ಅಧಿಕಾರಿಗಳ ನಿರ್ಲಕ್ಷ್ಯದಿಂದ ತೀವ್ರ ಮಾನಸಿಕ ಒತ್ತಡಕ್ಕೆ ಒಳಗಾಗಿ, ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಬಗರ್ ಹುಕುಂ ಹಕ್ಕುಪತ್ರಕ್ಕಾಗಿ ನಿರಂತರ ಹೋರಾಟ ಮಾಡಿಕೊಂಡು ಬರುತ್ತಿದ್ದ ಬಡ ರೈತರೊಬ್ಬರು ನಿಧನರಾಗಿರುವ ಹೃದಯವಿದ್ರಾವಕ ಘಟನೆ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದಲ್ಲಿ ನಡೆದಿದೆ.
ಬಬಲಾದ ಗ್ರಾಮದ ನಿವಾಸಿ ಕಲ್ಲಪ್ಪ ದುಂಡಪ್ಪ ಹರಿಜನ ಮೃತಪಟ್ಟ ಬಡ ರೈತ. ಇವರು ಬಡತನ ಮತ್ತು ಸಾಗುವಳಿ ಜಮೀನಿನನ್ನು ಕಳೆದುಕೊಳ್ಳುವ ಆತಂಕದಿಂದ ಬಳಲುತ್ತಿದ್ದು, ರಕ್ತದೊತ್ತಡ(BP) ಏರುಪೇರಾದ ಹಿನ್ನೆಲೆಯಲ್ಲಿ ಅಕ್ಟೋಬರ್ 29ರಂದು ವಿಜಯಪುರದ ಶ್ರೀ ಸಾಯಿ ಆಸ್ಪತ್ರೆಯಲ್ಲಿ ಕೊನೆ ಉಸಿರೆಳೆದಿದ್ದಾರೆ.
ಘಟನೆಯ ವಿವರಗಳು:
ಕಲ್ಲಪ್ಪ ಹರಿಜನ ಅವರ ಕುಟುಂಬವು ಕಳೆದ 22 ವರ್ಷಗಳಿಗೂ ಹೆಚ್ಚು ಕಾಲ ವಿಜಯಪುರ ಜಿಲ್ಲೆಯ ಇಂಡಿ ತಾಲೂಕಿನ ಬಬಲಾದ ಗ್ರಾಮದ ಸರ್ವೇ ನಂಬರ್ 355ರಲ್ಲಿನ 4 ಎಕರೆ 38 ಗುಂಟೆ ಜಮೀನನ್ನು ಸಾಗುವಳಿ ಮಾಡುತ್ತ ಜೀವನ ಸಾಗಿಸುತ್ತಿತ್ತು. ಬಡ ಕುಟುಂಬದ ಆಧಾರವಾಗಿದ್ದ ಈ ಜಮೀನಿನ ಹಕ್ಕುಪತ್ರಕ್ಕಾಗಿ 2019ರಂದು ಕಲ್ಲಪ್ಪ ಅವರ ಪತ್ನಿ ಬಾಯಿಜಾಬಾಯಿ ಅವರ ಹೆಸರಿನಲ್ಲಿ ನಮೂನೆ 57ರಡಿ ಬಗರ್ ಹುಕುಂ ಅರ್ಜಿಯನ್ನು ಸಲ್ಲಿಸಲಾಗಿತ್ತು.
2021ರಲ್ಲಿ ಗ್ರಾಮದ ತಹಶೀಲ್ದಾರ್ ಸಿಬ್ಬಂದಿ(ತಲಾಟಿ) ಬಂದು ಜಮೀನನ್ನು ಪರಿಶೀಲಿಸಿ, ಜಿಪಿಎಸ್(GPS) ಮೂಲಕ ಅಳತೆ ಕಾರ್ಯವನ್ನೂ ನಡೆಸಿದ್ದರು. ಇದರಿಂದ ಹಕ್ಕುಪತ್ರ ಸಿಗುವ ಭರವಸೆ ಈ ಕುಟುಂಬದಲ್ಲಿ ಮೂಡಿತ್ತು. ಆದರೆ, 2022ರಲ್ಲಿ ಸರ್ವೇ ನಂಬರ್ 355ರಲ್ಲಿ ‘ಮುಪತ ಗೈರಾಣ’ ಎಂದು ಇದ್ದ ಜಮೀನನ್ನು ಏಕಾಏಕಿ ‘ಪಶುಸಂಗೋಪನೆ’ ಇಲಾಖೆಯ ಹೆಸರಿಗೆ ಉತಾರೆಯಲ್ಲಿ ವರ್ಗಾವಣೆ ಮಾಡಲಾಗಿತ್ತು. ಇದು ರೈತ ಕಲ್ಲಪ್ಪ ಹರಿಜನ ಅವರಿಗೆ ಅತೀವ ನೋವು ಮತ್ತು ಮಾನಸಿಕ ಕೊರಗಿಗೆ ಕಾರಣವಾಗಿತ್ತು.

