ಕೇಂದ್ರ ಸರ್ಕಾರವು ಬಿಸಿಯೂಟ ನೌಕರರ ವೇತನ ಹೆಚ್ಚಿಸಬೇಕು ಹಾಗೂ ಕನಿಷ್ಠ ಕೂಲಿ ಜಾರಿಗೊಳಿಸಬೇಕೆಂದು ಒತ್ತಾಯಿಸಿ ರಾಜ್ಯಾದ್ಯಂತ ಅನಿರ್ದಿಷ್ಟಾವಧಿ ಹೋರಾಟದ ಭಾಗವಾಗಿ ಈಗಾಗಲೇ ತುಮಕೂರು, ಹುಬ್ಬಳ್ಳಿ, ಬೆಂಗಳೂರು, ಮಂಡ್ಯ ಜಿಲ್ಲೆಗಳಲ್ಲಿ ಕೇಂದ್ರ ಸಚಿವರುಗಳ ಕಚೇರಿ ಮತ್ತು ಮನೆಗಳ ಎದುರು ಧರಣಿ ಆರಂಭವಾಗಿದೆ.
ತುಮಕೂರಿನಲ್ಲಿ ವಿ ಸೋಮಣ್ಣನವರ ಮನೆ ಎದುರು, ಹುಬ್ಬಳ್ಳಿಯಲ್ಲಿ ಪ್ರಲ್ಹಾದ್ ಜೋಶಿ ಕಚೇರಿ ಎದುರು ಬೆಂಗಳೂರಿನ ಫ್ರೀಡಂ ಪಾರ್ಕಿನಲ್ಲಿ ಧರಣಿ ಸತ್ಯಾಗ್ರಹ ನಡೆಯುತ್ತಿದ್ದು, ಈ ಹೋರಾಟವನ್ನು ಬೆಂಬಲಿಸಿ ಮಂಗಳೂರಿನ ಕ್ಲಾಕ್ ಟವರ್ ಬಳಿ 400ಕ್ಕೂ ಅಧಿಕ ಬಿಸಿಯೂಟ ನೌಕರರು CITU ನೇತ್ರತ್ವದಲ್ಲಿ ಧರಣಿ ಸತ್ಯಾಗ್ರಹ ನಡೆಸಿದರು.
ಬದುಕು ನಡೆಸಲು ಪೂರಕವಾದ ಕನಿಷ್ಠ ಕೂಲಿಯನ್ನು ನೀಡದೆ ಅತ್ಯಂತ ಅಮಾನವೀಯವಾಗಿ ನಡೆಸಿಕೊಳ್ಳುತ್ತಿರುವ ಕೇಂದ್ರ ಸರ್ಕಾರದ ವಿರುದ್ಧ ಘೋಷಣೆಗಳನ್ನು ಕೂಗುತ್ತ ಆಕ್ರೋಶ ವ್ಯಕ್ತಪಡಿಸಿದರು.

ಜಿಲ್ಲೆಯ ಕಾರ್ಮಿಕ ಚಳುವಳಿಯ ಹಿರಿಯ ನೇತಾರ ಜೆ ಬಾಲಕೃಷ್ಣ ಶೆಟ್ಟಿಯವರು ಧರಣಿ ಉದ್ಘಾಟಿಸಿ ಮಾತನಾಡಿ, “ಅತ್ಯಂತ ನಿಕೃಷ್ಠವಾಗಿ ಕೂಲಿಯನ್ನು ಪಡೆದು, ದಮನೀಯ ಬದುಕು ಸಾಗಿಸುತ್ತಿರುವ ಬಿಸಿಯೂಟ ನೌಕರರಿಗೆ ಪ್ರಸ್ತುತ ಸಿಗುತ್ತಿರುವ ₹4,500 ವೇತನದಿಂದ ಬದುಕು ಸಾಗಿಸಲು ಖಂಡಿತ ಸಾಧ್ಯವಿಲ್ಲ. ಗೌರವಧನದ ಹೆಸರಿನಲ್ಲಿ ಅಗೌರವ ತೋರಿಸುತ್ತ ಮಾತೆ ಮಾತೆ ಎಂದು ಬೊಗಳೆ ಬಿಡುತ್ತ, ಬಿಸಿಯೂಟ ನೌಕರರಾದ ಎಲ್ಲ ಮಹಿಳೆಯರನ್ನೂ ಕೀಳಾಗಿ ಕಾಣುವ ಕೇಂದ್ರ ಸರ್ಕಾರದ ವಿರುದ್ಧ ಸಮರಧೀರ ಹೋರಾಟಕ್ಕೆ ಅಣಿಯಾಗಬೇಕು” ಎಂದು ಕರೆ ನೀಡಿದರು.

