ಬೀದರ ಜಿಲ್ಲೆಯ ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅಧಿಕಾರ ವಹಿಸಿಕೊಂಡ ಬಳಿಕ ದಲಿತರ ಮೇಲೆ ನಿರಂತರವಾಗಿ ದೌರ್ಜನ್ಯ ಘಟನೆಗಳು ನಡೆಯುತ್ತಿವೆ. ದಲಿತರ ಮೇಲಿನ ದೌರ್ಜನ್ಯ ಪ್ರಕರಣಗಳು ಮುಚ್ಚಿ ಹಾಕಲು ಯತ್ನಿಸುತ್ತಿದ್ದಾರೆ ಎಂದು ಆರೋಪಿಸಿ ವಿವಿಧ ಸಂಘಟನೆಗಳ ಒಕ್ಕೂಟದಿಂದ ಶುಕ್ರವಾರ ಪ್ರತಿಭಟನೆ ನಡೆಸಿದರು.
ಬೀದರ್ ನಗರದ ಡಾ.ಬಿ.ಆರ್. ಅಂಬೇಡ್ಕರ್ ವೃತ್ತದಿಂದ ಭಗತ್ ಸಿಂಗ್ ವೃತ್ತ, ತಹಸೀಲ್ ಕಚೇರಿ ಮಾರ್ಗವಾಗಿ ಜಿಲ್ಲಾಧಿಕಾರಿಗಳ ಕಚೇರಿವರೆಗೆ ಪ್ರತಿಭಟನಾ ಮೆರವಣಿಗೆ ನಡೆಸಿ, ಗೃಹ ಸಚಿವ ಜಿ.ಪರಮೇಶ್ವರ ಅವರಿಗೆ ಬರೆದ ಹಕ್ಕೊತ್ತಾಯ ಪತ್ರವನ್ನು ಅಪರ ಜಿಲ್ಲಾಧಿಕಾರಿ ಶಿವಕುಮಾರ್ ಶೀಲವಂತ ಅವರಿಗೆ ಸಲ್ಲಿಸಿದರು.
ʼಡಾ.ಬಿ.ಆರ್.ಅಂಬೇಡ್ಕರ್ ಅವರ ಭಾವಚಿತ್ರವನ್ನು ಇನ್ಸ್ಟಾಗ್ರಾಂ ಸ್ಟೋರಿಯಲ್ಲಿ ಹಾಕಿ ಅವಹೇಳನಕಾರಿ ಪದ ಬಳಸಿ ಅವಮಾನಿಸಿದ ಆರೋಪಿಯನ್ನು ಬಂಧಿಸಿಲ್ಲ. ಈ ಕುರಿತು ಭಾಲ್ಕಿ ಪಟ್ಟಣ ಠಾಣೆಯಲ್ಲಿ 2023ರ ನವೆಂಬರ್ 4ರಂದು ಪ್ರಕರಣ ದಾಖಲಾದರೂ ಕ್ರಮ ಕೈಗೊಂಡಿಲ್ಲ. ಭಾಲ್ಕಿ ತಾಲೂಕಿನ ಮಳಚಾಪೂರ ಗ್ರಾಮದಲ್ಲಿ 2024ರ ಫೆ.9ರಂದು ನಡೆದಿರುವ ಸಂವಿಧಾನ ಜಾಗೃತಿ ಜಾಥಕ್ಕೆ ಅಡ್ಡಿ ಉಂಟು ಮಾಡಿ ಜೈ ಶ್ರೀರಾಮ ಘೋಷಣೆ ಕೂಗಿದವರ ವಿರುದ್ಧ ಪ್ರಕರಣ ದಾಖಲಿಸಲಿಲ್ಲ. ಹಲ್ಲೆ ಖಂಡಿಸಿ ಅದೇ ಗ್ರಾಮದ ಪರಿಶಿಷ್ಟ ಜಾತಿ ವ್ಯಕ್ತಿಯೊಬ್ಬರು ಠಾಣೆಗೆ ದೂರು ನೀಡಿದರೂ ಅದು ʼನಾಮ್ ಕೇ ವಾಸ್ತೆʼ ಪ್ರಕರಣ ದಾಖಲಾಗಿದೆʼ ಎಂದು ದೂರಿದರು.