ತೀವ್ರವಾಗಿ ಮನನೊಂದಿದ್ದ ಕಲ್ಲಪ್ಪ ಹರಿಜನ ಅವರು ಜಮೀನಿನ ಹಕ್ಕುಪತ್ರಕ್ಕಾಗಿ ಇಂಡಿ ತಾಲೂಕಿನ ಸಹಾಯಕ ಆಯುಕ್ತರು(AC), ತಹಶೀಲ್ದಾರ್, ಸ್ಥಳೀಯ ಶಾಸಕರು(MLA) ಮತ್ತು ಜಿಲ್ಲಾಧಿಕಾರಿ(DC)ಯವರಿಗೆ ಹಲವಾರು ಬಾರಿ ಮನವಿ ಪತ್ರಗಳನ್ನು ಸಲ್ಲಿಸಿದ್ದರು.
ಈ ಸುದ್ದಿ ಓದಿದ್ದೀರಾ? ಜಮಖಂಡಿ | ಪ್ರತಿ ಟನ್ ಕಬ್ಬಿಗೆ 3,500 ರೂ. ದರ ನಿಗದಿಗೆ ರೈತರ ಆಗ್ರಹ: ಬೃಹತ್ ಪ್ರತಿಭಟನೆ
ದುರದೃಷ್ಟವಶಾತ್, ಯಾವುದೇ ಅಧಿಕಾರಿಗಳಿಂದ ಸಕಾಲಿಕ ಪ್ರತಿಕ್ರಿಯೆ ಅಥವಾ ಪರಿಹಾರ ದೊರೆಯಲಿಲ್ಲ. ಅಧಿಕಾರಿಗಳ ಇಂತಹ ನಿರ್ಲಕ್ಷ್ಯವು ಕಲ್ಲಪ್ಪ ಹರಿಜನ ಅವರನ್ನು ತೀವ್ರ ಮಾನಸಿಕ ಆಘಾತಕ್ಕೆ ದೂಡಿತ್ತು.
“ಬಡತನದಿಂದ ಬಳಲುತ್ತಿದ್ದ ಕುಟುಂಬದ ಆಧಾರ ಸ್ತಂಭವಾಗಿದ್ದ ಕಲ್ಲಪ್ಪ ಅವರು ಹಕ್ಕುಪತ್ರ ಸಿಗುವ ಮುನ್ನವೇ ಮೃತಪಟ್ಟಿರುವುದು ಅತ್ಯಂತ ದುರದೃಷ್ಟಕರ. ಸಂಬಂಧಪಟ್ಟ ಜಿಲ್ಲಾಡಳಿತ ಮತ್ತು ಸರ್ಕಾರವು ಈ ವಿಷಯವನ್ನು ಗಂಭೀರವಾಗಿ ಪರಿಗಣಿಸಿ, ಮೃತರ ಕುಟುಂಬಕ್ಕೆ ನ್ಯಾಯ ಒದಗಿಸಬೇಕು ಹಾಗೂ ಅವರು ದಶಕಗಳಿಂದ ಸಾಗುವಳಿ ಮಾಡುತ್ತಿದ್ದ ಜಮೀನಿನ ಹಕ್ಕುಪತ್ರವನ್ನು ಕೂಡಲೇ ಬಾಯಿಜಾಬಾಯಿ ಅವರ ಹೆಸರಿಗೆ ಮಂಜೂರು ಮಾಡಬೇಕು” ಎಂದು ಕುಟುಂಬಸ್ಥರು ಒತ್ತಾಯಿಸಿದ್ದಾರೆ.