CITU ದ ಕ ಜಿಲ್ಲಾ ಪ್ರದಾನ ಕಾರ್ಯದರ್ಶಿ ಸುನಿಲ್ ಕುಮಾರ್ ಬಜಾಲ್ ಮಾತನಾಡಿ, “2001ರಲ್ಲಿ ಜಾರಿಗೆ ಬಂದತಹ ಬಿಸಿಯೂಟ ಯೋಜನೆಗೆ 2014ರಲ್ಲಿ ಅಧಿಕಾರಕ್ಕೇರಿದ ನರೇಂದ್ರ ಮೋದಿ ಸರ್ಕಾರವು ನಿರಂತರವಾಗಿ ತನ್ನ ಪಾಲನ್ನು ಕಡಿತಗೊಳಿಸುತ್ತ ಬಂದಿದೆ. ದೇಶಾದ್ಯಂತ 26ಕ್ಕೂ ಅಧಿಕ ಬಿಸಿಯೂಟ ನೌಕರರು, ಸರ್ಕಾರದ ಆದೇಶದಲ್ಲಿ 4 ಗಂಟೆಯ ಕೆಲಸವೆಂದು ಹೇಳಿದ್ದು, 8 ಗಂಟೆಯಷ್ಟು ದುಡಿಯುತ್ತಿದ್ದರೂ ಕೂಡ ಸರ್ಕಾರಗಳು ಮಾತ್ರ ದಿವ್ಯಮೌನ ವಹಿಸಿದೆ” ಎಂದು ಆಕ್ರೋಶ ವ್ಯಕ್ತಪಡಿಸಿದರು.

ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ಗೌರವಾಧ್ಯಕ್ಷೆ ಪದ್ಮಾವತಿ ಶೆಟ್ಟಿಯವರು ಪ್ರಾಸ್ತಾವಿಕವಾಗಿ ಮಾತನಾಡಿ, “ಮುಂಬರುವ ಬಜೆಟ್ನಲ್ಲಿ ಕನಿಷ್ಠ ವೇತನ ಜಾರಿಯಾಗಬೇಕು. ಯಾವುದೇ ಕಾರಣಕ್ಕೂ ಬಿಸಿಯೂಟ ಯೋಜನೆಯನ್ನು ಖಾಸಗಿ ಸಂಸ್ಥೆಗಳಿಗೆ ಗುತ್ತಿಗೆ ನೀಡಬಾರದು. ILC ಶಿಫಾರಸಿನಂತೆ ಖಾಯಂ ಉದ್ಯೋಗಸ್ಥರಂತೆ ಪರಿಗಣಿಸಿ ಎಲ್ಲ ಶಾಸನಬದ್ಧ ಸವಲತ್ತುಗಳನ್ನು ನೀಡಬೇಕು” ಎಂಬುದು ಸೇರಿದಂತೆ ಹಲವು ಬೇಡಿಕೆಗಳ ಬಗ್ಗೆ ಗಮನ ಸೆಳೆದರು.
ಈ ಸುದ್ದಿ ಓದಿದ್ದೀರಾ? ಕೃಷಿ ಜೊತೆಗೆ ಆಹಾರ ಸಂಸ್ಕರಣಾ ಘಟಕ ಉದ್ದಿಮೆ ಸ್ಥಾಪಿಸಿ
ಹೋರಾಟವನ್ನು ಬೆಂಬಲಿಸಿ ಬೀಡಿ ಕಾರ್ಮಿಕರ ಸಂಘಟನೆಯ ಜಿಲ್ಲಾ ನಾಯಕ ಜಯಂತ ನಾಯಕ್, ಸಮುದಾಯ ಸಂಘಟನೆಯ ಹಿರಿಯ ನಾಯಕ ವಾಸುದೇವ ಉಚ್ಚಿಲ್ ಅವರು ಮಾತನಾಡಿದರು.
ಪ್ರತಿಭಟನೆಯಲ್ಲಿ CITU ಜಿಲ್ಲಾ ನಾಯಕರಾದ ಯೋಗೀಶ್ ಜಪ್ಪಿನಮೊಗರು, ಸುಂದರ ಕುಂಪಲ, ಪ್ರಮೋದಿನಿ, ಬಿಸಿಯೂಟ ನೌಕರರ ಸಂಘಟನೆಯ ಜಿಲ್ಲಾ ನಾಯಕಿಯರಾದ ರೇಖಾಲತಾ, ಬಬಿತಾ, ಲೀಲಾವತಿ, ಮೋಹಿನಿ, ಶೋಭಾ, ಸುಶೀಲಾ, ಚಿತ್ರಾವತಿ, ಸಬೀನಾ ಸೇರಿದಂತೆ ಮುಂತಾದವರು ಇದ್ದರು.