ʼಭಾಲ್ಕಿ ತಾಲೂಕಿನ ತಳವಾಡ (ಕೆ) ಗ್ರಾಮದ ಮೇಲ್ಜಾತಿ ಮಹಿಳೆ ಪರಿಶಿಷ್ಟ ಜಾತಿ ವ್ಯಕ್ತಿಗೆ ಜಾತಿ ನಿಂದನೆ ಮಾಡಿದರೂ, ಮಹಿಳೆ ಮೇಲೆ ಕ್ರಮಕೈಗೊಳ್ಳಲು ದೂರು ನೀಡಿದರೂ ಠಾಣೆಯಲ್ಲಿ ಹೆಸರಿಗಷ್ಟೇ ಪ್ರಕರಣ ದಾಖಲಾಗಿದೆ. ಹಾಲಹಿಪ್ಪರ್ಗಾ ಗ್ರಾಮದ ದಲಿತ ವ್ಯಕ್ತಿಗೆ ಮೇಲ್ಟಾತಿ ವ್ಯಕ್ತಿಗಳಿಂದ ಕರೆ ಮೂಲಕ ಜೀವ ಬೆದರಿಕೆ ಹಾಕಿದರು, ಈ ಕುರಿತು ಧನ್ನೂರ ಠಾಣೆಯಲ್ಲಿ 4 ಜನರ ಮೇಲೆ ಪ್ರಕರಣ ದಾಖಲಾಗಿದ್ದು, ಹೆಸರಿಗಷ್ಟೇ ಪ್ರಕರಣವಾಗಿದೆ. ಔರಾದ್ ತಾಲೂಕಿನ ಕೌಡಗಾಂವ್ ಗ್ರಾಮದ ಅಂಬೇಡ್ಕರ್ ವೃತ್ತ ತೆರವು ಪ್ರಕರಣ ಸಂಬಂಧ ಸಂತಪೂರ ಠಾಣೆಯಲ್ಲಿ ದೂರು ದಾಖಲಾದರೂ ಯಾರೊಬ್ಬರಿಗೂ ಬಂಧಿಸಿಲ್ಲʼ ಎಂದು ಆರೋಪಿಸಿದರು.
ʼಭಾಲ್ಕಿ ತಾಲೂಕಿನ ರಾಚಪ್ಪಾ ಗೌಡಗಾಂವ ಗ್ರಾಮದ ಪರಿಶಿಷ್ಟ ಜಾತಿ ಮಹಿಳೆ ಮೇಲೆ ಅದೇ ಗ್ರಾಮದ ಮೇಲ್ಟಾತಿಯ ಇಬ್ಬರು ಯುವಕರು ಮಾರಣಾಂತಿಕ ಹಲ್ಲೆ ನಡೆಸಿ, ಜಾತಿ ನಿಂದನೆ ಮಾಡಿದರು. ಈ ಕುರಿತು ಕೊಲೆ ಯತ್ನ ಪ್ರಕರಣ ದಾಖಲಿಸದೇ ಹೆಸರಿಗಷ್ಟೇ ಪ್ರಕರಣ ದಾಖಲಿಸಿ ಪ್ರಕರಣ ಮುಚ್ಚಿ ಹಾಕುವ ಹುನ್ನಾರದಿಂದ ದಲಿತ ಮಹಿಳೆಗೆ ಯಾರೂ ಕೂಡ ಹಲ್ಲೆ ನಡೆಸಿಲ್ಲ ಎಂದು ಹೇಳಿರುವುದು ಖಂಡನೀಯʼ ಎಂದು ಆಕ್ರೋಶ ವ್ಯಕ್ತಪಡಿಸಿದರು.
