ಸ್ವಚ್ಛ ಭಾರತ ಮಿಷನ್ ಯೋಜನೆಯಡಿ ಶಿರಸಿ ನಗರವನ್ನು ಸ್ವಚ್ಛತೆಯತ್ತ ಮುನ್ನಡೆಸುವ ಪ್ರಯತ್ನದಲ್ಲಿ ಮತ್ತೊಂದು ಮಹತ್ವದ ಹೆಜ್ಜೆಯಾಗಿ, ನಗರಸಭೆಯ ಕಚೇರಿಯಲ್ಲಿ ಇಂದೋರ್ ಮಾದರಿಯ ‘ಕಮಾಂಡ್ ರೂಮ್’ ಅನ್ನು ಉದ್ಘಾಟಿಸಲಾಯಿತು. ಈ ವ್ಯವಸ್ಥೆಯ ಮೂಲಕ ನಗರಸಭೆಯ ಕಸ ವಿಲೇವಾರಿ ವಾಹನಗಳ ಚಲನವಲನವನ್ನು ನೈಜ ಸಮಯದಲ್ಲಿ (ರಿಯಲ್ ಟೈಮ್) ನಿಗಾವಹಿಸಲು ಸಾಧ್ಯವಾಗಲಿದೆ.
ನಗರಸಭಾ ಅಧ್ಯಕ್ಷೆ ಶರ್ಮಿಳಾ ಮಾದನಗೇರಿ ಕಮಾಂಡ್ ರೂಮ್ ಉದ್ಘಾಟಿಸಿ ಮಾತನಾಡಿ, “ಈ ಹೊಸ ವ್ಯವಸ್ಥೆಯು ನಗರದಾದ್ಯಂತ ಕಸ ಸಂಗ್ರಹಣಾ ವಾಹನಗಳ ಕಾರ್ಯಕ್ಷಮತೆ ಹಾಗೂ ನಿಗದಿತ ಮಾರ್ಗಗಳ ಮೇಲ್ವಿಚಾರಣೆಗೆ ನೆರವಾಗುತ್ತದೆ. ಕಸ ವಿಲೇವಾರಿ ಪ್ರಕ್ರಿಯೆ ಯಾವುದೇ ಅಸಮರ್ಪಕತೆ ಇಲ್ಲದೆ ನಡೆಯುವಂತೆ ಖಚಿತಪಡಿಸಿಕೊಳ್ಳಲು ಇದು ಸಹಕಾರಿಯಾಗಲಿದೆ. ಸ್ವಚ್ಛ ಮತ್ತು ಆರೋಗ್ಯಕರ ಶಿರಸಿ ನಿರ್ಮಾಣಕ್ಕೆ ನಗರಸಭೆ ಬದ್ಧವಾಗಿದೆ” ಎಂದು ಹೇಳಿದರು.
ಇಂದೋರ್ ಮಾದರಿಯಲ್ಲಿ ಸ್ಥಾಪಿಸಲಾದ ಈ ಕಮಾಂಡ್ ರೂಮ್ನಿಂದ ಕಸ ಸಂಗ್ರಹಣಾ ಕಾರ್ಯ ಇನ್ನಷ್ಟು ದಕ್ಷತೆ, ಪಾರದರ್ಶಕತೆ ಮತ್ತು ಹೊಣೆಗಾರಿಕೆಯಿಂದ ನಡೆಯಲಿದೆ ಎಂದು ಅಧಿಕಾರಿಗಳು ತಿಳಿಸಿದರು.
ಈ ಸುದ್ದಿ ಓದಿದ್ದೀರಾ? ಶಿರಸಿ | ಮಳೆ ಬಂದರೆ ಹೊಂಡ, ಬಿಸಿಲಾದ್ರೆ ಧೂಳು: ಭೀಮಘರ್ಜನೆಯ ವಿಡಿಯೋ ವೈರಲ್
ಕಾರ್ಯಕ್ರಮದಲ್ಲಿ ಉಪಾಧ್ಯಕ್ಷ ರಮಾಕಾಂತ ಭಟ್, ಸ್ಥಾಯಿ ಸಮಿತಿ ಅಧ್ಯಕ್ಷ ರಾಘವೇಂದ್ರ ವಿಶ್ವೇಶ್ವರ ಶೆಟ್ಟಿ, ಪೌರಾಯುಕ್ತ ಪ್ರಕಾಶ ಚನ್ನಪ್ಪನವರ, ಸಹಾಯಕ ಕಾರ್ಯಪಾಲಕ ಅಭಿಯಂತರ (ಪರಿಸರ) ಶಿವರಾಜ ಕನಕಪ್ಪನವರ ಸೇರಿದಂತೆ ಸದಸ್ಯರಾದ ಶಮಿಮ್ ಬಾನು, ರುಬೆಕಾ ಫರ್ನಾಂಡಿಸ್, ಶಾರದಾ ಶೇಟ್, ಶ್ರೀಕಾಂತ ಬಳ್ಳಾರಿ, ವನಿತಾ ಶೇಟ್, ಮುಕ್ತಾ ಶೆಟ್ಟಿ, ತಾರಾ ನಾಯ್ಕ ಮತ್ತು ಗೀತಾ ಶೆಟ್ಟಿಯವರು ಉಪಸ್ಥಿತರಿದ್ದರು.





