ಇಂಡಿ ತಾಲೂಕಿನ ಪ್ರತಿ ಗ್ರಾಮದಲ್ಲೂ ಸ್ಮಶಾನ ಭೂಮಿಗಳು ಇದ್ದರೂ ಸ್ಮಶಾನ ಭೂಮಿಗೆ ಬೇಡಿಕೆ ಏಕೆ ಬಂದಿದೆ ಎಂಬುದನ್ನು ಸಾರ್ವಜನಿಕರು ಆತ್ಮಾವಲೋಕನ ಮಾಡಿಕೊಳ್ಳಬೇಕು ಎಂಬ ಚರ್ಚೆ ಎಸ್ಸಿ/ಎಸ್ಟಿ ಕುಂದು ಕೊರತೆ ಸಭೆಯಲ್ಲಿ ನಡೆಯಿತು.
ವಿಜಯಪುರ ಜಿಲ್ಲೆಯ ಇಂಡಿ ತಾಲೂಕು ಪೊಲೀಸ್ ಉಪ ವಿಭಾಗಾಧಿಕಾರಿಗಳ ಸಭಾ ಭವನದಲ್ಲಿ ಪೊಲೀಸ್ ಉಪವಿಭಾಗ ಅಧಿಕಾರಿ ಜಗದೀಶ ಅವರ ಅಧ್ಯಕ್ಷತೆಯಲ್ಲಿ ನಡೆದ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡದ ಕುಂದುಕೊರತೆ ಸಭೆಯಲ್ಲಿ ಚರ್ಚೆಯಾಯಿತು.
ಬಹುತೇಕ ಗ್ರಾಮಗಳಲ್ಲಿ ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡ ಸಮುದಾಯದವರಿಗೆ ಅಂತ್ಯ ಸಂಸ್ಕಾರ ಮಾಡಲು ಅವಕಾಶವಿರುವುದಿಲ್ಲ. ಹೀಗಾಗಿ ಸ್ಮಶಾನ ಭೂಮಿ ಬೇಡಿಕೆ ಹೆಚ್ಚಾಗಿದೆ ಎಂಬುದು ಸಭೆಯಲ್ಲಿ ಪ್ರಸ್ತಾಪವಾಯಿತು.
ತಾಲೂಕಿನ ಗ್ರಾಮಗಳಲ್ಲಿ ಇರುವ ಸ್ಮಶಾನ ಭೂಮಿಗಳಿಗೆ ಸಾರ್ವಜನಿಕ ಸ್ಮಶಾನಭೂಮಿ ಎಂದು ನಾಮಫಲಕ ಅಳವಡಿಸಲು ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಸಮುದಾಯ ಭವನಗಳನ್ನು ಗ್ರಂಥಾಲಯಗಳನ್ನಾಗಿ ಪರಿವರ್ತಿಸಬೇಕೆಂದು ದೌರ್ಜನ್ಯ ಸಮಿತಿ ಸದಸ್ಯ ಬಾಬು ಗುಡಿಮಿ ಅಧಿಕಾರಿಗಳಿಗೆ ಒತ್ತಾಯಿಸಿದರು.
ಇದಕ್ಕೆ ಉತ್ತರಿಸಿದ ತಾಲೂಕು ಸಮಾಜ ಕಲ್ಯಾಣ ಅಧಿಕಾರಿ ಉಮೇಶ್ ಲಮಾಣಿ, “ಜಾತಿವಾರು ಸ್ಮಶಾನಭೂಮಿ ಮಾಡಲು ಅವಕಾಶವಿರುವುದಿಲ್ಲ. ಸಾರ್ವಜನಿಕ ಸ್ಮಶಾನ ಭೂಮಿಯಲ್ಲಿ ಎಲ್ಲರಿಗೂ ಅಂತ್ಯಸಂಸ್ಕಾರ ಮಾಡಲು ಅವಕಾಶ ಇದೆ. ಸ್ಥಳೀಯವಾಗಿ ಯಾರಾದರೂ ಸಮಸ್ಯೆ ಮಾಡಿದರೆ ಅದನ್ನು ನಮ್ಮ ಗಮನಕ್ಕೆ ತಂದರೆ ಪರಿಹರಿಸುತ್ತೇವೆ” ಎಂದು ಮಾಹಿತಿ ನೀಡಿದರು.
ಡಿವೈಎಸ್ಪಿ ಜಗದೀಶ ಮಾತನಾಡಿ, “ಎಲ್ಲ ಸಮುದಾಯದವರೂ ಸೌಜನ್ಯದಿಂದ ಬದುಕಬೇಕು. ಮಾನವೀಯತೆ ವಿರುದ್ಧ ಯಾರೂ ಕೆಲಸ ಮಾಡಬಾರದು. ಜಿಲ್ಲೆಯನ್ನು ಅಪರಾಧ ಮುಕ್ತ ಮಾಡಲು ಇಲಾಖೆ ಶ್ರಮಿಸುತ್ತಿದೆ. ಇದಕ್ಕೆ ಸಾರ್ವಜನಿಕರ ಸಹಕಾರ ಅಗತ್ಯ” ಎಂದರು.
ಇದನ್ನೂ ಓದಿದ್ದೀರಾ? ಬೆಂಗಳೂರು | ವಿಳಾಸ ತಪ್ಪಾಗಿದ್ದಕ್ಕೆ ವಾಗ್ವಾದ: ಹಲ್ಲೆ ನಡೆಸಿ ಪರಾರಿಯಾಗಿದ್ದ ಡೆಲಿವರಿ ಬಾಯ್ ವಿರುದ್ಧ ಎಫ್ಐಆರ್
“ಉಪವಿಭಾಗದ ಎಲ್ಲ ಕಡೆ ಕುಂದು ಕೊರತೆ ಸಭೆ ನಡೆಯುತ್ತಿದ್ದು, ಗ್ರಾಮೀಣ ಭಾಗಗಳಲ್ಲಿ ಸಮಸ್ಯೆ ಇದ್ದಲ್ಲಿ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಂತೆಯೇ ತಮ್ಮ ಸಮಸ್ಯೆಗಳಿದ್ದರೆ ಸಭೆಯ ಗಮನಕ್ಕೆ ತರಬೇಕು” ಎಂದು ಹೇಳಿದರು.
ಸಭೆಯಲ್ಲಿ ವಿನಾಯಕ ಗುಣಸಾಗರ, ಮಲ್ಲಿಕಾರ್ಜುನ ಮಡ್ಡಿಮನಿ, ಸುರೇಶ ನಡುಗಡ್ಡಿ, ಚಂಡಾರಶೇಖರ ಹೊಸಮನಿ, ಧರ್ಮರಾಜ ಸಾಲೋಟಗಿ, ನಾಗೇಂದ್ರ ಮೇತ್ರಿ, ಯಲ್ಲಪ್ಪ ಬಂದಿವಡ್ಡರ, ಹುಚ್ಚಪ್ಪ ತಳವಾರ, ಧರ್ಮ ವಾಲಿಕಾರ ಸೇರಿದಂತೆ ಜಿಲ್ಲೆಯ ಪೊಲೀಸ್ ಅಧಿಕಾರಿಗಳು ಇದ್ದರು.