ʼಭಾಲ್ಕಿ ತಾಲೂಕಿನ ರಾಚಪ್ಪಾ ಗೌಡಗಾಂವ್ ಗ್ರಾಮದ ದಲಿತ ಮಹಿಳೆ ಮೇಲೆ ಮಾರಣಾಂತಿಕ ಹಲ್ಲೆ ಮಾಡಿರುವ ಇಬ್ಬರು ಯುವಕರನ್ನು ಕೂಡಲೇ ಬಂಧಿಸಬೇಕು. ಭಾಲ್ಕಿ ಡಿವೈಎಸ್ಪಿ ಶಿವಾನಂದ ಪವಾಡಶೆಟ್ಟಿ ಅಧಿಕಾರವಧಿಯಲ್ಲಿ ದಲಿತರ ಮೇಲೆ ನಡೆದಿರುವ ದೌರ್ಜನ್ಯ ಪ್ರಕರಣಗಳನ್ನು ತನಿಖೆ ನಡೆಸಿ ದಲಿತರಿಗೆ ನ್ಯಾಯ ಒದಗಿಸಬೇಕು. ಸದರಿ ಅಧಿಕಾರಿ ವಿರುದ್ಧ ಶಿಸ್ತು ಕ್ರಮ ಜರುಗಿಸಬೇಕುʼ ಎಂದು ಪ್ರತಿಭಟನಾಕಾರರು ಒತ್ತಾಯಿಸಿದರು.
ಈ ಸುದ್ದಿ ಓದಿದ್ದೀರಾ? ಬೀದರ್ | ಸ್ಮಶಾನದ ಬಳಿ ಆಸ್ಪತ್ರೆ : ಮಗುವಿಗೆ ಕೇಡಾಗುತ್ತೆ ಎಂಬ ಕಾರಣಕ್ಕೆ ಹೆರಿಗೆಗೆ ಬಾರದ ಗರ್ಭಿಣಿಯರು!
ಈ ಸಂಧರ್ಭದಲ್ಲಿ ಕರ್ನಾಟಕ ದಲಿತ ಸಂಘರ್ಷ ಸಮಿತಿ ರಾಜ್ಯ ಉಪಾಧ್ಯಕ್ಷ ರಾಜಕುಮಾರ ಮೂಲಭಾರತಿ, ಅಂಬೇಡ್ಕರ್ ಯುವ ಸೇನೆ ರಾಜ್ಯಾಧ್ಯಕ್ಷ ರಾಜಕುಮಾರ ಗುನಳ್ಳಿ, ಭೀಮ ಆರ್ಮಿ ಜಿಲ್ಲಾಧ್ಯಕ್ಷ ಅಂಬರೀಶ ಕುದುರೆ ಹಾಗೂ ಪ್ರಮುಖರಾದ ಮಹೇಶ ಗೋರನಾಳಕರ್, ಸಂತೋಷ ಏಣಕೋರೆ, ಪ್ರಕಾಶ ರಾವಣ, ಅವಿನಾಶ ದೀನೆ, ವೈಜಿನಾಥ ಶಿಂಧೆ, ಗೌತಮ್ ಪ್ರಸಾದ್, ಮಾರುತಿ ಸೂರ್ಯವಂಶಿ, ಪ್ರದೀಪ ಭಾವಿಕಟ್ಟಿ, ಉತ್ತಮ ಕುಂದೆ, ಜಗನ್ನಾಥ ಹೊನ್ನಾ ಸೇರಿದಂತೆ ವಿವಿಧ ದಲಿತ ಸಂಘಟನೆಗಳ ಪದಾಧಿಕಾರಿಗಳು ಪಾಲ್ಗೊಂಡಿದ್ದರು.





