಿಯಲ್ಲಿ ಕಾನೂನು ಕ್ರಮ ಕೈಗೊಂಡು ಮೀಟರ್ ಬಡ್ಡಿ ವ್ಯವಹಾರಕ್ಕೆ ಕಡಿವಾಣ ಹಾಕಿದ್ದರು. ಆದರೆ ಅವರ ವರ್ಗಾವಣೆಯ ನಂತರ, ಮತ್ತೆ ಜಿಲ್ಲಾದ್ಯಂತ ಅಕ್ರಮ ಬಡ್ಡಿ ಚಟುವಟಿಕೆಗಳು ಹೆಚ್ಚಾಗಿವೆ ಎಂಬ ಆರೋಪಗಳು ಸಾರ್ವಜನಿಕರಲ್ಲಿ ಕೇಳಿಬರುತ್ತಿವೆ. ಅಕ್ರಮ ಬಡ್ಡಿ ಕಟ್ಟುಪಾಡಿಲ್ಲದೆ ಮುಂದುವರಿಯುತ್ತಿರುವುದರಿಂದ ಅನೇಕ ಬಾಧಿತರು ಆಸ್ತಿ ಕಳೆದುಕೊಳ್ಳುವ ಪರಿಸ್ಥಿತಿ ಎದುರಿಸುತ್ತಿದ್ದಾರೆ.
“₹10,000 ತೆಗೆದುಕೊಂಡರೆ, ಕೆಲವೇ ತಿಂಗಳಲ್ಲಿ 1 ಲಕ್ಷ ರೂಪಾಯಿ ವಸೂಲಿ ಮಾಡುತ್ತಾರೆ. ಹಣ ಕೊಡದಿದ್ದರೆ ಜೀವ ಬೆದರಿಕೆ ಹಾಕುವುದು, ಆಸ್ತಿ ಕಬಳಿಸುವುದು ಸಾಮಾನ್ಯವಾಗಿದೆ” ಎಂದು ಬಾದಿತರು ತಮ್ಮ ಅಳಲನ್ನು ವ್ಯಕ್ತಪಡಿಸಿದ್ದಾರೆ.
ಈ ಸುದ್ದಿ ಓದಿದ್ದೀರಾ? ಹೊನ್ನಾವರ | ಬೈಕ್ ಓವರ್ಟೇಕ್ ಮಾಡಿದ್ದಕ್ಕೆ ಗಲಾಟೆ; ಇಬ್ಬರು ಆರೋಪಿಗಳು ಬಂಧನ
ಆರೋಪಿತರ ವಿರುದ್ಧ ಹಳೆಯ ಪ್ರಕರಣಗಳು: ಪ್ರಸ್ತುತ ಪ್ರಕರಣದ ಆರೋಪಿಯಾಗಿರುವ ಜಮೀರ್ ಅಹ್ಮದ್ ದರ್ಗಾವಾಲೆ ವಿರುದ್ಧ ಇತ್ತೀಚೆಗೆ ಶಿರಸಿ ಪೊಲೀಸ್ ಠಾಣೆಯಲ್ಲಿ ಅಪಹರಣ ಮತ್ತು ಅಕ್ರಮ ಜಮೀನು ಕಬಳಿಕೆ ಕುರಿತು ಶೂನ್ಯ FIR ದಾಖಲಾಗಿತ್ತು. ಆ ಪ್ರಕರಣ ಇನ್ನೂ ತನಿಖೆಯಲ್ಲಿರುವಾಗಲೇ ಇದೀಗ ಮತ್ತೆ ಬಡ್ಡಿ ದಂಧೆಗೆ ಸಂಬಂಧಿಸಿದ ಹೊಸ ಪ್ರಕರಣ ದಾಖಲಾದ ವಿಷಯ ಜಿಲ್ಲಾ ಕಾನೂನು-ಸುವ್ಯವಸ್ಥೆಯ ಬಗ್ಗೆ ಗಂಭೀರ ಪ್ರಶ್ನೆ ಎಬ್ಬಿಸಿದೆ.
“ತಾಲೂಕಿನಲ್ಲಿ ನಿರಂತರವಾಗಿ ನಡೆಯುತ್ತಿರುವ ಅಕ್ರಮ ಬಡ್ಡಿ ಚಟುವಟಿಕೆಗಳಿಗೆ ಪೊಲೀಸರು ಹಾಗೂ ಸರ್ಕಾರ ತಕ್ಷಣ ಕಡಿವಾಣ ಹಾಕಬೇಕು. ಬಾಧಿತರಿಗೆ ನ್ಯಾಯ ದೊರೆಯುವಂತೆ ಕೂಡಲೇ ಕಾನೂನು ಕ್ರಮ ಕೈಗೊಳ್ಳಬೇಕು” ಎಂದು ಸಾರ್ವಜನಿಕರು ಒತ್ತಾಯಿಸಿದ್ದಾರೆ.





